ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಶಾಲಾ ಶಿಕ್ಷಕರೊಬ್ಬರನ್ನು ಬುಧವಾರ ರಾತ್ರಿ ವಿಶ್ವವಿದ್ಯಾಲಯದ ಆವರಣದೊಳಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ.
ಮೃತರನ್ನು ರಾವ್ ಡ್ಯಾನಿಶ್ ಅಲಿ ಎಂದು ಗುರುತಿಸಲಾಗಿದ್ದು, ಅವರು ಕಳೆದ 11 ವರ್ಷಗಳಿಂದಲೂ AMUನ ABK ಯೂನಿಯನ್ ಹೈಸ್ಕೂಲ್ನಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರಾಗಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ರಾತ್ರಿ 8.50 ರಿಂದ 9ರ ಸುಮಾರಿಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ ಬಳಿ ನಡೆದಿದೆ. ಡ್ಯಾನಿಶ್ ಇಬ್ಬರು ಸಹೋದ್ಯೋಗಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಸ್ಕೂಟರ್ನಲ್ಲಿ ಬಂದು ಗುಂಡು ಹಾರಿಸಿದ್ದಾರೆ.
ದಾಳಿಕೋರರು ಮೂರು ಬಾರಿ ಗುಂಡು ಹಾರಿಸಿದ್ದು, ಅದರಲ್ಲಿ ಎರಡು ಬಾರಿ ಡ್ಯಾನಿಶ್ ಅವರ ತಲೆಗೆ ಗುಂಡು ಹಾರಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬಾತ ಗುಂಡು ಹಾರಿಸುವ ಮುನ್ನ 'ಡ್ಯಾನಿಶ್, ಈಗ ನಿನಗೆ ನಾನು ಯಾರೆಂದು ತಿಳಿಯುತ್ತದೆ' ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಮತ್ತೊಬ್ಬರ ಪ್ರಕಾರ, 'ಇಲ್ಲಿಯವರೆಗೆ ನಾನು ಯಾರೆಂದು ನಿನಗೆ ತಿಳಿದಿಲ್ಲ, ಈಗ ತಿಳಿಯುತ್ತದೆ' ಎಂದು ಹೇಳಿದ್ದಾಗಿ ಉಲ್ಲೇಖಿಸಿದೆ.
ಡ್ಯಾನಿಶ್ ಅವರನ್ನು ತಕ್ಷಣವೇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಅವರು ಸಾವಿಗೀಡಾಗಿದ್ದಾರೆ.
ಶಿಕ್ಷಕನ ಮೇಲೆ ಗುಂಡು ಹಾರಿಸಿದ ನಂತರ ಇಬ್ಬರು ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಜಾಡೋನ್ ದೃಢಪಡಿಸಿದರು.
'ರಾತ್ರಿ 9 ಗಂಟೆ ಸುಮಾರಿಗೆ, ಗ್ರಂಥಾಲಯದ ಬಳಿ ಗುಂಡಿನ ದಾಳಿ ನಡೆದಿದೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು... ಸಂತ್ರಸ್ತನನ್ನು ರಾವ್ ಡ್ಯಾನಿಶ್ ಅಲಿ ಎಂದು ಗುರುತಿಸಲಾಗಿದೆ ಮತ್ತು ಅವರು ವಿಶ್ವವಿದ್ಯಾಲಯದ ಎಬಿಕೆ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಎಂದು ತಿಳಿದುಬಂದಿದೆ. ಅವರ ತಲೆಗೆ ಗುಂಡು ಹಾರಿಸಲಾಗಿದೆ. ಅವರು ವೈದ್ಯಕೀಯ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾರೆ' ಎಂದು AMU ಪ್ರಾಕ್ಟರ್ ಪ್ರೊಫೆಸರ್ ಮೊಹಮ್ಮದ್ ವಾಸಿಮ್ ಅಲಿ ತಿಳಿಸಿದ್ದಾರೆ.
ಎಷ್ಟು ಬಾರಿ ಗುಂಡು ಹಾರಿಸಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ವರದಿಗಳು ಮೂರು ಗುಂಡು ಹಾರಿಸಿದ್ದಾರೆ ಎಂದು ಸೂಚಿಸಿದರೆ, ಇನ್ನು ಕೆಲವು ವರದಿಗಳು ಐದು ಗುಂಡು ಹಾರಿಸಲಾಗಿದೆ ಎಂದು ಹೇಳಿವೆ.
ಘಟನೆಯ ಬಳಿಕ ವೈದ್ಯಕೀಯ ಕಾಲೇಜಿಗೆ ತಲುಪಿದ ಎಎಂಯು ಉಪಕುಲಪತಿ ನೈಮಾ ಖಾತೂನ್, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಕರಣದ ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಂಪಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ದೃಷ್ಟಿಕೋನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ಮಾಯಾಂಕ್ ಪಾಠಕ್ ಹೇಳಿದ್ದಾರೆ.
ಪೊಲೀಸರು ಸಂತ್ರಸ್ತರ ಕುಟುಂಬದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ, ದಾಳಿಕೋರರನ್ನು ಪತ್ತೆಹಚ್ಚಲು ಕನಿಷ್ಠ ಆರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಕೆಲವೇ ಗಂಟೆಗಳ ನಂತರ ಈ ಕೊಲೆ ನಡೆದಿದೆ. 'ಪ್ರತಿಯೊಬ್ಬ ವ್ಯಕ್ತಿಗೂ ಭದ್ರತೆಯ ವಾತಾವರಣ ಅಗತ್ಯ. ಇಂದು, ಸುಧಾರಿತ ಭದ್ರತಾ ವಾತಾವರಣದಿಂದಾಗಿ ಉತ್ತರ ಪ್ರದೇಶಕ್ಕೆ ಹೂಡಿಕೆ ಬರುತ್ತಿದೆ ಎಂದು ಪ್ರತಿಯೊಬ್ಬರೂ ಹೇಳಬಹುದು' ಎಂದು ಮುಖ್ಯಮಂತ್ರಿ ಹೇಳಿದರು.
'ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದೆ ಮತ್ತು ಯಾವುದೇ ಕೋಮು ಗಲಭೆಗಳಿಲ್ಲ. ಗಲಭೆಕೋರರನ್ನು ಹೇಗೆ ಎದುರಿಸಲಾಗುತ್ತದೆ ಎಂದು ಯಾರಾದರೂ ತಿಳಿದುಕೊಳ್ಳಲು ಬಯಸಿದರೆ, ಅವರು ಬರೇಲಿಯ ಮೌಲಾನಾ ಅವರನ್ನು ಕೇಳಬೇಕು. ಈಗ ಕರ್ಫ್ಯೂ ಇಲ್ಲ ಅಥವಾ ಯಾವುದೇ ಗಲಭೆ ಇಲ್ಲ. ಉತ್ತರ ಪ್ರದೇಶದಲ್ಲಿ ಎಲ್ಲವೂ ಚೆನ್ನಾಗಿದೆ. ಇದು ಹೊಸ ಯುಪಿ' ಎಂದು ಅವರು ಹೇಳಿದರು.
Advertisement