

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿನಂದಿಸಿದ್ದಾರೆ. ಅಲ್ಲದೇ ಇದನ್ನು ಪ್ರಜಾಪ್ರಭುತ್ವದ ಸೊಗಸು ಎಂದು ಕರೆದಿದ್ದಾರೆ.
ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಗೆಲುವನ್ನು ಶ್ಲಾಘಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಬಿಜೆಪಿಗೆ ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
'ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಂತಹ ಅದ್ಭುತ ಫಲಿತಾಂಶದ ದಿನ. ಜನಾದೇಶ ಸ್ಪಷ್ಟವಾಗಿದೆ. ರಾಜ್ಯದ ಪ್ರಜಾಸತ್ತಾತ್ಮಕ ಮನೋಭಾವವು ಹೊಳೆಯುತ್ತಿದೆ ಎಂದಿದ್ದಾರೆ.
'ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನಿಜವಾದ ಪ್ರಭಾವಶಾಲಿ ಗೆಲುವಿಗಾಗಿ ಕೇರಳ ಯುಡಿಎಫ್ ಗೆ ಅಭಿನಂದನೆಗಳು. ಇದು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಸಂಕೇತವಾಗಿದೆ. 2020 ಕ್ಕಿಂತ ಉತ್ತಮ ಫಲಿತಾಂಶವನ್ನು ಸಾಧಿಸಲು ಕಠಿಣ ಪರಿಶ್ರಮ, ಬಲವಾದ ಸಂದೇಶ ಮತ್ತು ಅಧಿಕಾರ-ವಿರೋಧಿ ಎಲ್ಲವೂ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯನ್ನು ಅವರು ಒಪ್ಪಿಕೊಂಡಿದ್ದಾರೆ. 'ನಗರ ಪಾಲಿಕೆಯಲ್ಲಿ ಮಹತ್ವದ ಗೆಲುವಿಗೆ ಅವರಿಗೆ ಅಭಿನಂದನೆಗಳು. ರಾಜಧಾನಿಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುವ ಪ್ರಬಲ ಪ್ರದರ್ಶನ' ಎಂದಿದ್ದಾರೆ.
45 ವರ್ಷಗಳ ಎಡ ಪ್ರಜಾಸತ್ತಾತ್ಮಕ ರಂಗದ 'ದುರಾಡಳಿತ'ದಿಂದ ಬದಲಾವಣೆಗಾಗಿ ಪ್ರಚಾರ ಮಾಡಿದ್ದೇನೆ, ಆದರೆ ಮತದಾರರು ಅಂತಿಮವಾಗಿ ಆಡಳಿತದಲ್ಲಿ ಸ್ಪಷ್ಟ ಬದಲಾವಣೆಯನ್ನು ಬಯಸಿದ ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಅದು ಪ್ರಜಾಪ್ರಭುತ್ವದ ಸೊಗಸು, ಒಟ್ಟಾರೆ ಯುಡಿಎಫ್ ಇರಲಿ ಅಥವಾ ನನ್ನ ಕ್ಷೇತ್ರದಲ್ಲಿ ಬಿಜೆಪಿ ಇರಲಿ ಜನರ ತೀರ್ಪನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇರಳದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಜನರ ಅಗತ್ಯತೆಗಳನ್ನು ಪ್ರತಿಪಾದಿಸುತ್ತೇವೆ ಮತ್ತು ಉತ್ತಮ ಆಡಳಿತದ ತತ್ವಗಳನ್ನು ಎತ್ತಿಹಿಡಿಯುತ್ತೇವೆ ಎಂದು ತಿರುವನಂತಪುರದ ಸಂಸದ ಶಶಿ ತರೂರ್ ಹೇಳಿದ್ದಾರೆ.
Advertisement