Dallewal
ದಲ್ಲೇವಾಲ್online desk

Farmers Protest: ದಲ್ಲೇವಾಲ್ ರಕ್ತದೊತ್ತಡದಲ್ಲಿ ಏರುಪೇರು, ಆರೋಗ್ಯ ಸ್ಥಿತಿ ಚಿಂತಾಜನಕ; ವೈದ್ಯರಿಂದ ಮಾಹಿತಿ

ಡಿಸೆಂಬರ್ 20 ರಂದು, ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಿ ಅಧಿಕಾರಿಗಳು ಮತ್ತು ವೈದ್ಯರ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ನಿರ್ಧರಿಸುವ ಜವಾಬ್ದಾರಿಯನ್ನು ವಹಿಸಿತ್ತು.
Published on

ಚಂಡೀಗಢ: ರೈತರ ಬೇಡಿಕೆಗಳಿಗೆ ಒತ್ತಾಯಿಸಿ 42 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಸಂಜೆ ರಕ್ತದೊತ್ತಡದಲ್ಲಿ ಕುಸಿತವಾಗಿದೆ ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ 70 ವರ್ಷದ ದಲ್ಲೆವಾಲ್ ಅವರನ್ನು ಭೇಟಿಯಾಗಿ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಒತ್ತಾಯಿಸಿತು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ಪಂಜಾಬ್ ಸರ್ಕಾರ ನೀಡಿದ ವೈದ್ಯಕೀಯ ನೆರವು ಪಡೆಯಲು ದಲ್ಲೇವಾಲ್ ನಿರಾಕರಿಸಿದ್ದಾರೆ. ದಲ್ಲೆವಾಲ್ ಅವರ ರಕ್ತದೊತ್ತಡ 80/56ಕ್ಕೆ ಕುಸಿದಿದ್ದು, ಏರುಪೇರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

"ಅವರ ಸ್ಥಿತಿ ಹದಗೆಟ್ಟಿದೆ. ಅವರ ರಕ್ತದೊತ್ತಡ ತೀವ್ರವಾಗಿ ಕುಸಿದಿದೆ. ಅವರ ಸ್ಥಿತಿಯನ್ನು ನೋಡಿದ ನಂತರ ನಾವು ಆತಂಕಗೊಂಡಿದ್ದೇವೆ. ನಾವು ಅವರಿಗೆ ಯಾವುದೇ ವೈದ್ಯಕೀಯ ನೆರವು ನೀಡಲು ಸಾಧ್ಯವಿಲ್ಲ" ಎಂದು ಡಾ ಅವತಾರ್ ಸಿಂಗ್ ಹೇಳಿದ್ದಾರೆ.

"ನಾವು ಅವರ ಕಾಲುಗಳನ್ನು ಮೇಲಕ್ಕೆತ್ತಿದ್ದೇವೆ, ಅದರ ನಂತರ ಅವರ ರಕ್ತದ ಹರಿವು ಸ್ವಲ್ಪ ಸುಧಾರಿಸಿದೆ" ಎಂದು ಎನ್‌ಜಿಒ '5 ರಿವರ್ಸ್ ಹಾರ್ಟ್ ಅಸೋಸಿಯೇಷನ್' ತಂಡದ ಭಾಗವಾಗಿರುವ ಸಿಂಗ್ ಹೇಳಿದ್ದಾರೆ. ಅವರ ರಕ್ತದೊತ್ತಡ ಮತ್ತು ನಾಡಿಮಿಡಿತದಲ್ಲಿ ಏರುಪೇರಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಚಾಲಕರಾಗಿರುವ ದಲ್ಲೆವಾಲ್ ಅವರು ಕಳೆದ ವರ್ಷ ನವೆಂಬರ್ 26 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಮೇಲೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Dallewal
'ರೈತರಿಗಿಂತ ನನ್ನ ಜೀವ ಮುಖ್ಯವಲ್ಲ': ಖಾನೌರಿ ಮಹಾಪಂಚಾಯತ್‌ನಲ್ಲಿ ದಲ್ಲೆವಾಲ್

ಡಿಸೆಂಬರ್ 20 ರಂದು, ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಿ ಅಧಿಕಾರಿಗಳು ಮತ್ತು ವೈದ್ಯರ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ನಿರ್ಧರಿಸುವ ಜವಾಬ್ದಾರಿಯನ್ನು ವಹಿಸಿತ್ತು.

