
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 12 ಪ್ರವಾಸಿಗರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಸರನ್ನಲ್ಲಿ ಈ ದಾಳಿ ನಡೆದಿದೆ. ಇದು ಕಾಲ್ನಡಿಗೆ ಅಥವಾ ಕುದುರೆಗಳ ಮೂಲಕ ಮಾತ್ರ ಪ್ರವೇಶಿಸಬಹುದಾದ ಹುಲ್ಲುಗಾವಲು ಪ್ರದೇಶವಾಗಿದ್ದು, ಇಂದು ಬೆಳಿಗ್ಗೆ ಪ್ರವಾಸಿಗರ ಗುಂಪೊಂದು ಅಲ್ಲಿಗೆ ಭೇಟಿ ನೀಡಿತ್ತು ಎಂದು ಅವರು ಹೇಳಿದರು.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಅಪರಿಚಿತ ಬಂದೂಕುಧಾರಿಗಳು ಪ್ರವಾಸಿಗರ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡರು ಎಂದಿದ್ದಾರೆ.
'ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನನ್ನ ಗಂಡನ ತಲೆಗೆ ಗುಂಡು ತಗುಲಿದೆ ಮತ್ತು ಇತರ ಏಳು ಜನರು ಗಾಯಗೊಂಡಿದ್ದಾರೆ' ಸಂತ್ರಸ್ತ ಮಹಿಳೆಯೊಬ್ಬರು ಫೋನ್ ಮೂಲಕ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆ ಮಹಿಳೆ ಯಾರೆಂಬುದು ಪತ್ತೆಯಾಗದಿದ್ದರೂ, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡುವಂತೆ ಅಂಗಲಾಚಿದ್ದಾರೆ.
ಗಾಯಾಳುಗಳ ಸ್ಥಳಾಂತರಕ್ಕಾಗಿ ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಬಳಿಸಿದ್ದಾರೆ. ಕೆಲವು ಗಾಯಾಳುಗಳನ್ನು ಸ್ಥಳೀಯ ಜನರು ತಮ್ಮ ಕುದುರೆಗಳ ಮೇಲೆ ಹುಲ್ಲುಗಾವಲಿನಿಂದ ಕೆಳಗೆ ಇಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಯಗೊಂಡ 12 ಪ್ರವಾಸಿಗರನ್ನು ಅಲ್ಲಿಗೆ ದಾಖಲಿಸಲಾಗಿದ್ದು, ಅವರೆಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಪಹಲ್ಗಾಮ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿದ ನಂತರ ಭದ್ರತಾ ಪಡೆಗಳು ಪಹಲ್ಗಾಮ್ ಪ್ರವಾಸಿ ಪಟ್ಟಣದ ಬೈಸರನ್ ಹುಲ್ಲುಗಾವಲುಗಳಿಗೆ ಧಾವಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದ್ದಾರೆ.
Advertisement