
ಚೆನ್ನೈ: ರಾಜಕೀಯಕ್ಕೆ ಕಾಲಿಟ್ಟ ನಂತರ ಮೊದಲ ಬಾರಿಗೆ ಸಾರ್ವಜನಿಕ ಪ್ರತಿಭಟನೆಗೆ ಧುಮ್ಮುಕ್ಕಿದ ಟಿವಿಕೆ ಸಂಸ್ಥಾಪಕ ಮತ್ತು ನಟ ವಿಜಯ್ ಭಾನುವಾರ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಾಲ್ಕು ವರ್ಷಗಳ ಆಡಳಿತದಲ್ಲಿ ಸಂಭವಿಸಿರುವ ಲಾಕಪ್ ಡೆತ್ ಆರೋಪಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಿವಗಂಗಾ ಜಿಲ್ಲೆಯ ಮಡಪ್ಪುರಂನಲ್ಲಿ ದೇವಾಲಯದ ಭದ್ರತಾ ಸಿಬ್ಬಂದಿ ಅಜಿತ್ಕುಮಾರ್ ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದ ಸಿಎಂ ನಡೆಯನ್ನು ಟೀಕಿಸಿದ ಟಿವಿಕೆ ನಾಯಕ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದೆ ಸ್ಟಾಲಿನ್ ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, "ಸಿಬಿಐ ಆರ್ಎಸ್ಎಸ್ ಮತ್ತು ಬಿಜೆಪಿಯ ಕೈಗೊಂಬೆಯಾಗಿ ಮುಂದುವರೆದಿದೆ. ಅಜಿತ್ಕುಮಾರ್ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸುವ ಮೂಲಕ ನೀವೇಕೆ ಅವರ ಹಿಂದೆ ಅಡಗಿಕೊಂಡಿದ್ದೀರಿ?ಎಂದು ಪ್ರಶ್ನಿಸಿದರು.
ಅಜಿತ್ಕುಮಾರ್ ಕುಟುಂಬಕ್ಕೆ ‘ಕ್ಷಮಿಸಿ’ ಎಂದು ಕೇಳಿದ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡ ವಿಜಯ್, “ನೀವು ಅಜಿತ್ಕುಮಾರ್ ಕುಟುಂಬಕ್ಕೆ ಸಾರಿ ಕೇಳಿದ್ದೀರಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ನಿಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ಕುಟುಂಬಗಳಿಗೆ ‘ಕ್ಷಮಿಸಿ’ ಎಂದು ಹೇಳಿದ್ದೀರಾ? ಅವರಿಗೆ ಪರಿಹಾರ ನೀಡಿದ್ದೀರಾ? ಎಂದು ಟೀಕಾ ಪ್ರಹಾರ ನಡೆಸಿದರು.
ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಅಜಿತ್ಕುಮಾರ್ ಪ್ರಕರಣದವರೆಗೆ ನ್ಯಾಯಾಲಯವು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದೆ. ಎಲ್ಲಾ ದೌರ್ಜನ್ಯಗಳನ್ನು ನ್ಯಾಯಾಲವೇ ಪ್ರಶ್ನಿಸಬೇಕಾದರೆ ನೀವೇಕೆ ವ್ಯವಹಾರದ ಚುಕ್ಕಾಣಿ ಹಿಡಿದಿದ್ದೀರಿ? ಸಿಎಂ ಹುದ್ದೆಯನ್ನು ಏಕೆ ಹೊಂದಿದ್ದೀರಿ ಎಂದು ಪ್ರಶ್ನಿಸಿದ ವಿಜಯ್, ಅನೇಕ ಪ್ರಶ್ನೆಗಳಿದ್ದರೂ ಸಿಎಂ ಅವರಿಂದ ಯಾವುದೇ ಉತ್ತರ ಸಿಗುತ್ತಿಲ್ಲ. ನಿಮ್ಮಿಂದ ನಾವು ನಿರೀಕ್ಷಿಸಬಹುದಾದ ಅಂತಿಮ ಉತ್ತರವೆಂದರೆ 'ಕ್ಷಮಿಸಿ ಮಾ!'.ಒಂದು ಅಹಿತಕರ ಘಟನೆ ಸಂಭವಿಸಿದೆ. ಅಷ್ಟೇ ಅಂತಾ ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
ಸುಮಾರು 30 ನಿಮಿಷಗಳ ಕಾಲ ವೇದಿಕೆಯಲ್ಲಿದ್ದ ವಿಜಯ್, ಲಾಕಪ್ ಡೆತ್ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾದರು. ಮರೀನಾ ಬೀಚ್ ಬಳಿಯ ಶಿವಾನಂದ ಸಾಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿವಿಕೆಯ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡರು.
Advertisement