
ಗುವಾಹಟಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಪರವಾಗಿ ಪೋಸ್ಟ್ ಗಳನ್ನು ಹಾಕಿದ ಆರೋಪದ ಮೇಲೆ ಮತ್ತೆ ಮೂವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಹೇಳಿದ್ದಾರೆ. ಇದರೊಂದಿಗೆ ಈಶಾನ್ಯ ರಾಜ್ಯದಲ್ಲಿ ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ತಲುಪಿದೆ.
ಅಗತ್ಯವಿದ್ದರೆ, ಈ ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಸ್ಸಾಂ ಸಿಎಂ ಎಚ್ಚರಿಕೆ ನೀಡಿದ್ದಾರೆ.
"ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹೋಲಿಕೆಗಳಿಲ್ಲ. ಎರಡೂ ದೇಶಗಳು ಶತ್ರು ರಾಷ್ಟ್ರಗಳು ಮತ್ತು ನಾವು ಹಾಗೆಯೇ ಇರಬೇಕು" ಎಂದು ಶರ್ಮಾ ಅವರು ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಸುದ್ದಿಗಾರರಿಗೆ ತಿಳಿಸಿದರು.
'ಭಾರತ ವಿರೋಧಿ ಹೇಳಿಕೆ'ಗಾಗಿ ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿಯ ನಾಯಕನನ್ನು ಶುಕ್ರವಾರ ಬಂಧಿಸಲಾಗಿದೆ ಮತ್ತು ಅಂತಹ ನಿಲುವು ತೆಗೆದುಕೊಳ್ಳುವ ಪ್ರತಿಯೊಬ್ಬರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.
"ಅಗತ್ಯವಿದ್ದರೆ, ನಾವು ಅವರ ವಿರುದ್ಧ ಎನ್ಎಸ್ಎ ನಿಬಂಧನೆಗಳನ್ನು ವಿಧಿಸುತ್ತೇವೆ. ನಾವು ಎಲ್ಲಾ(ಸಾಮಾಜಿಕ ಮಾಧ್ಯಮ) ಪೋಸ್ಟ್ಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ರಾಷ್ಟ್ರ ವಿರೋಧಿ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.
ಶುಕ್ರವಾರ ರಾತ್ರಿ ಶ್ರೀಭೂಮಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಶರ್ಮಾ, 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರೋಪಿಗಳು ಫೇಸ್ಬುಕ್ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಪೋಸ್ಟ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Advertisement