
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಜಂಟಿ ಸಮಿತಿ (JPC)ಸೋಮವಾರ ಅನುಮೋದನೆ ನೀಡಿದೆ. ಆಡಳಿತಾರೂಢ ಬಿಜೆಪಿಯ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ನಡೆದ ಸಮಿತಿಯಲ್ಲಿ 14 ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಅಂಗೀಕರಿಸಲಾಯಿತು.
ವಿರೋಧ ಪಕ್ಷದ ಸದಸ್ಯರು 44 ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಅವೆಲ್ಲವನ್ನೂ ತಿರಸ್ಕರಿಸಲಾಗಿದೆ. ಪ್ರಸ್ತಾವಿತ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಜೆಪಿಸಿಯ ಸದಸ್ಯರಲ್ಲಿ ಒಬ್ಬರಾಗಿರುವ ಡಿಎಂಕೆ ಸಂಸದ ಎ.ರಾಜಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎ. ರಾಜಾ, ಖಂಡಿತವಾಗಿಯೂ ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ. ಡಿಎಂಕೆ, ನಾನೇ ಅರ್ಜಿ ಸಲ್ಲಿಸುತ್ತೇನೆ. ಪ್ರಸ್ತಾವಿತ ಕಾನೂನು ಅಸಂವಿಧಾನಿಕವಾಗಿದ್ದು, ಅದರ ವಿರುದ್ಧ ತಮ್ಮ ಪಕ್ಷ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದರು.
ಸಮಿತಿಯಲ್ಲಿ ಸಲ್ಲಿಸಿದ ದಾಖಲೆಗಳು ಮತ್ತು ಅಂಶಗಳು ಮುಂದೆ ಕಾನೂನು ಹೋರಾಟದಲ್ಲಿ ಪ್ರಯೋಜನಕಾರಿಯಾಗಲಿವೆ. ಜಗದಾಂಬಿಕಾ ಪಾಲ್ ನಡವಳಿಗಳನ್ನು ಅಪಹಾಸ್ಯ ಮಾಡಿದ್ದಾರೆ. ವರದಿ ಈಗಾಗಲೇ ಸಿದ್ಧವಾಗಿದೆ ಅನಿಸುತ್ತಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳ ತಿದ್ದುಪಡಿಗಳನ್ನು ಪಾಲ್ ಅವರೇ ಮಂಡಿಸಿದರು. ನಂತರ ಅವರೇ ಸಭೆಯಲ್ಲಿ ಹಾಜರಿದ್ದ ಸದಸ್ಯರನ್ನು ಎಣಿಸಿ, ಅನುಮೋದನೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಪಕ್ಷಗಳಿಗೆ ನೀಡಿದ ಭರವಸೆಯಂತೆ ಯಾವುದೇ ದಾಖಲೆಗಳನ್ನು ನೀಡಲಿಲ್ಲ ಎಂದು ಆರೋಪಿಸಿದರು.
ಸಮಿತಿ ತನ್ನ ವರದಿಯನ್ನು ಅಂಗೀಕರಿಸಲು ಬುಧವಾರ ಕೊನೆಯ ಬಾರಿಗೆ ಸಭೆ ಸೇರಲಿದ್ದು, ಜನವರಿ 31 ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದ ನಂತರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ.
Advertisement