India ಎಂದರೆ ಹೆದರಿ ನಡುಗುತ್ತೆ Pakistan: 1993 ರ CIA ಗೌಪ್ಯ ದಾಖಲೆಯಲ್ಲಿ ಅಂಶ ಬಹಿರಂಗ!
ನ್ಯೂಯಾರ್ಕ್: ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿಷೇಧಿತ ಲಷ್ಕರ್-ಎ-ತೈಬಾ (LeT) ನ ಒಂದು ಶಾಖೆ ಎಂದು ನಂಬಲಾದ ಮತ್ತು ಪಾಕಿಸ್ತಾನದ ಸರ್ಕಾರಿ ಬೆಂಬಲಿತವಾದ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹಿಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪಾಕಿಸ್ತಾನ ಈ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುತ್ತದೆ.
ಒಂದೆಡೆ ತನ್ನ ಕೈವಾಡ ನಿರಾಕರಿಸುತ್ತಲೇ ಇರುವ ಪಾಕಿಸ್ತಾನ ಭಾರತ ಕೈಗೊಂಡಿರುವ ಕ್ರಮಗಳಿಂದ ಮಧ್ಯರಾತ್ರಿಯಲ್ಲೂ ಸುದ್ದಿಗೋಷ್ಠಿ ನಡೆಸಿ ಭಾರತದ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸುವ ಮಟ್ಟಕ್ಕೆ ಹೆದರಿದೆ.
ಈ ಇತ್ತೀಚಿನ ದುರಂತ ಹಾಗೂ ಭಾರತದೆಡೆಗಿನ ಭಯದ ಹಿಂದೆ ದಶಕಗಳಷ್ಟು ಹಳೆಯದಾದ ವಾಸ್ತವವಿದೆ. ಈ ಅಂಶವನ್ನು ಯುಎಸ್ ಗುಪ್ತಚರ ಇಲಾಖೆ ಬಹಿರಂಗಪಡಿಸಿರುವ ಮಾಹಿತಿ ಖಚಿತಪಡಿಸುತ್ತಿದೆ. 1993 ರಲ್ಲಿ, CIA ರಹಸ್ಯ ದಾಖಲೆಯಿಂದ ಈ ಮಾಹಿತಿ ಲಭ್ಯವಾಗಿದೆ.
ಸಿಐಎ ದಾಖಲೆಗಳ ಪ್ರಕಾರ, ಪಾಕಿಸ್ತಾನ ಭಾರತಕ್ಕೆ ಭಯಪಡುತ್ತದೆ. ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಮಾತ್ರವಲ್ಲ, ಅಸ್ತಿತ್ವದ ದೃಷ್ಟಿಯಿಂದಲೂ ಪಾಕ್ ಗೆ ಭಾರತ ಎಂದರೆ ಭಯ. ರಾಷ್ಟ್ರೀಯ ಗುಪ್ತಚರ ಅಂದಾಜು (NIE) ಎಂಬ ದಾಖಲೆಯು ಭಾರತ-ಪಾಕಿಸ್ತಾನದ ಬೆಳವಣಿಗೆಗಳನ್ನು ಅಧ್ಯಯನ ಮಾಡಿ ಒಂದು ತೀರ್ಮಾನವನ್ನು ನೀಡಿತು. ಯುದ್ಧ ಭುಗಿಲೆದ್ದರೆ, ಅದು ಕಾಶ್ಮೀರದಂತಹದರೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದ್ದು ಪಾಕಿಸ್ತಾನ ಆರಂಭದಿಂದಲೂ ಹಿಂದೆ ಸರಿಯುತ್ತದೆ ಎಂದು ಅದರಲ್ಲಿ ವಿಶ್ಲೇಷಿಸಲಾಗಿದೆ.
1993ರ ಮುನ್ಸೂಚನೆ
NIE ನ್ನು CIA ಯ ಅನುಭವಿ ಅಧಿಕಾರಿಯಾದ ಬ್ರೂಸ್ ರೀಡೆಲ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದೆ. ಭಾರತದಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಂದರ್ಭದಲ್ಲಿ (1992) ಮತ್ತು ಪಾಕಿಸ್ತಾನ ಆಂತರಿಕ ಅಸ್ಥಿರತೆಯೊಂದಿಗೆ ಹೋರಾಡುತ್ತಿದ್ದ ಸಮಯದಲ್ಲಿ ಈ ವರದಿ ಪ್ರಕಟಗೊಂಡಿದೆ. ಆ ವೇಳೆಗೆ ಪರಮಾಣು ಶಸ್ತ್ರಾಸ್ತ್ರಗಳು ಗೌಪ್ಯ ಬೆದರಿಕೆಯಾಗಿತ್ತು. ಇನ್ನೂ ಪರೀಕ್ಷಿಸಲಾಗಿಲ್ಲವಾದರೂ ವಾಸ್ತವಕ್ಕೆ ಹತ್ತಿರವಾಗಿತ್ತು.
