ನವದೆಹಲಿ: ಇ-ಕೆವೈಸಿ (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಪ್ರಕ್ರಿಯೆಯ ಸಮಯದಲ್ಲಿ ಕಣ್ಣು ಮಿಟುಕಿಸುವಂತಹ ದೈಹಿಕ ಅಭಿವ್ಯಕ್ತಿಗಳನ್ನು ಕಡ್ಡಾಯಗೊಳಿಸುವುದು ಆಸಿಡ್ ದಾಳಿಯಿಂದ ಬದುಕುಳಿದವರು ಮತ್ತು ದೃಷ್ಟಿಹೀನರು ಸೇರಿದಂತೆ ವಿಶೇಷ ಚೈತನ್ಯ ವ್ಯಕ್ತಿಗಳ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ಡಿಜಿಟಲ್ ಪ್ರವೇಶ ಮೂಲಭೂತ ಹಕ್ಕು ಮತ್ತು ಅದನ್ನು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ.
“ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಡಿಜಿಟಲ್ ಪ್ರವೇಶದ ಹಕ್ಕು ಜೀವಿಸುವ ಹಕ್ಕಿನಲ್ಲಿ ಅಂತರ್ಗತವಾಗಿದೆ. ಇದು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ (ಆರ್ಟಿಕಲ್ 21) ಒಂದು ವಿಶಿಷ್ಟ ಅಂಶವಾಗಿ ಹೊರಹೊಮ್ಮುತ್ತದೆ, ಇದು ರಾಜ್ಯ ಸವಲತ್ತು ಪಡೆದವರಿಗೆ ಮಾತ್ರವಲ್ಲದೆ ವಿಶೇಷ ಚೇತನ ವ್ಯಕ್ತಿಗಳನ್ನೂ ಸಹ ಒಳಗೊಳ್ಳುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ವಿನ್ಯಾಸಗೊಳಿಸುವ ಮತ್ತು ಕಾರ್ಯಗತಗೊಳಿಸುವ ಅಗತ್ಯವನ್ನು ಹೊಂದಿದೆ” ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ ಗಮನಿಸಿದೆ.
ಆಸಿಡ್ ದಾಳಿಯಿಂದ ಬದುಕುಳಿದವರು ಸಲ್ಲಿಸಿದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮತ್ತು ಡಿಜಿಟಲ್ ಕೆವೈಸಿ ಕಾರ್ಯವಿಧಾನಗಳ ಪೂರ್ಣಗೊಳಿಸಲಾಗದೇ ಇರುವುದನ್ನು ಪ್ರಶ್ನಿಸಿ ದೃಷ್ಟಿ ಚೇತನ ಅಥವಾ ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿ ಸಲ್ಲಿಸಿದ ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿತು.
ಆಸಿಡ್ ದಾಳಿಯ ಸಂತ್ರಸ್ತೆ ತನ್ನ ಅರ್ಜಿಯಲ್ಲಿ, ತನ್ನ ಕಣ್ಣು ವಿರೂಪಗೊಂಡು ಮುಖಕ್ಕೆ ತೀವ್ರ ಹಾನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಜುಲೈ 2023 ರಲ್ಲಿ, ಖಾತೆ ತೆರೆಯಲು ಬ್ಯಾಂಕ್ ನ್ನು ಸಂಪರ್ಕಿಸಿದ್ದೆ. ಆದರೆ ಲೈವ್ ಛಾಯಾಚಿತ್ರ ಸೆರೆ ಹಿಡಿಯುವಾಗ ಆಕೆ ಕಣ್ಣು ಮಿಟುಕಿಸುವ ಅಗತ್ಯವಿದ್ದ ಕಾರಣ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಿಂದಾಗಿ, ಆಕೆಗೆ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ಸುಪ್ರೀಂ ಕೋರ್ಟ್ನಿಂದ ಪರಿಹಾರವನ್ನು ಕೋರಲಾಯಿತು.
ಇಂತಹ ಪದ್ಧತಿಗಳಿಂದ ಉಂಟಾಗುವ ಅಡೆತಡೆಗಳನ್ನು ಎತ್ತಿ ತೋರಿಸುತ್ತಾ, ಆರ್ಬಿಐ ನ ಪ್ರಕಾರ ಗ್ರಾಹಕರು ಜೀವಂತವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಕಡ್ಡಾಯ ಅವಶ್ಯಕತೆಯನ್ನು ಪೂರ್ಣಗೊಳಿಸಲು ವ್ಯಕ್ತಿಯು ಕ್ಯಾಮೆರಾದ ಮುಂದೆ ಕಣ್ಣು ಮಿಟುಕಿಸುವುದು ಕಡ್ಡಾಯವಾಗಿರುತ್ತದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ಈ ನಿಯಮ ಡಿಜಿಟಲ್ ಹಕ್ಕುಗಳಿಂದ ಅನೇಕ ವಿಶೇಷ ಚೇತನ ವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ಹೊರಗಿಡುತ್ತದೆ.
ಸಂತ್ರಸ್ತ ವ್ಯಕ್ತಿಯ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್ ಡಿಜಿಟಲ್ ಕೆವೈಸಿ ಪ್ರಕ್ರಿಯೆಯಲ್ಲಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು 20 ನಿರ್ದೇಶನಗಳನ್ನು ನೀಡಿದೆ. ಆಸಿಡ್ ದಾಳಿಯಿಂದ ಬದುಕುಳಿದವರು ಮತ್ತು ದೃಷ್ಟಿಹೀನ ವ್ಯಕ್ತಿಗಳು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಅಡಿಯಲ್ಲಿ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದೆ.
"ಸಾಂವಿಧಾನಿಕ ನಿಬಂಧನೆಗಳು ಅರ್ಜಿದಾರರಿಗೆ KYC ಪ್ರಕ್ರಿಯೆಯಲ್ಲಿ ಅವಕಾಶ ಪಡೆಯಲು ಶಾಸನಬದ್ಧ ಹಕ್ಕನ್ನು ನೀಡುತ್ತವೆ. ಡಿಜಿಟಲ್ KYC ಮಾರ್ಗಸೂಚಿಗಳನ್ನು ಪರಿಷ್ಕರಿಸುವುದು ಕಡ್ಡಾಯವಾಗಿದೆ. ಆರ್ಥಿಕ ಅವಕಾಶಗಳು ಇತ್ಯಾದಿಗಳು ಡಿಜಿಟಲ್ (ಪ್ರವೇಶ) ಮೂಲಕ ಇರುವ ಸಮಕಾಲೀನ ಯುಗದಲ್ಲಿ, ಅಂತಹ ತಂತ್ರಜ್ಞಾನ ಮತ್ತು ಡಿಜಿಟಲ್ ನಿಯಮಗಳ ನಡುವೆ ಅಂತರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 21 ನೇ ವಿಧಿಯನ್ನು ಮರು ವ್ಯಾಖ್ಯಾನಿಸಬೇಕಾಗಿದೆ" ಎಂದು ನ್ಯಾಯಾಲಯ ಹೇಳಿದೆ.
Advertisement