ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ: ಆತಂಕದಲ್ಲಿ ಜನತೆ, ತನಿಖೆ ಆರಂಭ
ಅಮೃತಸರ: ಪಂಜಾಬ್ ರಾಜ್ಯದ ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ ಸಂಭವಿಸಿದ್ದು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ಘಟನೆ ಶನಿವಾರ ನಡೆದಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ, ಸ್ಫೋಟದ ಶಬ್ದಕ್ಕೆ ಖಂಡ್ವಾಲಾ ಪ್ರದೇಶದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
ಘಟನೆಯ ವಿಡಿಯೋ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಗಳು ದೇವಾಲಯದ ಬಳಿ ಬೈಕ್ನಲ್ಲಿ ಬಂದಿರುವುದು, ಕೆಲ ಸೆಕೆಂಡುಗಳ ಕಾಲ ಕಾದು ದೇವಾಲಯದತ್ತ ಸ್ಫೋಟಕಗಳನ್ನು ಎಸೆದು, ಪರಾರಿಯಾಗಿರುವ ದೃಶ್ಯ ಕಂಡು ಬಂದಿದೆ.
ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಘಟನೆ ಕರಿತು ದೇವಾಲಯದ ಅರ್ಚಕರು ಮಾಹಿತಿ ನೀಡಿದರು ಎಂದು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲಾರ್ ಅವರು ಹೇಳಿದ್ದಾರೆ.
ಮಾಹಿತಿ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸ್ಫೋಟಕಗಳನ್ನು ಎಸೆದ ವ್ಯಕ್ತಿಗಳ ಪತ್ತೆಗೆ ತಂಡ ರಚಿಸಲಾಗಿದೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೀಗ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಮೃತಸರ ಹಾಗೂ ಗುರುದಾಸಪುರ ಪ್ರದೇಶಗಳಲ್ಲಿ ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿಕೊಂಡು ಹಲವು ದಾಳಿಗಳು ನಡೆದಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