ಭಾರತದ ಬೆಳೆಯುತ್ತಿರುವ ಶಕ್ತಿಯಿಂದ ಕುಬ್ಜವಾಗಿರುವ ಪಾಕಿಸ್ತಾನ ಭಯದಿಂದ ವರ್ತಿಸುವ ಸಾಧ್ಯತೆಯಿದೆ ಎಂದು ಅಂದಿನ ಸಿಐಎ ಹೇಳಿತ್ತು. ಈ ಭಯದಿಂದಲೇ ಕಾಶ್ಮೀರದಲ್ಲಿ ಪ್ರಾಕ್ಸಿ ಗುಂಪುಗಳನ್ನು ಬೆಂಬಲಿಸುವುದು ಅಥವಾ ಭಾರತದ ಪ್ರಭಾವವನ್ನು ಸರಿದೂಗಿಸಲು ಪಾಕ್ ಭಯೋತ್ಪಾದಕರೊಂದಿಗೆ ಅನೌಪಚಾರಿಕ ಮೈತ್ರಿಗಳನ್ನು ರೂಪಿಸುತ್ತಿದೆ ಎಂದು ಆ ವರದಿಯಲ್ಲಿ ಸೇರಿಸಲಾಗಿತ್ತು.
ವರದಿಯು TRF ನ್ನು ಹೆಸರಿಸಲಿಲ್ಲ. ಆ ಗುಂಪು ಆಗ ಅಸ್ತಿತ್ವದಲ್ಲಿರಲಿಲ್ಲ. ಆದರೆ "ಕಾಶ್ಮೀರವನ್ನು ಸ್ವತಂತ್ರಗೊಳಿಸಲು" ಭಾರತ ವಿರೋಧಿ ಭಯೋತ್ಪಾದಕರನ್ನು ಶಸ್ತ್ರಸಜ್ಜಿತಗೊಳಿಸುವ ಮತ್ತು ತರಬೇತಿ ನೀಡುವ ಪಾಕಿಸ್ತಾನದ ತಂತ್ರದ ಬಗ್ಗೆ ಅದು ಎಚ್ಚರಿಸಿತ್ತು.
ಪಾಕಿಸ್ತಾನದ ಕಾರ್ಯತಂತ್ರದ ಭಯ
ಸಿಐಎ ವರದಿಯ ಮೂಲತತ್ವ ಇಸ್ಲಾಮಾಬಾದ್ಗೆ ಅಹಿತಕರ ಸತ್ಯವಾಗಿತ್ತು. ಅಧಿಕಾರದ ಸಮತೋಲನವು ಈಗಾಗಲೇ ಭಾರತದ ಪರವಾಗಿ ವಾಲಿತ್ತು. ಆರ್ಥಿಕವಾಗಿ, ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ, ನವದೆಹಲಿ ಏರುಗತಿಯಲ್ಲಿತ್ತು ಮತ್ತು ಪಾಕಿಸ್ತಾನ ಅದನ್ನು ತಲುಪಲು ಸಾಧ್ಯವಾಗಲಿಲ್ಲ. ಅಂತರವು ಕೇವಲ ಫೈರ್ಪವರ್ನಲ್ಲಿ ಅಲ್ಲ; ಅದು ಸ್ಥಿರತೆಯಲ್ಲೂ ಇದ್ದಿದ್ದರಿಂದ ಭಾರತ ಎಂದರೆ ಪಾಕ್ ಗೆ ಒಳಗೊಳಗೇ ಭಯ ಕಾಡುತ್ತಿತ್ತು ಎಂದು ಸಿಐಎ ವರದಿ ಹೇಳಿದೆ.
ಭಾರತ ತನ್ನ ಎಲ್ಲಾ ಆಂತರಿಕ ಸವಾಲುಗಳ ಹೊರತಾಗಿಯೂ, ಸ್ಥಿರ ಸರ್ಕಾರಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿತ್ತು. ಆ ಸಮಯದಲ್ಲಿ ಭಾರತ ಪ್ರಧಾನಿ ಪಿವಿ ನರಸಿಂಹ ರಾವ್ ನೇತೃತ್ವದಲ್ಲಿತ್ತು. ಡಾ. ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು.
ಇತ್ತ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತವಿತ್ತು. ರಾಜಕೀಯ ಬಿಕ್ಕಟ್ಟುಗಳು ಮತ್ತು ಆರ್ಥಿಕ ಕುಸಿತಗಳ ನಡುವೆ ಪಾಕ್ ತೂಗಾಡುತ್ತಿತ್ತು. ಆತ್ಮವಿಶ್ವಾಸವಲ್ಲ, ಬದಲಾಗಿ ಭಯ ಅದರ ಕಾಶ್ಮೀರ ನೀತಿಯನ್ನು ಮುನ್ನಡೆಸಿತ್ತು ಎಂದು ಸಿಐಎ ವರದಿ ಹೇಳಿದೆ.
ಮಿಲಿಟರಿ ಸಮತೋಲನದಲ್ಲಿನ ಬದಲಾವಣೆಯು ಪಾಕಿಸ್ತಾನವನ್ನು ಪರಮಾಣು ನಿಯೋಜನೆಯನ್ನು ತೆರೆಯಲು ಅಥವಾ ಅಸಮಪಾರ್ಶ್ವದ ಯುದ್ಧದ ಅಂಚಿಗೆ ತಳ್ಳಬಹುದು ಎಂದು 1993 ರ ಸಿಐಎ ಮೌಲ್ಯಮಾಪನವು ಸ್ಪಷ್ಟವಾಗಿ ಹೇಳಿತ್ತು. ಅದರಲ್ಲಿ ಮುಕ್ತ ಮುಖಾಮುಖಿಯಿಲ್ಲದೆ ಭಾರತವನ್ನು ರಕ್ತಸ್ರಾವಗೊಳಿಸಲು ವಿನ್ಯಾಸಗೊಳಿಸಲಾದ ಕಡಿಮೆ-ವೆಚ್ಚದ, ಹೆಚ್ಚಿನ-ಪ್ರಭಾವಿ ಕಾರ್ಯಾಚರಣೆಗಳಿಗೆ ನೆರವಾಗುವ ಭಯೋತ್ಪಾದನೆಯೂ ಸೇರಿದೆ ಎಂದು ಸಿಐಎ ಹೇಳಿತ್ತು.
1993 ರ ದಾಖಲೆಯು ಪಾಕಿಸ್ತಾನವು ಇಸ್ಲಾಮಿಸಂ ಅನ್ನು ನಂಬಿಕೆ ಎಂದು ಭಾವಿಸದೇ ಒಂದು ಸಾಧನವಾಗಿ ಸ್ವೀಕರಿಸಬಹುದು ಎಂದು ಭವಿಷ್ಯ ನುಡಿದಿದೆ. ಆರ್ಥಿಕ ಕುಸಿತ ಉಂಟಾದರೆ, ಅಥವಾ ಮಿಲಿಟರಿ ಸರ್ವಾಧಿಕಾರಿ ಅಧಿಕಾರ ವಹಿಸಿಕೊಂಡರೆ, ಪಾಕಿಸ್ತಾನ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಭಾರತವನ್ನು ಕೆರಳಿಸಲು "ಉಗ್ರರೊಂದಿಗೆ ಸೇರಿಕೊಂಡು" ವರ್ತಿಸಬಹುದು ಎಂದು ಸಿಐಎ ಹೇಳಿತ್ತು.
ಧಾರ್ಮಿಕ ಧ್ರುವೀಕರಣವು ಪ್ರಾಬಲ್ಯ ಹೊಂದಿದ್ದರೆ - ಇದು ಹೆಚ್ಚು ಕೋಮು ಅಶಾಂತಿಯನ್ನು ಉಂಟುಮಾಡಬಹುದು, ಇದರಿಂದಾಗಿ ಪಾಕಿಸ್ತಾನದ ಹಸ್ತಕ್ಷೇಪವನ್ನು ದೇಶದಲ್ಲಿ ಸಮರ್ಥಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಭಾರತದ ದೇಶೀಯ ರಾಜಕೀಯಕ್ಕೆ ಎಚ್ಚರಿಕೆ ನೀಡಿತ್ತು.
