

ಭುವನೇಶ್ವರ: ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ಗೆ ತೆರಳುತ್ತಿದ್ದ ಕ್ರೀಡಾಪಟುಗಳು ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸುವ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.
69ನೇ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲು ಉತ್ತರ ಪ್ರದೇಶಕ್ಕೆ ಪ್ರಯಾಣಿಸಬೇಕಿದ್ದ ಒಡಿಶಾದ 18 ಯುವ ಕುಸ್ತಿಪಟುಗಳು ಟಾಯ್ಲೆಟ್ ಪಕ್ಕ ಕುಳಿತು ಪ್ರಯಾಣಿಸಿದ್ದಾರೆ. ಕ್ರೀಡಾಪಟುಗಳು ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಒಡಿಶಾದ ರಾಜ್ಯ ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಲೋಪಗಳಿಂದಾಗಿ ಕ್ರೀಡಾಪಟುಗಳ ಟಿಕೆಟ್ ಕನ್ಫರ್ಮ್ ಆಗದೇ ಇರುವುದರಿಂದ ಆಟಗಾರರು ಟಾಯ್ಲೆಟ್ ಪಕ್ಕ ಕುಳಿತು ಪ್ರಯಾಣಿಸುವಂತಾಯಿತು.
10 ವಿದ್ಯಾರ್ಥಿಗಳು ಮತ್ತು ಎಂಟು ವಿದ್ಯಾರ್ಥಿನಿಯರನ್ನು ಒಳಗೊಂಡ ತಂಡವನ್ನು ರೈಲ್ವೆ ಟಿಕೆಟ್ಗಳಿಲ್ಲದೆ ರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಕಳುಹಿಸಲಾಗಿದ್ದು, ಅವರನ್ನು ಸಾಮಾನ್ಯ ವಿಭಾಗಗಳಲ್ಲಿ ಪ್ರಯಾಣಿಸುವಂತೆ ಒತ್ತಾಯಿಸಲಾಗಿದೆ.
ಆರೋಪಗಳ ಪ್ರಕಾರ, ಚಳಿಗಾಲದ ತೀವ್ರ ಚಳಿಯಲ್ಲಿ ಕ್ರೀಡಾಪಟುಗಳನ್ನು ರೈಲು ಶೌಚಾಲಯಗಳ ಬಳಿ ಕೂರಿಸಲಾಗಿದೆ. ಇದು ಅವರ ಸುರಕ್ಷತೆ, ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಕೇವಲ ಹೋಗುವಾಗ ಮಾತ್ರವಲ್ಲ ಅಲ್ಲಿಂದ ಬರುವಾಗಲೂ ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಪ್ರಯಾಣದ ಎರಡೂ ಹಂತಗಳಿಗೆ ಯಾವುದೇ ದೃಢೀಕೃತ ಟಿಕೆಟ್ಗಳನ್ನು ವ್ಯವಸ್ಥೆ ಮಾಡಲಾಗಿಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವು ಕ್ರೀಡಾಪಟುಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ತಲೆಯಿಂದ ಕಾಲಿನವರೆಗೆ ಹೊದಿಕೆಗಳನ್ನು ಧರಿಸಿಕೊಂಡು ತಮ್ಮ ಲಗೇಜ್ ಮೇಲೆ ಕುಳಿತಿರುವುದು ಕಂಡುಬಂದಿದೆ.
ಇತರ ಕ್ರೀಡಾಪಟುಗಳು ತಲೆ ತಗ್ಗಿಸಿ ಲಗೇಜ್ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬರುತ್ತದೆ. ರೈಲು ಶೌಚಾಲಯಗಳ ಬಳಿ ಕುಳಿತಿರುವ ಕ್ರೀಡಾಪಟುಗಳನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಾಪಸ್ ಆಗುವಾಗಲೂ ಇದೇ ಪರಿಸ್ಥಿತಿ
ಇನ್ನು ಆಟಗಾರರ ಪರದಾಟ ಇಷ್ಟಕ್ಕೇ ಮುಗಿದಿಲ್ಲ.. ವಾಪಸ್ ಆಗುವಾಗಲೂ ಅವರ ಪರಿಸ್ಥಿತಿ ಇದೇ... ಆಟಗಾರರ ರಿಟರ್ಟ್ ಟಿಕೆಟ್ ಗಳೂ ಕೂಡ ಕನ್ಫರ್ಮ್ ಆಗಿಲ್ಲ.. ಹೀಗಾಗಿ ಆಟಗಾರರು ವಾಪಸ್ ಬರುವಾಗಲೂ ಅದೇ ಶೋಚನೀಯ ಸ್ಥಿತಿಯಲ್ಲಿ ಹಿಂತಿರುಗಬೇಕಾಯಿತು.
ಈ ಬಗ್ಗೆ ಒಡಿಶಾ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರು ಪ್ರತಿಕ್ರಿಯಿಸಿದ್ದು, "ನಿರ್ವಹಣೆಯಲ್ಲಿ ದೋಷ" ಎಂದು ಆರೋಪಿಸಿದ್ದಾರೆ.
Advertisement