
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಈ ಬಾರಿ ಸೆಕ್ಟರ್ 19 ರಲ್ಲಿರುವ 'ಕಲ್ಪವಾಸಿ' ಟೆಂಟ್ನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು 10 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇನ್ನು ಅವಘಡದಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.
ಪೊಲೀಸ್ ಮೂಲಗಳ ಪ್ರಕಾರ ಓಂ ಪ್ರಕಾಶ್ ಪಾಂಡೆ ಸೇವಾ ಸಂಸ್ಥಾನವು ಸ್ಥಾಪಿಸಿದ್ದ ಟೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ (ಕುಂಭ) ಪ್ರಮೋದ್ ಶರ್ಮಾ ತಿಳಿಸಿದ್ದಾರೆ. ಇದು ಪ್ರಯಾಗ್ರಾಜ್ನ ಕರ್ಮದ ನಿವಾಸಿ ರಾಜೇಂದ್ರ ಜೈಸ್ವಾಲ್ ಅವರಿಗೆ ಸೇರಿದೆ. ವಿಚಾರ ತಿಳಿಯುತ್ತಿದ್ದಂತೆಯೇ ತಕ್ಷಣ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬಳಿಕ ಕೇವಲ ಹತ್ತೇ ನಿಮಿಷಗಳಲ್ಲಿ ಬೆಂಕಿ ನಂದಿಸಲಾಯಿತು. ಈ ಅವಘಡದಲ್ಲಿ ಟೆಂಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಮಾಹಿತಿ ನೀಡಿದ್ದರು.
ಮೂರನೇ ಬಾರಿಗೆ ಅಗ್ನಿ ಅವಘಡ
ಇನ್ನು ಪ್ರಯಾಗ್ ರಾಜ್ ಮಹಾ ಕುಂಭ ಮೇಳದಲ್ಲಿ ಈ ವರೆಗೂ ಒಟ್ಟು ಮೂರು ಬಾರಿ ದೊಡ್ಡ ಬೆಂಕಿ ಅವಘಡ ಸಂಭವಿಸಿದೆ. ಈ ಹಿಂದೆ ಇದೇ ಫೆಬ್ರವರಿ 7 ರಂದು, ಮಹಾಕುಂಭ ನಗರದ ಸೆಕ್ಟರ್ 18 ರಲ್ಲಿರುವ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಒಂದು ಡಜನ್ ಗೂ ಹೆಚ್ಚು ಶಿಬಿರಗಳಿಗೆ ಬೆಂಕಿ ಹರಡಿತು. ಬೆಂಕಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ಸುಮಾರು 20 ಟೆಂಟ್ಗಳು ಸುಟ್ಟು ಹೋಗಿದ್ದವು. ಇದಕ್ಕೂ ಮೊದಲು ಜನವರಿ 19 ರಂದು, ಮಹಾ ಕುಂಭಮೇಳ ಪ್ರದೇಶದ ಸೆಕ್ಟರ್ 19 ರಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಬೆಂಕಿಯ ಪರಿಣಾಮವಾಗಿ ಒಂದು ಡಜನ್ಗೂ ಹೆಚ್ಚು ಶಿಬಿರಗಳು ಸುಟ್ಟುಹೋಗಿದ್ದವು.
ಜನವರಿ 25 ರಂದು, ಮಹಾ ಕುಂಭ ಮೇಳ ಪ್ರದೇಶದ ಸೆಕ್ಟರ್ 2 ರಲ್ಲಿ ಎರಡು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿತು, ಆದರೆ ಯಾವುದೇ ಸಾವುನೋವುಗಳು ವರದಿಯಾಗಿರಲಿಲ್ಲ. ಅಧಿಕಾರಿಗಳ ಪ್ರಕಾರ, ಒಂದು ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು, ನಂತರ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೊಂದು ವಾಹನಕ್ಕೂ ಹರಡಿತು. ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯುತ್ತದೆ.
Advertisement