
ಬೆಂಗಳೂರು: ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರು ಟೆಕ್ಕಿ ವಿಕಾಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಭಾರತೀಯ ವಾಯುಪಡೆ(ಐಎಎಫ್) ಮಂಗಳವಾರ ತಿಳಿಸಿದೆ.
"ಭಾರತೀಯ ವಾಯುಪಡೆಯ(IAF) ಅಧಿಕಾರಿಯೊಬ್ಬರನ್ನು ಒಳಗೊಂಡ ದುರದೃಷ್ಟಕರ ಘಟನೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣವನ್ನು ತನಿಖೆ ಮಾಡಲು ಮತ್ತು ಕಾನೂನುಬದ್ಧ ಕ್ರಮ ತೆಗೆದುಕೊಳ್ಳಲು IAF ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ" ಎಂದು IAF ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪೊಲೀಸರ ಪ್ರಕಾರ, 40 ವರ್ಷದ IAF ಅಧಿಕಾರಿಯ ವಿರುದ್ಧ ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ ಮತ್ತು ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಆರೋಪದ ಮೇಲೆ FIR ದಾಖಲಿಸಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಸಾಫ್ಟ್ವೇರ್ ಕಂಪನಿಯ ಕಾಲ್ ಸೆಂಟರ್ನಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿರುವ ವಿಕಾಸ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಬಳಿಕ ಸಿಸಿಟಿವಿಯಲ್ಲಿ ವಿಂಗ್ ಕಮಾಂಡರ್ನ ಕ್ರೌರ್ಯ ಗೊತ್ತಾಗುತ್ತಿದ್ದಂತೆಯೇ ಶಿಲಾದಿತ್ಯ ವಿರುದ್ಧವೇ ಕೊಲೆ ಯತ್ನ ಪ್ರಕರಣ ದಾಖಸಿಕೊಂಡಿದ್ದಾರೆ. ಸದ್ಯ ಯುವಕ ವಿಕಾಸ್ನನ್ನು ಪೊಲೀಸರು ಸ್ಟೇಷನ್ ಬೇಲ್ ಮೇಲಿ ಬಿಟ್ಟು ಕಳುಹಿಸಿದ್ದಾರೆ.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರು ತಮ್ಮ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಬೈಕ್ನಲ್ಲಿ ಬೆನ್ನಟ್ಟಿದ ಕನ್ನಡ ಮಾತನಾಡುವ ವ್ಯಕ್ತಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ವಿಂಗ್ ಕಮಾಂಡರ್ ಶಿಲಾದಿತ್ಯ ಅವರು ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ತಮ್ಮ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ, ಬಳಿಕ ತಾನು ಕನ್ನಡ ಮಾತನಾಡದಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗಂಟಾಘೋಷವಾಗಿ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದರು. ಆದರೆ CCTV ದೃಶ್ಯ ರಿಲೀಸ್ ಆಗುತ್ತಿದ್ದಂತೆ ವಿಂಗ್ ಕಮಾಂಡ್ ಶಿಲಾದಿತ್ಯನ ನೌಟಂಕಿ ನಾಟಕ ಬಯಲಾಗಿದೆ.
ಐಎಎಫ್ ಅಧಿಕಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಕಾಸ್ ಕುಮಾರ್ ನೀಡಿದ ಪ್ರತಿ ದೂರಿನ ಆಧಾರದ ಮೇಲೆ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109 (ಕೊಲೆ ಯತ್ನ), 115 (2) (ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 304 (ಕಳ್ಳತನ), 324 (ಕಿಡಿಗೇಡಿತನ), 351 (ಕ್ರಿಮಿನಲ್ ಬೆದರಿಕೆ) ಮತ್ತು 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಶಿಲಾದಿತ್ಯ ಬೋಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ದೇವರಾಜ್ ಡಿ. ತಿಳಿಸಿದ್ದಾರೆ.
ಎರಡೂ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement