
ಗುವಾಹಟಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ಪೈಶಾಚಿಕ ದಾಳಿಯಲ್ಲಿ ಮೃತಪಟ್ಟ 26 ಜನರಲ್ಲಿ ಅರುಣಾಚಲ ಪ್ರದೇಶದ ಭಾರತೀಯ ವಾಯುಪಡೆಯ ಅಧಿಕಾರಿಯೂ ಸೇರಿದ್ದಾರೆ.
ಶ್ರೀನಗರದ ವಾಯು ನೆಲೆಯಲ್ಲಿ ನಿಯೋಜಿತರಾಗಿದ್ದ ಕಾರ್ಪೋರಲ್ ತೇಜ್ ಹೈಲ್ಯಾಂಗ್ (30) ವಿಹಾರಕ್ಕೆಂದು ಪತ್ನಿಯೊಂದಿಗೆ ಪಹಲ್ಗಾಮ್ಗೆ ತೆರಳಿದ್ದರು. ಕಳೆದ ಡಿಸೆಂಬರ್ನಲ್ಲಿ ಈ ಜೋಡಿ ಮದುವೆಯಾಗಿತ್ತು.
ಹೈಲ್ಯಾಂಗ್ ಅರುಣಾಚಲದ ಝಿರೋದ ತಾಜಾಂಗ್ ಗ್ರಾಮದವರು. ಅವರ ತಂದೆ ತೇಗೆ ತಾಡೆ ಗ್ರಾಮದ ಮುಖಂಡರಾಗಿದ್ದಾರೆ. ಅವರ ಸಹೋದರ ತೇಜ್ ಮಾಲಿ ಅವರು ಸೈನ್ಯದಲ್ಲಿದ್ದು, ಸದ್ಯ ಝಿರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಟನೆಯ ನಂತರ ಸಾವಿನ ಸುದ್ದಿ ತಿಳಿಯಿತು. ಹೈಲ್ಯಾಂಗ್ ಅವರ ಪತ್ನಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ಕರೆ ಮಾಡಿ ಘಟನೆಯ ಬಗ್ಗೆ ನಮಗೆ ತಿಳಿಸಿದರು. ಅವರಿಬ್ಬರು ಕಳೆದ ಡಿಸೆಂಬರ್ನಲ್ಲಿ ಮದುವೆಯಾಗಿದ್ದರು ಎಂದು ತೇಜ್ ಮಾಲಿ ತಿಳಿಸಿದರು.
ಹೈಲ್ಯಾಂಗ್ 8-9 ವರ್ಷಗಳ ಹಿಂದೆ humanities ನಲ್ಲಿ ಪದವಿ ಪಡೆದ ನಂತರ ಐಎಎಫ್ಗೆ ಸೇರಿದ್ದರು. ಪಾರ್ಥಿವ ಶರೀರವನ್ನು ವಿಮಾನದಲ್ಲಿ ಗುವಾಹಟಿಗೆ ತದನಂತರ ಹೆಲಿಕಾಪ್ಟರ್ನಲ್ಲಿ ಅರುಣಾಚಲಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು. ಉಗ್ರರ ಪೈಶಾಚಿಕ ದಾಳಿಯಲ್ಲಿ ವಾಯುಪಡೆ ಅಧಿಕಾರಿ ಬಲಿಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹೈಲ್ಯಾಂಗ್ ಧೈರ್ಯ ಮತ್ತು ಗೌರವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ಅಕಾಲಿಕ ಮರಣವು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸೇವೆ ಮತ್ತು ತ್ಯಾಗಕ್ಕಾಗಿ ನಾವು ಯಾವಾಗಲೂ ಅವರನ್ನು ಸ್ಮರಿಸುತ್ತೇವೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement