
ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಿಯರನ್ನು ಸ್ವಂತದವರಂತೆ, ಭಾರತೀಯರನ್ನು ಅಪರಿಚಿತರಂತೆ ನೋಡುತ್ತಾರೆಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮಂಗಳವಾರ ಕಿಡಿಕಾರಿದ್ದಾರೆ.
ಅಮೆರಿಕದ ಬಾಸ್ಟನ್ ನಗರಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರು, ಕಾರ್ಯಕ್ರಮವೊಂದರಲ್ಲಿ ಭಾರತದ ಚುನಾವಣಾ ಆಯೋಗದ (ಇಸಿಐ) ಕಾರ್ಯವೈಖರಿ ಬಗ್ಗೆ ಆಕ್ಷೇಪ ಎತ್ತಿದ್ದರು,
ಮಹಾರಾಷ್ಟ್ರದಲ್ಲಿನ ವಯಸ್ಕ ಜನಸಂಖ್ಯೆಗಿಂತ ಹೆಚ್ಚಿನ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಇದು ಹೇಗೆ ಸಾಧ್ಯ? ವಿಧಾನಸಭೆ ಚುನಾವಣೆ ದಿನ ಸಂಜೆ 5.30ರ ಹೊತ್ತಿಗೆ ಚುನಾವಣಾ ಆಯೋಗವು ನಮಗೆ ಮತದಾನದ ವಿವರಗಳನ್ನು ಆಯೋಗವು ನೀಡಿತು. ಆ ಬಳಿಕ 5.30 ರಿಂದ 7.30ರ ನಡುವೆ 65 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಇದು ವಾಸ್ತವವಾಗಿ ಕಷ್ಟಸಾಧ್ಯ. 'ಒಬ್ಬ ವ್ಯಕ್ತಿಯ ಮತದಾನಕ್ಕೆ ಸರಾಸರಿಯಾಗಿ ಕನಿಷ್ಠ 3 ನಿಮಿಷಗಳು ಬೇಕು. 65 ಲಕ್ಷ ಮತದಾರರು ಮತ ಚಲಾಯಿಸಿದ್ದರೆ, ಆ ದಿನ ನಸುಕಿನ 2 ಗಂಟೆಯವರೆಗೆ ಮತದಾನ ನಡೆಯಬೇಕಿತ್ತು. ಆ ರೀತಿ ಆಗಲಿಲ್ಲ.
ಮತಗಟ್ಟೆಯಲ್ಲಿನ ಮತದಾನದ ಪ್ರಕ್ರಿಯೆ ವೇಳೆ ಚಿತ್ರೀಕರಿಸಲಾದ ವಿಡಿಯೋ ತೋರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ಆಯೋಗವು ನಿರಾಕರಿಸಿದ್ದಲ್ಲದೇ ಕಾನೂನು ಬದಲಾಯಿಸಿ ವಿಡಿಯೋಗ್ರಫಿಯ ಬಗ್ಗೆ ನಾವು ಕೇಳದಂತೆಯೇ ಮಾಡಲಾಯಿತು ಎಂದು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಶವ್ ಪ್ರಸಾದ್ ಮೌರ್ಯ ಅವರು, ರಾಹುಲ್ ಗಾಂಧಿಗೆ ವಿದೇಶಿಯರು ಅವರ ಸ್ವಂತವರಿದ್ದಂತೆ, ಭಾರತೀಯರು ಅಪರಿಚಿತರಾಗಿದ್ದಾರೆ. ಕಹಿ ಸತ್ಯವೆಂದರೆ ಅವರು, ತಮ್ಮ ನಾಯಕತ್ವ ಕೌಶಲ್ಯದ ಕೊರತೆಯನ್ನು ಮರೆಮಾಡಲು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಸಂವಿಧಾನದ ಪ್ರತಿಯೊಂದಿಗೆ ಸುತ್ತಾಡುತ್ತಿದ್ದಾರೆ, ಆದರೆ, ಅದರಿಂದ ಪ್ರಯೋಜನವಾಗುವುದಿಲ್ಲ. ದೇಶ ಅಥವಾ ವಿದೇಶಗಳಲ್ಲಿ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಹುಲ್ ಅವರನ್ನು ಗಂಭೀರವಲ್ಲದ ನಾಯಕನೆಂದು ನೋಡಲಾಗುತ್ತದೆ. ಅವರ ಪಕ್ಷದ ನಾಯಕರು ಕೂಡ ಇದೇ ರೀತಿಯಾದ ಹೇಳಿಕೆಗಳನ್ನು ನೀಡುತ್ತಾರೆ. 50ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸೋತಿದ್ದರೂ, ಕಾಂಗ್ರೆಸ್ ಪಕ್ಷದಿಂದ ಯಾರೂ ಗಾಂಧಿ ಕುಟುಂಬವನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Advertisement