
ನವದೆಹಲಿ: ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿನ ಮಳೆ ಸಾಧ್ಯತೆ ಕುರಿತು ಕೇಂದ್ರ ಹವಾಮಾನ ಇಲಾಖೆ ಸೋಮವಾರ ಮಹತ್ವದ ಮಾಹಿತಿ ನೀಡಿದೆ.
ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಇನ್ನೂ ಕೆಲವು ಭಾಗದಲ್ಲಿ ಶಾಖದ ಅಲೆ ಹೆಚ್ಚಾಗಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ಭಾಗದಲ್ಲಿ ವೈವಿಧ್ಯಮಯ ವಾತಾವರಣ ಇದೆ. ಭಾರತದ ಪಶ್ಚಿಮ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ತೀವ್ರ ಶಾಖವು ಮುಂದುವರೆದಿದ್ದರೆ, ಕರ್ನಾಟಕ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೇಸಿಗೆ ಧಗೆ
ಭಾರತದ ಪಶ್ಚಿಮ ಹಾಗೂ ಉತ್ತರದ ಜಿಲ್ಲೆಗಳಲ್ಲಿ ಬಿಸಿಲ ಝಳವು ತೀವ್ರವಾಗಿದ್ದು, ರಾಜಸ್ಥಾನ ಸೇರಿದಂತೆ ವಿವಿಧ ಭಾಗದಲ್ಲಿ ಶಾಖದ ಅಲೆಯು ಮಿತಿ ಮೀರಿದೆ. ತಾಪಮಾನವು ಬರೋಬ್ಬರಿ 46 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದ್ದು, ನೆರೆಯ ಗುಜರಾತ್ನಲ್ಲೂ ಶಾಖದ ಅಲೆ ಹೆಚ್ಚಾಗಿದೆ. ಗುಜರಾತ್ ಜಿಲ್ಲೆಯ ವಿವಿಧ ಭಾಗದಲ್ಲಿ ತಾಪಮಾನವು ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇನ್ನು ಹರಿಯಾಣ, ದೆಹಲಿ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಸಿಲ ಝಳವು ನೆತ್ತಿಸುಡುವಂತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲೂ ಬಿಸಿಲ ಝಳವು ತೀವ್ರವಾಗಿದ್ದು, ದೆಹಲಿಯಲ್ಲಿ ಈ ವಾರ ತಾಪಮಾನವೂ ಭಾರೀ ಏರಿಕೆ ಕಂಡಿದೆ. ದೆಹಲಿಯಲ್ಲಿ ಈ ವಾರ 41 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪಮಾನ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಧಾರಾಕಾರ ಮಳೆ
ಉತ್ತರದ ದೆಹಲಿಯಲ್ಲಿ ಬೇಸಿಗೆ ಝಳ ಮುಂದುವರೆದರೆ ಇತ್ತ ಭಾರತದ ಇತರೆ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಈಶಾನ್ಯ ರಾಜ್ಯಗಳ ಭಾಗದಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ವರದಿ ಮಾಡಿದೆ. ಒಡಿಶಾದಲ್ಲಿ ತಾಪಮಾನವು ಈಚೆಗೆ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದೀಗ ಈ ಭಾಗದಲ್ಲಿ ಮಳೆ ಬೀಳುತ್ತಿದೆ. ಇನ್ನು ಮೇಘಾಲಯ, ಅಸ್ಸಾಂ, ಸಿಕ್ಕಿಂ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಮಳೆ ತೀವ್ರತೆ ಜೋರಾಗಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣದಲ್ಲೂ ಮಳೆ
ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತೆಲಂಗಾಣ, ರಾಯಲಸೀಮಾ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
Advertisement