ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ನೋಟಿಸ್ ನೀಡಲು ದೆಹಲಿ ನ್ಯಾಯಾಲಯ ನಿರಾಕರಣೆ

ಈ ವಿಚಾರದಲ್ಲಿ ನ್ಯಾಯಾಲಯವು ಯಾವುದೇ ಆದೇಶವನ್ನು ನೀಡುವುದಕ್ಕೂ ಮುನ್ನ, ಯಾವುದೇ ನ್ಯೂನತೆ ಇದೆಯೇ ಎಂಬುದನ್ನು ನೋಡಬೇಕು ಎಂದು ನ್ಯಾಯಾಧೀಶರು ಹೇಳಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
Updated on

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರಿಗೆ ನೋಟಿಸ್ ನೀಡಲು ದೆಹಲಿ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.

ಏಪ್ರಿಲ್ 9ರಂದು ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗನೆ, ಹೊಸ ಕಾನೂನು ನಿಬಂಧನೆಗಳ ಅಡಿಯಲ್ಲಿ, ಆರೋಪಿಗಳಿಗೆ ಮೊದಲು ವಿಚಾರಣೆಗೆ ಅವಕಾಶ ನೀಡದೆ ನ್ಯಾಯಾಲಯವು ಅವರ ವಿರುದ್ಧದ ದೂರನ್ನು (ಚಾರ್ಜ್‌ಶೀಟ್‌ನಂತೆ) ಔಪಚಾರಿಕವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಿತು.

ಈ ಪ್ರಕರಣದಲ್ಲಿ ಯಾವುದೇ ವಿಳಂಬವನ್ನು ಬಯಸುವುದಿಲ್ಲ ಮತ್ತು ತ್ವರಿತವಾಗಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಬೇಕೆಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿತು. ಆದಾಗ್ಯೂ, ಮೊದಲು ನೋಟಿಸ್ ನೀಡುವುದು ಅಗತ್ಯ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅದರ ನಂತರವೇ ನ್ಯಾಯಾಲಯವು ಕಾನೂನುಬದ್ಧವಾಗಿ ಅಂತಹ ಆದೇಶವನ್ನು ನೀಡಬಹುದು ಎಂದು ನ್ಯಾಯಾಧೀಶರು ತಿಳಿಸಿದರು.

ಈ ವಿಚಾರದಲ್ಲಿ ನ್ಯಾಯಾಲಯವು ಯಾವುದೇ ಆದೇಶವನ್ನು ನೀಡುವುದಕ್ಕೂ ಮುನ್ನ, ಯಾವುದೇ ನ್ಯೂನತೆ ಇದೆಯೇ ಎಂಬುದನ್ನು ನೋಡಬೇಕು ಎಂದು ನ್ಯಾಯಾಧೀಶರು ಹೇಳಿದರು.

'ಅಹ್ಲ್ಮದ್' (ನ್ಯಾಯಾಲಯದ ದಾಖಲೆಗಳು ಮತ್ತು ಫೈಲ್‌ಗಳ ಪಾಲಕ) ಹೇಳಿರುವಂತೆ ಚಾರ್ಜ್‌ಶೀಟ್‌ನಲ್ಲಿ ಕೆಲವು ದಾಖಲೆಗಳು ಕಾಣೆಯಾಗಿವೆ. ಆ ದಾಖಲೆಗಳನ್ನು ಸಲ್ಲಿಸಲು ಇ.ಡಿಗೆ ನಿರ್ದೇಶಿಸಲಾಗಿದೆ. ಅದರ ನಂತರವೇ ನ್ಯಾಯಾಲಯವು ನೋಟಿಸ್ ನೀಡುವ ಬಗ್ಗೆ ನಿರ್ಧರಿಸುತ್ತದೆ' ಎಂದು ಹೇಳಿದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್, ಸ್ಯಾಮ್ ಪಿತ್ರೋಡಾ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕ್ರಮಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುತ್ತಿದ್ದೇವೆ. ತಾವು ಯಾವುದೇ ಮಾಹಿತಿಯನ್ನು ಮರೆಮಾಚುತ್ತಿಲ್ಲ ಮತ್ತು ನ್ಯಾಯಾಲಯವು ಅಧಿಕೃತವಾಗಿ ದೂರನ್ನು ಸ್ವೀಕರಿಸುವ ಮೊದಲು ಆರೋಪಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನ್ಯಾಯಯುತ ಅವಕಾಶವನ್ನು ನೀಡುತ್ತಿದ್ದೇವೆ ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.

ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯ ಆರೋಪ ಹೊರಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಏಪ್ರಿಲ್ 9ರಂದು ದೋಷಾರೋಪ ಪಟ್ಟಿ ಸಲ್ಲಿಸಿದೆ. ಕಾಂಗ್ರೆಸ್ ಮುಖಂಡರಾದ ಸ್ಯಾಮ್ ಪಿತ್ರೋಡಾ ಮತ್ತು ಸುಮನ್ ದುಬೆ ಅವರನ್ನು ಕೂಡ ಆರೋಪಿಗಳೆಂದು ಹೇಳಲಾಗಿದೆ.

ಹಣ ಅಕ್ರಮ ವರ್ಗಾವಣೆ ಕಾಯ್ದೆಯ (PMLA) ಸೆಕ್ಷನ್ 3 (ಹಣ ಅಕ್ರಮ ವರ್ಗಾವಣೆ) ಮತ್ತು ಸೆಕ್ಷನ್ 4 (ಹಣ ಅಕ್ರಮ ವರ್ಗಾವಣೆಗೆ ಶಿಕ್ಷೆ) ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com