ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಉಚಿತ ವಿದ್ಯುತ್ ಘೋಷಣೆ: ಬಿಹಾರ ಸಿಎಂ ನಿತೀಶ್ ಕುಮಾರ್

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಜೆಡಿಯು ಮುಖ್ಯಸ್ಥರು ಈ ಹೇಳಿಕೆ ನೀಡಿದರು. ಅಲ್ಲಿ ಅವರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
Bihar CM Nitish Kumar- PM Narendra Modi
ಬಿಹಾರ ಸಿಎಂ ನಿತೀಶ್ ಕುಮಾರ್- ಪ್ರಧಾನಿ ನರೇಂದ್ರ ಮೋದಿonline desk
Updated on

ಮೋತಿಹಾರಿ (ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ರಾಜ್ಯದಲ್ಲಿ ತಿಂಗಳಿಗೆ 125 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಜೆಡಿಯು ಮುಖ್ಯಸ್ಥರು ಈ ಹೇಳಿಕೆ ನೀಡಿದರು. ಅಲ್ಲಿ ಅವರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಆ ವೇಳೆ 7,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು.

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಎಲ್ಲ ಗೃಹಬಳಕೆದಾರರಿಗೆ ಆಗಸ್ಟ್ 1 ರಿಂದ ತಿಂಗಳಿಗೆ 125 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಗುರುವಾರ ನಿತೀಶ್ ಕುಮಾರ್ ಘೋಷಿಸಿದ್ದರು. 'ಜನರು ಇನ್ಮುಂದೆ ವಿದ್ಯುತ್‌ಗೆ ಏನನ್ನೂ ಪಾವತಿಸಬೇಕಾಗಿಲ್ಲ. ಸರ್ (ಪ್ರಧಾನಿ) ಹೋದ ನಂತರ, ನಾವು (ಪಾಟ್ನಾಕ್ಕೆ) ಹಿಂತಿರುಗುತ್ತೇವೆ ಮತ್ತು ಈ ಸಂಬಂಧ ಅಗತ್ಯ ಅನುಮತಿ ನೀಡುತ್ತೇವೆ. ಈ ಕಾರಣಕ್ಕಾಗಿಯೇ ದಿನದ ಕೊನೆಯಲ್ಲಿ ಸಂಪುಟ ಸಭೆ ಕರೆಯಲಾಗಿದೆ' ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸತತ ಐದನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಮೋದಿ ಅವರ ವರ್ಚಸ್ಸನ್ನು ಅವಲಂಬಿಸಿರುವ ನಿತೀಶ್ ಕುಮಾರ್, 'ನಾವು ಅವರನ್ನು ತುಂಬಾ ಗೌರವಿಸುತ್ತೇವೆ ಮತ್ತು ಅವರ ಸಲಹೆಗೆ ಅನುಗುಣವಾಗಿ ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಹೇಳಿದರು.

ಉಚಿತ ಕೊಡುಗೆಗಳನ್ನು ವಿರೋಧಿಸುವುದಾಗಿ ಎನ್‌ಡಿಎ ಹೇಳಿಕೊಂಡಿದ್ದರೂ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ '200 ಯೂನಿಟ್ಸ್ ಉಚಿತ ವಿದ್ಯುತ್' ಘೋಷಣೆಗೆ ಸೆಡ್ಡು ಹೊಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

Bihar CM Nitish Kumar- PM Narendra Modi
ಚುನಾವಣೆಗೂ ಮುನ್ನ ಬಿಹಾರ ಜನತೆಗೆ ಜಾಕ್‌ಪಾಟ್; 125 ಯೂನಿಟ್‌ವರೆಗೆ ಉಚಿತ ವಿದ್ಯುತ್; ಸಿಎಂ ನಿತೀಶ್ ಕುಮಾರ್ ಘೋಷಣೆ

ಹಣಕಾಸು ಖಾತೆಯನ್ನು ಹೊಂದಿರುವ ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, 'ಇದು ಉಚಿತ ಕೊಡುಗೆ ಅಲ್ಲ. ಇದು ಸರ್ಕಾರ ಒದಗಿಸಲಿರುವ 100 ಪ್ರತಿಶತ ಸಬ್ಸಿಡಿ' ಎಂದು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

'ಪ್ರತಿ ತಿಂಗಳು ಬಿಹಾರದ ವಿವಿಧ ಭಾಗಗಳಿಗೆ ಭೇಟಿ ನೀಡಲು ಸಮಯ ಮಾಡಿಕೊಂಡಿದ್ದಕ್ಕಾಗಿ' ನಿತೀಶ್ ಕುಮಾರ್ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು.

ಮೋತಿಹಾರಿಗೆ ಪ್ರಧಾನಿ ಮೋದಿಯವರ ಪ್ರವಾಸವು ಈ ವರ್ಷ ಬಿಹಾರ ರಾಜ್ಯಕ್ಕೆ ಅವರ ಆರನೇ ಭೇಟಿಯಾಗಿದೆ ಮತ್ತು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರ ಪ್ರಕಾರ, '2014 ರಲ್ಲಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ 53ನೇ ಭೇಟಿಯಾಗಿದೆ'.

ಪ್ರಧಾನಿಯವರು ತಮ್ಮ ರಾಜ್ಯಕ್ಕೆ ನೀಡುತ್ತಿರುವ ಬಗ್ಗೆ ಭಾವುಕರಾದ ನಿತೀಶ್ ಕುಮಾರ್, 'ಇದೊಂದು ದೊಡ್ಡ ವಿಷಯ. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾವು ಅವರಿಗೆ ಚಪ್ಪಾಳೆ ತಟ್ಟೋಣ. ಆದ್ದರಿಂದ ಇಲ್ಲಿಗೆ ಬಂದಿರುವವರೆಲ್ಲರೂ ದಯವಿಟ್ಟು ಎದ್ದೇಳಿ' ಎಂದು ಹೇಳಿದರು.

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ಸಂಬಂಧಿಸಿದ ಹಲವಾರು ನಿರ್ದಿಷ್ಟ ಘೋಷಣೆಗಳಿಗಾಗಿ ಮತ್ತು ಈ ವರ್ಷದ ಆರಂಭದಲ್ಲಿ ರಾಜ್ಯವು 'ಖೇಲೋ ಇಂಡಿಯಾ' ಪಂದ್ಯಾವಳಿಯನ್ನು ಆಯೋಜಿಸಲು ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸಿದರು.

'ನಾವು ಅಧಿಕಾರ ವಹಿಸಿಕೊಂಡ ನಂತರವೇ ಬಿಹಾರದಲ್ಲಿ ಆಡಳಿತವು ಶ್ರದ್ಧೆಯಿಂದ ಪ್ರಾರಂಭವಾಯಿತು. ಹಿಂದೆ ಅಧಿಕಾರದಲ್ಲಿದ್ದವರು ಹಣವನ್ನು ಸರಿಯಾಗಿ ಖರ್ಚು ಮಾಡಲು ಸಹ ಸಾಧ್ಯವಾಗಲಿಲ್ಲ. ಯಾವುದೇ ಅಭಿವೃದ್ಧಿ ಇರಲಿಲ್ಲ, ಮೂಲಸೌಕರ್ಯವೂ ಇರಲಿಲ್ಲ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com