
ಅನಂತನಾಗ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ರೋಪ್ ಕ್ರಾಸಿಂಗ್ ವೇಳೆ "ಅಲ್ಲಾಹು ಅಕ್ಬರ್" ಎಂದು ಕೂಗಿದ ಜಿಪ್ ಲೈನ್ ಆಪರೇಟರ್ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಈ ಬಗ್ಗೆ ಆಪರೇಟರ್ ತಂದೆ ಪುತ್ರ ನಡೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಂದು ಅಲ್ಲಾಹು ಅಕ್ಬರ್ ಎಂದು ಕೂಗಿದ ಜಿಪ್ ಲೈನ್ ಆಪರೇಟರ್ ಮುಜಾಮಿಲ್ ನನ್ನು ತನಿಖಾಧಿಕಾರಿಗಲು ಪಹಲ್ಗಾಮ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಮುಜಾಮಿಲ್ ನೇರ ಕೈವಾಡವಿಲ್ಲವಾದರೂ ಉಗ್ರರು ಗುಂಡು ಹಾರಿಸುವ ವೇಳೆ ಮುಜಾಮಿಲ್ ಏಕೆ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಹೇಳಿದ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದೇ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು ಈ ಬಗ್ಗೆ ಜಿಪ್ ಲೈನ್ ಅಪರೇಟರ್ ಮುಜಾಮಿಲ್ ತಂದೆ ಅಬ್ದುಲ್ ಅಜೀಜ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಮುಜಾಮಿಲ್ ತಂದೆ ಅಬ್ದುಲ್ ಅಜೀಜ್, 'ನನ್ನ ಮಗನದ್ದು ಯಾವುದೇ ತಪ್ಪಿಲ್ಲ.. ಇಸ್ಲಾಮ್ ನಲ್ಲಿ ಅಲ್ಲಾಹು ಅಕ್ಬರ್ ಎನ್ನುವುದು ಸಾಮಾನ್ಯ.. ಈ ಘಟನೆ ಬಳಿಕ ತಮ್ಮ ಮಗ ಮುಜಾಮಿಲ್ ತುಂಬಾ ಆತಂಕಗೊಂಡಿದ್ದಾನೆ. ಪೊಲೀಸರು ಮನೆಗೆ ಬಂದಾಗ ತುಂಬಾ ಅಳುತ್ತಿದ್ದ. ಈಗ ಮುಜಾಮಿಲ್ ಪೊಲೀಸರ ವಶದಲ್ಲಿದ್ದಾನೆ ಎಂದರು. ಇದೇ ವೇಳೆ, 'ನನಗೆ ಏನೂ ಹೇಳಬೇಡಿ, ಇಲ್ಲಿ ಏನೇನೋ ಸಂಭವಿಸಿದೆ.. ಎಂದು ಅಜೀಜ್ ಹೇಳಿದರು.
ಅಲ್ಲಾಹು ಅಕ್ಬರ್ ಘೋಷಣೆ ಕುರಿತು ಮಾತನಾಡಿದ ಅಜೀಜ್, 'ಇಸ್ಲಾಮ್ ನಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುವುಗು ತುಂಬಾ ಸಾಮಾನ್ಯ.. ನಮ್ಮಲ್ಲಿ ಕಷ್ಟ ಬಂದಾಗ, ಸಂತೋಷವಾದಾಗ, ದುಃಖವಾದಾಗ ಅಲ್ಲಾಹು ಅಕ್ಬರ್ ಎಂದು ಅಲ್ಲಾಹ್ ನನ್ನು ನೆನೆಯುತ್ತೇವೆ. ಅದೇ ರೀತಿ ಅಂದು ಜಿಪ್ ಲೈನ್ ಆಪರೇಟಿಂಗ್ ವೇಳೆ ಪುತ್ರ ಮುಜಾಮಿಲ್ ಕೂಡ ಹಾಗೆ ಕೂಗಿದ್ದಾನೆ. ಅಂದಮಾತ್ರಕ್ಕೆ ಆತನಿಗೆ ಉಗ್ರರೊಂದಿಗೆ ಸಂಬಂಧ ಇದೆ ಎಂದು ಭಾವಿಸುವುದು ಬೇಡ.. "ಬಿರುಗಾಳಿ ಬಂದರೂ ನಾವು ಅಲ್ಲಾಹು ಅಕ್ಬರ್ ಎಂದು ಹೇಳುತ್ತೇವೆ. ಇದರಲ್ಲಿ ನಮ್ಮ ತಪ್ಪೇನು? ಎಂದು ಅಜೀಜ್ ಪ್ರಶ್ನಿಸಿದರು.
ಮುಜಾಮಿಲ್ ಜಿಪ್ಲೈನ್ನೊಂದಿಗೆ ಮಾತ್ರ ಕೆಲಸ ಮಾಡುತ್ತಿದ್ದರು. ಆತ ಬೇರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಯಾವುದೇ ಹಾನಿ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಅಜೀಜ್ ಸ್ಪಷ್ಟಪಡಿಸಿದರು.
'ಅಲ್ಲಾಹು ಅಕ್ಬರ್' ಎಂದಿದ್ದ ಮುಜಾಮಿಲ್ ಮೇಲೆ ಪ್ರವಾಸಿಗ ರಿಷಿಭಟ್ ಸಂಶಯ
ಇನ್ನು ಈ ಹಿಂದೆ ರೋಪ್ ಕ್ರಾಸಿಂಗ್ ವಿಡಿಯೋ ತೆಗೆದಿದ್ದ ಪ್ರವಾಸಿಗ ರಿಷಿ ಭಟ್, ಜಿಪ್ ಲೈನ್ ಆಪರೇಟರ್ ರೋಪ್ ಕ್ರಾಸಿಂಗ್ ವೇಳೆ ಆಪರೇಟರ್ ಅಲ್ಲಾಹು ಅಕ್ಬರ್ ಎಂದು ಹೇಳಿದ್ದ. ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದಾಗಲೇ ಹಾಗೆ ಕೂಗಲು ಕಾರಣವೇನು? ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದರು.
Advertisement