ಅಮೆರಿಕದ ಪಾತ್ರ
NIE ಕೇವಲ ಆಂತರಿಕ CIA ಬಳಕೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಶ್ವೇತಭವನ ಮತ್ತು ವಿದೇಶಾಂಗ ಇಲಾಖೆಗೆ ತಿಳಿಸಲು ಉದ್ದೇಶಿಸಲಾಗಿತ್ತು. ಆ ಸಂದರ್ಭದಲ್ಲಿ ಬಿಲ್ ಕ್ಲಿಂಟನ್ ಅಧಿಕಾರ ವಹಿಸಿಕೊಂಡಿದ್ದರು ಮತ್ತು ದಕ್ಷಿಣ ಏಷ್ಯಾ ಹೆಚ್ಚು ಜಾಗತಿವಾಗಿ ಗಮನ ಸೆಳೆಯುತ್ತಿತ್ತು. ಅಂದಿನ ಅಮೆರಿಕ ಅಧ್ಯಕ್ಷ, ಏಳು ವರ್ಷಗಳ ನಂತರ 2000ರಲ್ಲಿ ಭಾರತಕ್ಕೆ ಭೇಟಿ ನೀಡುವವರಿದ್ದರು. ಅದೇ ದಿನ ಚಿಟ್ಟಿಸಿಂಗ್ಪುರ ಹತ್ಯಾಕಾಂಡ ನಡೆದಿತ್ತು. ಅಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೈಬಾ (LeT) 35 ಸಿಖ್ ಗ್ರಾಮಸ್ಥರನ್ನು ಕೊಂದಿತ್ತು
ಸಿಐಎ ಜಾಗರೂಕರಾಗಿರಲು ಎಚ್ಚರಿಸಿತ್ತು. ಹಾಟ್ಲೈನ್ಗಳು ಮತ್ತು ಪರಮಾಣು ಒಪ್ಪಂದಗಳಂತಹ ವಿಶ್ವಾಸ-ನಿರ್ಮಾಣ ಕ್ರಮಗಳು ಉಪಯುಕ್ತವಾಗಿದ್ದವು, ಆದರೆ ನಿಜವಾದ ಬಿಕ್ಕಟ್ಟಿನಲ್ಲಿ, ಅವು "ಅಪ್ರಸ್ತುತವೆಂದು ಸಾಬೀತುಪಡಿಸಬಹುದು". ಪರಿಶೀಲನೆ ದುರ್ಬಲವಾಗಿತ್ತು. ನಂಬಿಕೆ ತೆಳುವಾಗಿತ್ತು. ಹಿಂಸಾಚಾರ ಪ್ರಾರಂಭವಾದ ನಂತರ, ನಾಯಕರು ಪ್ರೋಟೋಕಾಲ್ ಅಲ್ಲ, ಪ್ರವೃತ್ತಿಯನ್ನು ಅವಲಂಬಿಸುತ್ತಾರೆ ಎಂದು ಸಿಐಎ ಹೇಳಿತ್ತು.
ಒಂದು ಕಡೆಯಿಂದ ಇನ್ನೊಂದು ಕಡೆಯ ಮೇಲೆ ಆರೋಪಿಸುವ ಭಯೋತ್ಪಾದಕ ಆಕ್ರೋಶ ಇದಾಗಿರಬಹುದು ಎಂದು ಸಿಐಎ ಅಂದು ನೀಡಿದ್ದ ಎಚ್ಚರಿಕೆಯ ಸನ್ನಿವೇಶ ಈಗ ಪಹಲ್ಗಾಮ್ ಘಟನೆಯಲ್ಲಿಯೂ ಪ್ರತಿಫಲಿಸುತ್ತಿದೆ.
ದೆಹಲಿಯಲ್ಲಿ, ನೀತಿ ನಿರೂಪಕರು ಅದೇ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ಮೂವತ್ತು ವರ್ಷಗಳ ನಂತರ, 1993 ರ CIA ದಾಖಲೆಯು ಐತಿಹಾಸಿಕ ಪತ್ರಿಕೆಯಂತೆ ಕಾಣುತ್ತಿಲ್ಲ ಮತ್ತು ವರ್ತಮಾನಕ್ಕೆ ಎಚ್ಚರಿಕೆಯ ಲೇಬಲ್ನಂತೆ ಕಾಣುತ್ತಿದೆ ಎಂದು ಸಿಐಎ ವರದಿಯನ್ನು ವಿಶ್ಲೇಷಿಸಲಾಗುತ್ತಿದೆ.