ಕಾಶ್ಮೀರ ವಿಷಯವನ್ನು ಜವಾಹರಲಾಲ್ ನೆಹರು ವಿವಾದಾತ್ಮಕವಾಗಿಸಿದರು, ಅಲ್ಲಿಂದಲೇ ಭಾರತಕ್ಕೆ ಉಗ್ರವಾದ, ಪ್ರತ್ಯೇಕತಾವಾದ ಬಂತು!

'ಭಾರತದ ಎಲ್ಲ ಹಿಂದೂ ರಾಜಪ್ರಭುತ್ವಗಳು ಭಾರತ ಗಣರಾಜ್ಯದ ಭಾಗವಾಗಲು ಒಪ್ಪಿಕೊಂಡವು. ಆದರೆ, ಜುನಾಗಢದ ನವಾಬ ಮತ್ತು ಹೈದರಾಬಾದ್ ನಿಜಾಮ ನಿರಾಕರಿಸಿದರು.'
Jawaharlal Nehru
ಜವಾಹರಲಾಲ್ ನೆಹರು
Updated on

ಲಖನೌ: 'ಕಾಶ್ಮೀರದಿಂದ ಹೊರಹೊಮ್ಮುತ್ತಿರುವ' ಉಗ್ರವಾದ ಮತ್ತು ಪ್ರತ್ಯೇಕತಾವಾದಕ್ಕೆ ಜವಾಹರಲಾಲ್ ನೆಹರು ಅವರನ್ನು ದೂಷಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾರತದ ಮೊದಲ ಪ್ರಧಾನಿ ಈ ವಿಷಯವನ್ನು ಎಷ್ಟು 'ವಿವಾದಾತ್ಮಕ'ವಾಗಿಸಿದ್ದಾರೆಂದರೆ, ಅದು ಇಂದಿಗೂ ದೇಶವನ್ನು ಕುಟುಕುತ್ತಿದೆ ಎಂದು ಸೋಮವಾರ ಆರೋಪಿಸಿದ್ದಾರೆ.

ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಪುಣ್ಯತಿಥಿಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 560ಕ್ಕೂ ಹೆಚ್ಚು ರಾಜಪ್ರಭುತ್ವಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಉಲ್ಲೇಖಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಮುಳ್ಳಾಗಿದ್ದ ಜುನಾಗಢ ಮತ್ತು ಹೈದರಾಬಾದ್‌ ರಾಜಮನೆಗಳತ್ತ ಗಮನಸೆಳೆದರು.

'ಭಾರತದ ಎಲ್ಲ ಹಿಂದೂ ರಾಜಪ್ರಭುತ್ವಗಳು ಭಾರತ ಗಣರಾಜ್ಯದ ಭಾಗವಾಗಲು ಒಪ್ಪಿಕೊಂಡವು. ಆದರೆ, ಜುನಾಗಢದ ನವಾಬ ಮತ್ತು ಹೈದರಾಬಾದ್ ನಿಜಾಮ ನಿರಾಕರಿಸಿದರು. ಆಗ ಸರ್ದಾರ್ ಪಟೇಲ್ ಅವರ ಬುದ್ಧಿವಂತಿಕೆಯಿಂದಾಗಿ, ರಕ್ತರಹಿತ ಕ್ರಾಂತಿಯ ಮೂಲಕ ಈ ಎರಡು ರಾಜಪ್ರಭುತ್ವಗಳು ಭಾರತದ ಭಾಗವಾದವು' ಎಂದು ಆದಿತ್ಯನಾಥ್ ಹೇಳಿದರು.

'ಜಮ್ಮು ಮತ್ತು ಕಾಶ್ಮೀರದ ರಾಜಪ್ರಭುತ್ವದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಆದ್ದರಿಂದ, ಪಂಡಿತ್ ಜವಾಹರಲಾಲ್ ನೆಹರು ಈ ವಿಷಯವನ್ನು ತಮ್ಮ ಕೈಗೆತ್ತಿಕೊಂಡರು. ಅವರು ಜಮ್ಮು ಮತ್ತು ಕಾಶ್ಮೀರವನ್ನು ಎಷ್ಟು ವಿವಾದಾತ್ಮಕಗೊಳಿಸಿದರು ಎಂದರೆ, ಸ್ವಾತಂತ್ರ್ಯದ ನಂತರವೂ ಅದು ಭಾರತವನ್ನು ಕುಟುಕುತ್ತಲೇ ಇತ್ತು. ಪಂಡಿತ್ ನೆಹರು ಅವರ ಕಾರಣದಿಂದಾಗಿ ದೇಶವು ಕಾಶ್ಮೀರದಿಂದ ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಪಡೆದುಕೊಂಡಿತು' ಎಂದರು.

