
ನವದೆಹಲಿ: ತನಿಖೆಯ ಸಂದರ್ಭದಲ್ಲಿ ಕಾನೂನು ಸಲಹೆ ನೀಡುವ ಅಥವಾ ಕಕ್ಷಿದಾರರನ್ನು ಪ್ರತಿನಿಧಿಸುವ ವಕೀಲರಿಗೆ ಸಮನ್ಸ್ ನೀಡುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಜಾರಿ ನಿರ್ದೇಶನಾಲಯ (ಇಡಿ) ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಸೋಮವಾರ ಹೇಳಿದೆ.
ಈ ಕುರಿತು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಕೇಸ್ ಗಳ ತನಿಖೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠ, "ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂಭಾಷಣೆಯು ವಿಶೇಷ ಸಂವಹನವಾಗಿದೆ. ಅವರ ವಿರುದ್ಧ ನೋಟಿಸ್ ನೀಡುವುದು ಹೇಗೆ? ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಅಭಿಪ್ರಾಯಪಟ್ಟಿತು.
ಈ ವಿಷಯದ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇತ್ತೀಚೆಗೆ ಇಬ್ಬರು ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರು ನೀಡಿದ ಕಾನೂನು ಸಲಹೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದ ED ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ವಕೀಲರ ಸಂಘಗಳ ಪ್ರತಿಭಟನೆಯ ನಂತರ ಇಡಿ ವಕೀಲರಿಗೆ ನೀಡಿದ್ದ ಸಮನ್ಸ್ ಹಿಂಪಡೆದಿದ್ದು, ಇಡಿ ನಿರ್ದೇಶಕರ ಪೂರ್ವಾನುಮತಿ ಇಲ್ಲದೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಇದಕ್ಕೂ ಮುನ್ನಾ ಸಿಜೆಐ ಗವಾಯಿ ಅವರಿಗೆ ಪತ್ರ ಬರೆದಿದ್ದ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (SCAORA) ಅಧ್ಯಕ್ಷ ವಿಪಿನ್ ನಾಯರ್, ಇಡಿ ಕ್ರಮ ವಕೀಲರು ಮತ್ತು ಕ್ಷಕಿದಾರರ ನಡುವಣ ಗೌಪ್ಯತೆಯ ಸಿದ್ದಾಂತ ಮತ್ತು ಸ್ವಾತಂತ್ರ್ಯ ನಂತರದ ಕಾನೂನು ವೃತ್ತಿದಾರರ ಮೇಲಿನ ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ಹಿರಿಯ ವಕೀಲರಿಗೆ ಸಮನ್ಸ್ ನೀಡಿದ ಇಡಿ ಕ್ರಮ ಸಂಪೂರ್ಣವಾಗಿ ಕಾನೂನುಬಾಹಿರ, ಅಸಂವಿಧಾನಿಕ, ಅನಧಿಕೃತ ಹಾಗೂ ಇದು ದುಃಖಕರ ಮತ್ತು ದುರದೃಷ್ಟಕರವಾಗಿದೆ. ವಕೀಲರಿಗೆ ಸಮನ್ಸ್ ನೀಡುವ ಕ್ರಮವು ಆತಂಕಕಾರಿ ಅಭ್ಯಾಸವಾಗಿದೆ ಮತ್ತು ಇದರ ಜೊತೆಗೆ ಸೆಕ್ಷನ್ 130 ರ ಅಧಿಯ 130 ರ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಕಕ್ಷಿದಾರರಿಗೆ ಸಲಹೆ ನೀಡುವುದರಿಂದ ವಕೀಲರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು TNIEಗೆ ವಿಪಿನ್ ನಾಯರ್ ಹೇಳಿದ್ದಾರೆ.
Advertisement