
ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಮಹಾಭಿಯೋಗ ನಿರ್ಣಯದ ಕುರಿತು ವಿರೋಧ ಪಕ್ಷಗಳ ನಾಯಕರು ಸಹಿ ಮಾಡಿದ ಪತ್ರವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಸ್ಪೀಕರ್ಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, 100ಕ್ಕೂ ಹೆಚ್ಚು ಸಂಸತ್ ಸದಸ್ಯರು, ಸಂಸತ್ತಿನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಮಂಡಿಸಲಾಗುವ ಮಹಾಭಿಯೋಗ ನಿರ್ಣಯದ ಕರಡಿಗೆ ಸಹಿ ಹಾಕಿದ್ದಾರೆ.
ಭಾನುವಾರದಂದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆಗಾಗಿ 100ಕ್ಕೂ ಹೆಚ್ಚು ಸಂಸದರ ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದರು.
"ಸಹಿ(ಸಂಗ್ರಹಣೆ) ನಡೆಯುತ್ತಿದೆ ಮತ್ತು ಅದು ಈಗಾಗಲೇ 100 ದಾಟಿದೆ" ಎಂದು ನ್ಯಾಯಮೂರ್ತಿ ವರ್ಮಾ ವಿರುದ್ಧದ ಮಹಾಭಿಯೋಗ ನಿರ್ಣಯ ಪ್ರಕ್ರಿಯೆಗೆ ಸಂಸದರ ಅಗತ್ಯ ಸಹಿಗಳ ಸ್ಥಿತಿಯ ಕುರಿತು ಕೇಳಿದ ಪ್ರಶ್ನೆಗೆ ಕಿರಣ್ ರಿಜಿಜು ಉತ್ತರಿಸಿದ್ದರು.
ಇಂದಿನಿಂದ ಪ್ರಾರಂಭವಾಗಿರುವ ಮಳೆಗಾಲದ ಅಧಿವೇಶನದಲ್ಲಿ ಸಂಸತ್ತು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆಯೇ ಎಂದು ಕೇಳಿದಾಗ, ಕೇಂದ್ರ ಸಚಿವರು, "ಜಸ್ಟಿಸ್ ವರ್ಮಾ ಪ್ರಕರಣದಲ್ಲಿ, ಎಲ್ಲಾ ಪಕ್ಷಗಳು ಒಟ್ಟಾಗಿ ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತವೆ. ಇದು ಸರ್ಕಾರ ಮಾತ್ರ ತೆಗೆದುಕೊಂಡ ಕ್ರಮವಲ್ಲ" ಎಂದು ಹೇಳಿದರು.
ಕಳೆದ ಏಪ್ರಿಲ್ 8 ರ ರಾತ್ರಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಗಣನೀಯ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳ ನಂತರ ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನು ಅವರಿಗೆ ಸುಪ್ರೀಂ ಕೋರ್ಟ್ ನೀಡಿತ್ತು. ಆದರೆ ಅವರು ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರ ಪದಚ್ಯುತಿಗೆ ಕೇಂದ್ರ ಸರ್ಕಾರ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಿದೆ.
Advertisement