

ನವದೆಹಲಿ: ದೇಶಾದ್ಯಂತ ಇಂಡಿಗೋ ಸೇರಿದಂತೆ ಹಲವಾರು ಇತರ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿದ ನಂತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆ ನೆರವಿಗೆ ಬಂದಿದೆ.
ವಿಮಾನಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಪ್ರಯಾಣಿಕರು ರೈಲ್ವೆಯತ್ತ ಮುಖ ಮಾಡಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ದಟ್ಟಣೆ ಮತ್ತು ಟಿಕೆಟ್'ಗಳಿಗೆ ಬೇಡಿಕೆಗೆ ಭಾರತೀಯ ರೈಲ್ವೆ ತಕ್ಷಣ ಕ್ರಮ ಕೈಗೊಂಡಿದೆ.
ಡಿಸೆಂಬರ್ 6, 2025 ರಿಂದ ಜಾರಿಗೆ ಬರುವಂತೆ, ರೈಲ್ವೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿದೆ. ಹಲವಾರು ಮಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ದಕ್ಷಿಣ ಭಾರತದಲ್ಲಿ ವಿಮಾನ ರದ್ದತಿಯ ಪರಿಣಾಮ ಹೆಚ್ಚಾಗಿ ಕಂಡುಬಂದಿದ್ದು, ರೈಲ್ವೆ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೇ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ದಕ್ಷಿಣ ರೈಲ್ವೆ 18 ರೈಲುಗಳಿಗೆ ಹೊಸ ಬೋಗಿಗಳನ್ನು ಸೇರಿಸಿದೆ. ಹಲವಾರು ಜನಪ್ರಿಯ ಮಾರ್ಗಗಳಲ್ಲಿ ಸ್ಲೀಪರ್ ಮತ್ತು ಚೇರ್ ಕಾರ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಸೀಟುಗಳು ಲಭ್ಯವಾಗುವಂತೆ ಮಾಡಲಾಗಿದೆ. ಇದು ಬೆಂಗಳೂರು, ಚೆನ್ನೈ, ಕೊಯಮತ್ತೂರು ಮತ್ತು ತಿರುವನಂತಪುರಂನಂತಹ ನಗರಗಳಿಗೆ ಪ್ರಯಾಣ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಇನ್ನು ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಉತ್ತರ ರೈಲ್ವೆ 8 ಮುಖ್ಯ ರೈಲುಗಳಿಗೆ ಹೆಚ್ಚುವರಿ ಎಸಿ ಮತ್ತು ಚೇರ್ ಕಾರ್ಗಳನ್ನು ಸೇರಿಸಿದೆ. ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ.
ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ಬರುವ ಪ್ರಯಾಣಿಕರಿಗೆ ಇದು ದೊಡ್ಡ ಪರಿಹಾರ ನೀಡಿದಂತಾಗಿದೆ.
ವಿಮಾನ ರದ್ದತಿಯಿಂದಾಗಿ ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣವು ತುಂಬಾ ಕಷ್ಟಕರವಾಗಿದೆ. ಇದನ್ನು ಪರಿಹರಿಸಲು, ಪಶ್ಚಿಮ ರೈಲ್ವೆ ನಾಲ್ಕು ಮುಖ್ಯ ರೈಲುಗಳಲ್ಲಿ 3 ಎಸಿ ಮತ್ತು 2 ಎಸಿ ಕೋಚ್ಗಳನ್ನು ಸೇರಿಸಿದೆ.
ಡಿಸೆಂಬರ್ 6 ರಂದು ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ, ಸಾವಿರಾರು ಪ್ರಯಾಣಿಕರು ಈ ಜನನಿಬಿಡ ಮಾರ್ಗದಲ್ಲಿ ಸೀಟುಗಳನ್ನು ಪಡೆಯಲು ಸಾಧ್ಯವಾಗಿದೆ.
ಇದೇ ವೇಳೆ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಪೂರ್ವ ಮಧ್ಯ ರೈಲ್ವೆ ವಿಶೇಷ ಕ್ರಮಗಳನ್ನು ತೆಗೆದುಕೊಂಡಿದೆ.
ಡಿಸೆಂಬರ್ 6 ರಿಂದ 10 ರವರೆಗೆ ರಾಜೇಂದ್ರ ನಗರ-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಐದು ಹೆಚ್ಚುವರಿ ಟ್ರಿಪ್ಗಳನ್ನು ಓಡಿಸಲಾಗುತ್ತಿದೆ. 2AC ಕೋಚ್ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ. ಇದು ಪಾಟ್ನಾ-ದೆಹಲಿ ಮಾರ್ಗದಲ್ಲಿ ಆಸನ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಒಡಿಶಾದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ, ಪೂರ್ವ ಕರಾವಳಿ ರೈಲ್ವೆ 20817, 20811 ಮತ್ತು 20823 ರೈಲುಗಳಲ್ಲಿ ಐದು ಟ್ರಿಪ್ಗಳಲ್ಲಿ 2AC ಕೋಚ್ಗಳನ್ನು ಸೇರಿಸಿದೆ.
ಇದೇ ವೇಳೆ ಪೂರ್ವ ರೈಲ್ವೆ ಡಿಸೆಂಬರ್ 7 ಮತ್ತು 8 ರಂದು ಮೂರು ಪ್ರಮುಖ ರೈಲುಗಳಲ್ಲಿ ಸ್ಲೀಪರ್ ಕೋಚ್ಗಳನ್ನು ಸೇರಿಸಿದೆ. ಈಶಾನ್ಯದ ಪ್ರಯಾಣಿಕರಿಗಾಗಿ, ಈಶಾನ್ಯ ಗಡಿನಾಡು ರೈಲ್ವೆ ಡಿಸೆಂಬರ್ 6 ಮತ್ತು 13 ರ ನಡುವೆ ಎಂಟು ಹೆಚ್ಚುವರಿ ಟ್ರಿಪ್ಗಳೊಂದಿಗೆ 3AC ಮತ್ತು ಸ್ಲೀಪರ್ ಸೀಟುಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಅಲ್ಲದೆ, ದೂರದ ಪ್ರಯಾಣವನ್ನು ಸುಗಮಗೊಳಿಸಲು ಮತ್ತು ಸಿಕ್ಕಿಬಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು, ರೈಲ್ವೆ 4 ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಇವುಗಳಲ್ಲಿ ಗೋರಖ್ಪುರ-ಆನಂದ್ ವಿಹಾರ್ ವಿಶೇಷ ರೈಲು, ನವದೆಹಲಿ-ಮುಂಬೈ ಸೆಂಟ್ರಲ್ ವಿಶೇಷ ರೈಲು, ನವದೆಹಲಿ-ಶ್ರೀನಗರ ವಲಯಕ್ಕೆ ವಂದೇ ಭಾರತ್ ವಿಶೇಷ ರೈಲು ಮತ್ತು ಹಜರತ್ ನಿಜಾಮುದ್ದೀನ್-ತಿರುವನಂತಪುರಂ ವಿಶೇಷ ರೈಲು ಸೇರಿವೆ. ಹೆಚ್ಚಿನ ರೈಲುಗಳು ಏಕಮುಖ ರೈಲುಗಳಾಗಿದ್ದು, ಪ್ರಯಾಣಿಕರಿಗೆ ಪರಿಹಾರ ಒದಗಿಸಲು ಮಾತ್ರ ಉದ್ದೇಶಿಸಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement