
ಇಂದೋರ್: 26 ಮಂದಿ ಹಿಂದೂಗಳ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿರುವಂತೆಯೇ ಪಾಕಿಸ್ತಾನಿಯರ ವಿರುದ್ಧದ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಆಕ್ರೋಶ ಪ್ರತಿಭಟನೆ ಭುಗಿಲೆದ್ದಿದೆ. ಜನ ಬೀದಿಗಿಳಿದು ಪಾಕಿಸ್ತಾನಿ ಪ್ರಾಯೋಜಿತ ಉಗ್ರ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸುತ್ತಿದ್ದಾರೆ.
ಏತನ್ಮಧ್ಯೆ ಉತ್ತರ ಪ್ರದೇಶದ ಇಂದೋರ್ ನಲ್ಲಿ ಪ್ರಖ್ಯಾತ ಫುಡ್ ಸ್ಟ್ರೀಟ್ ನಲ್ಲಿ ಪಾಕಿಸ್ತಾನಿಯರು ಮತ್ತು ಹಂದಿಗಳಿಗೆ ಪ್ರವೇಶವಿಲ್ಲ ಎಂಬ ಪೋಸ್ಟರ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಇಂದೋರ್ ನ ಐಕಾನಿಕ್ ಛಪ್ಪನ್ ತುಕಾನ್ ಫುಡ್ ಸ್ಟ್ರೀಟ್ ರಸ್ತೆಯಲ್ಲಿರುವ ಆಹಾರ ಮಳಿಗೆಯ ಮೇಲೆ ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ಹಾಕಲಾದ ಪೋಸ್ಟರ್ ಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ಅಂಗಡಿಯಲ್ಲಿ ಹಂದಿಗಳು ಮತ್ತು ಪಾಕಿಸ್ತಾನಿ ನಾಗರಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಒಂದು ದೊಡ್ಡ ಫಲಕದಲ್ಲಿ ಬರೆಯಲಾಗಿದೆ. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹಂದಿಯ ಮುಖ ಹೊಂದಿರುವ ವಿರೂಪಗೊಂಡ ಚಿತ್ರವನ್ನೂ ಪೋಸ್ಟರ್ ಮಾಡಲಾಗಿದೆ. ಈ ಪೋಸ್ಟರ್ ಶರವೇಗದಲ್ಲಿ ವೈರಲ್ ಆಗಿ, ಅನೇಕರನ್ನು ಆಹಾರ ಮಳಿಗೆಯತ್ತ ಆಕರ್ಷಿಸುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಏಪ್ರಿಲ್ 22, 2025 ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಾತಿನಿಧಿಕ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಟಿಆರ್ ಎಫ್ ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲವಿದ್ದು, ಟಿಆರ್ಎಫ್ ಅನ್ನು 26/11 ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಎಲ್ಇಟಿ ಸಂಘಟನೆಯ ಅಂಗಸಂಸ್ಥೆ ಎಂದು ಪರಿಗಣಿಸಲಾಗಿದೆ.
Advertisement