
ಮುಂಬೈ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಿವಾಸಿ ನೀಲಂ ಶಿಂದೆ (35) ಕೋಮಾಗೆ ಜಾರಿದ್ದಾರೆ. ಈ ಹಿನ್ನೆಲೆಯಲ್ಲಿ, ಆಕೆಯನ್ನು ಭೇಟಿ ಮಾಡಲು ತುರ್ತು ವೀಸಾ ವ್ಯವಸ್ಥೆಗೊಳಿಸಬೇಕು ಎಂದು ಕುಟುಂಬದ ಸದಸ್ಯರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ನಾಲ್ಕು ಚಕ್ರದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನೀಲಂ ಶಿಂದೆಗೆ ಸದ್ಯ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಸಂಬಂಧ ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದಲ್ಲಿ ನೀಲಂ ಶಿಂದೆಯ ಕೈ ಮತ್ತು ಕಾಲುಗಳ ಮೂಳೆ ಮುರಿದಿದ್ದು, ತಲೆಗೂ ಪೆಟ್ಟಾಗಿದೆ ಎಂದು ಆಕೆಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಫೆಬ್ರವರಿ 16ರಂದು ನಮಗೆ ಅಪಘಾತದ ಬಗ್ಗೆ ತಿಳಿಯಿತು. ಅಂದಿನಿಂದ ನಾವು ವೀಸಾಗಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ನಮಗಿನ್ನೂ ವೀಸಾ ದೊರೆತಿಲ್ಲ ಎಂದು ನೀಲಂ ಶಿಂದೆಯ ತಂದೆ ತಾನಾಜಿ ಶಿಂದೆ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಫೆಬ್ರವರಿ 16ರಂದು ಆಕೆಯ ಸ್ನೇಹಿತರು ನಮಗೆ ಅಪಘಾತದ ಕುರಿತು ಮಾಹಿತಿ ನೀಡಿದರು ಎಂದು ನೀಲಂ ಶಿಂದೆಯ ಚಿಕ್ಕಪ್ಪ ಸಂಜಯ್ ಕದಂ ತಿಳಿಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ಆಕೆಗೆ ಮಿದುಳು ಶಸ್ತ್ರಚಿಕಿತ್ಸೆ ನೆರವೇರಿಸಲು ನಮ್ಮ ಅನುಮತಿ ಪಡೆಯಿತು. ಸದ್ಯ ಆಕೆಯೀಗ ಕೋಮಾದಲ್ಲಿದ್ದು, ನಾವೀಗ ಅಲ್ಲಿರಬೇಕಿದೆ ಎಂದೂ ಅವರು ಹೇಳಿದ್ದಾರೆ.
ಈ ನಡುವೆ, ಶಿಂದೆ ಕುಟುಂಬದ ಸದಸ್ಯರು ವೀಸಾ ಪಡೆಯಲು ನೆರವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಮನವಿ ಮಾಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದ್ದು, ನಾವೆಲ್ಲರೂ ಒಟ್ಟಾಗಿ ಪರಿಹರಿಸಲು ಅವರಿಗೆ ಸಹಾಯ ಮಾಡಬೇಕಾಗಿದೆ. ನಾನು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆಯನ್ನು ಆದಷ್ಟು ಶೀಘ್ರವೇ ಬಗೆಹರಿಸುವ ಭರವಸೆ ನೀಡಿರವುದಾಗಿ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
Advertisement