Jawaharlal Nehru
ವಲ್ಲಭಬಾಯಿ ಪಟೇಲರ ಪರಂಪರೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ: ಕಾಂಗ್ರೆಸ್

ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸುಗಳನ್ನು ನನಸಾಗಿಸುವ ಮೂಲಕ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ, ಅದನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದ ಮತ್ತು ಒಂದು ದೇಶ, ಒಂದು ಸಂವಿಧಾನ ಮತ್ತು ಒಂದು ಧ್ವಜದ ಸಂಕಲ್ಪವನ್ನು ಮುಂದಕ್ಕೆ ಕೊಂಡೊಯ್ದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಮತ್ತು ಅದಕ್ಕಾಗಿ ದೇಶವು ಕೃತಜ್ಞವಾಗಿದೆ ಎಂದು ಅವರು ಹೇಳಿದರು.

'ಸ್ವಾತಂತ್ರ್ಯದ ಸಮಯದಲ್ಲಿ 567 ರಾಜಪ್ರಭುತ್ವಗಳು ಇದ್ದವು ಮತ್ತು ಅವುಗಳನ್ನು ಭಾರತ ಗಣರಾಜ್ಯದಲ್ಲಿ ಸಂಯೋಜಿಸಲಾಯಿತು. ದೇಶವು ಯಾವಾಗಲೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಅದರ ವಾಸ್ತುಶಿಲ್ಪಿ ಎಂದು ನೆನಪಿಸಿಕೊಳ್ಳುತ್ತದೆ. ಇದು ಅವರ ಸೃಷ್ಟಿ' ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಜುನಾಗಢದ ನವಾಬ ಮತ್ತು ಹೈದರಾಬಾದ್‌ನ ನಿಜಾಮರು ಭಾರತಕ್ಕೆ ಸೇರಲು ಬಯಸಲಿಲ್ಲ. ಏಕೆಂದರೆ, ಬ್ರಿಟಿಷರು ರಾಜಪ್ರಭುತ್ವಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನು ಸೇರಬೇಕೆ ಅಥವಾ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆ ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿದ್ದರು. ಭಾರತದ ಮೊದಲ ಗೃಹ ಸಚಿವ ಸರ್ದಾರ್ ಪಟೇಲರು ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.

'ಸೋಮನಾಥ ದೇವಾಲಯದ ಪುನಃಸ್ಥಾಪನೆಯಾಗಿರಲಿ, ಭಾರತದೊಳಗಿನ ವಿವಿಧ ವಿವಾದಗಳನ್ನು ಪರಿಹರಿಸಲು ಒಂದು ಕಾರ್ಯವಿಧಾನದ ಅಭಿವೃದ್ಧಿಯಾಗಿರಲಿ ಅಥವಾ ಭಾರತೀಯ ಆಡಳಿತ ಸೇವೆಗೆ ಅದರ ಪ್ರಸ್ತುತ ಸ್ವರೂಪವನ್ನು ನೀಡಿರುವುದಾಗಿರಲಿ, ಇವೆಲ್ಲವೂ ಈ ಮಹಾನ್ ನಾಯಕ ವಲ್ಲಭಭಾಯಿ ಪಟೇಲ್ ಅವರಿಂದಾಗಿ ಸಾಧ್ಯವಾಯಿತು' ಎಂದರು.

ಭಾರತಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅದ್ಭುತ ನಾಯಕತ್ವವು ದೀರ್ಘಕಾಲದವರೆಗೆ ಅಗತ್ಯವಿತ್ತು. ಆದರೆ, ಅವರು ಡಿಸೆಂಬರ್ 15, 1950 ರಂದು ನಿಧನರಾದರು. ಇದು ದೇಶದ ದುರದೃಷ್ಟಕರ ಸಂಗತಿ ಎಂದು ಆದಿತ್ಯನಾಥ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com