ಉಪವಾಸದ ಸಮಯದಲ್ಲಿ ದಲ್ಲೆವಾಲ್‌ ಏನೂ ಸೇವಿಸಿರಲಿಲ್ಲ ಎಂದು ರೈತ ಮುಖಂಡರು ಈ ಹಿಂದೆ ಹೇಳಿದ್ದರು, ಅವರು ಕೇವಲ ನೀರನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಹಲವಾರು ದಿನಗಳಲ್ಲಿ, ಪಂಜಾಬ್ ಸರ್ಕಾರ ದಲ್ಲೆವಾಲ್ ಅವರ ಉಪವಾಸವನ್ನು ಮುರಿಯಲು ಬಯಸದಿದ್ದರೆ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಮನವೊಲಿಸಲು ಅಧಿಕಾರಿಗಳ ಮೂಲಕ ಹಲವಾರು ಪ್ರಯತ್ನಗಳನ್ನು ಮಾಡಿದೆ, ಆದರೆ ಇದಕ್ಕೆ ಅವರು ನಿರಾಕರಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನವಾಬ್ ಸಿಂಗ್ ನೇತೃತ್ವದ ಉನ್ನತಾಧಿಕಾರ ಸಮಿತಿ ಸೋಮವಾರ ದಲ್ಲೆವಾಲ್ ಅವರನ್ನು ಭೇಟಿ ಮಾಡಿ ವೈದ್ಯಕೀಯ ನೆರವು ಪಡೆಯುವಂತೆ ಒತ್ತಾಯಿಸಿದೆ. ದಲ್ಲೆವಾಲ್ ಅವರನ್ನು ಭೇಟಿಯಾದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, "ನಾವೆಲ್ಲರೂ ಅವರಿಗೆ ವೈದ್ಯಕೀಯ ನೆರವು ಪಡೆಯುವುದಕ್ಕೆ ಪದೇ ಪದೇ ವಿನಂತಿಸಿದ್ದೇವೆ. ಅವರ ಆರೋಗ್ಯ ಚೆನ್ನಾಗಿರಬೇಕೆಂದು ನಾವು ಬಯಸುತ್ತೇವೆ."

"ನಾನು ಇಂದು ಇಲ್ಲಿಗೆ ಬಂದಿರುವುದು ಆಂದೋಲನ ಕೊನೆಗೊಳ್ಳಬೇಕು ಎಂದು ಹೇಳಲು ಅಲ್ಲ, ಆದರೆ ನಿಮ್ಮ (ದಲ್ಲೆವಾಲ್) ಆರೋಗ್ಯ ಚೆನ್ನಾಗಿರಬೇಕು ಎಂದು ಹೇಳಲು" ಎಂದು ನವಾಬ್ ಸಿಂಗ್ ಹೇಳಿದ್ದಾರೆ.

Dallewal
ವಿಳಂಬ ಧೋರಣೆ ಬಿಡಿ, ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಿ: ಸರ್ಕಾರಕ್ಕೆ ರೈತನಾಯಕ ದಲ್ಲೇವಾಲ್

ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 2024 ರಲ್ಲಿ, ಪ್ರತಿಭಟನಾ ನಿರತ ರೈತರ ಕುಂದುಕೊರತೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸಿತು.

ಸಮಿತಿಯು ನಿವೃತ್ತ ಐಪಿಎಸ್ ಅಧಿಕಾರಿ ಬಿ ಎಸ್ ಸಂಧು, ಕೃಷಿ ತಜ್ಞ ದೇವಿಂದರ್ ಶರ್ಮಾ, ಪ್ರೊಫೆಸರ್ ರಂಜಿತ್ ಸಿಂಗ್ ಘುಮಾನ್ ಮತ್ತು ಡಾ ಸುಖಪಾಲ್ ಸಿಂಗ್, ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರಜ್ಞರನ್ನು ಒಳಗೊಂಡಿದೆ.

ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್‌ನಡಿಯಲ್ಲಿ ರೈತರು ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com