
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಜೊತೆಹೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೇ. 7 ಬುಧವಾರ ದೇಶದ 244 ಜಿಲ್ಲಗೆಳಲ್ಲಿ ಪೂರ್ಣ ಪ್ರಮಾಣದ ನಾಗರೀಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಯುತ್ತಿದೆ.
ಮೇ 7ರಂದು ದೇಶದ 244 ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿರುವ ರಕ್ಷಣಾ ತಾಲೀಮಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ ಮೋಹನ್ ಅವರು ಮಂಗಳವಾರ ಸಭೆ ಕರೆದಿದ್ದು, ತಾಲೀಮಿನ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆಂದು ತಿಳಿದುಬಂದಿದೆ.
ದೇಶಾದ್ಯಂತ ಮುಖ್ಯ ಕಾರ್ಯದರ್ಶಿಗಳು ಮತ್ತು ಸಿವಿಲ್ ಡಿಫೆನ್ಸ್ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾಗರಿಕರ ರಕ್ಷಣೆ ಸಂಬಂಧ ಅಣಕು ಕವಾಯತು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿತ್ತು.
ಮೇ 7ರಂದು ದೇಶದ 244 ಜಿಲ್ಲೆಗಳಲ್ಲಿ ನಾಗರಿಕ ರಕ್ಷಣಾ ತಾಲೀಮು ಆಯೋಜಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯಾವುದೇ ಸಂಭಾವ್ಯ ಪ್ರತಿಕೂಲ ದಾಳಿಗಳು ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಾಗರಿಕ ರಕ್ಷಣಾ ಯಂತ್ರೋಪಕರಣಗಳ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಹೆಚ್ಚಿಸುವುದು ಈ ಅಣಕು ಕವಾಯತಿನ ಮುಖ್ಯ ಉದ್ದೇಶವಾಗಿದೆ.
ಈ ಅಣಕು ಕವಾಯತು ಯುದ್ಧದಂತಹ ಪರಿಸ್ಥಿತಿಯನ್ನು ಅನುಕರಿಸುತ್ತದೆ ಮತ್ತು ಸೈರನ್ಗಳ ಸದ್ದು, ಸ್ಥಳೀಯ ತುರ್ತು ಸೇವೆಗಳಿಂದ ಸಂಘಟಿತ ಪ್ರತಿಕ್ರಿಯೆಗಳು ಮತ್ತು ಸಾರ್ವಜನಿಕ ಸುರಕ್ಷತೆ ಸೇರಿದಂತೆ ವಾಯುದಾಳಿ ಎಚ್ಚರಿಕೆ ವ್ಯವಸ್ಥೆಗಳ ಕಾರ್ಯಾಚರಣೆಯನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿಕೂಲ ವಾತಾವರಣದಲ್ಲಿ ಉದ್ಭವಿಸಬಹುದಾದ ಆಕಸ್ಮಿಕ ಘಟನೆಗಳಿಗೆ ರಾಷ್ಟ್ರ ಮತ್ತು ಅದರ ಆಡಳಿತಾತ್ಮಕ ಚೌಕಟ್ಟನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ. ನಾಗರಿಕ ರಕ್ಷಣಾ ಕವಾಯತು ದಶಕಗಳಲ್ಲಿ ಇದು ಮೊದಲ ಬಾರಿಯಾಗಿದೆ. ಈ ಅಣಕು ಕವಾಯತಿನ ಮೂಲಕ ಬಹು ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಮಾನವ ಪ್ರತಿಕ್ರಿಯೆ ಎರಡನ್ನೂ ಏಕಕಾಲದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏ.22ರಂದು ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು. ಈ ಉಗ್ರರು ಪಾಕಿಸ್ತಾನ ಬೆಂಬಲಿತ ಉಗ್ರರಾದ ಕಾರಣ ದೇಶದಾದ್ಯಂತ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿದೆ. ಈ ವರೆಗೂ ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ರಾಜತಾತ್ರಿಕ ಪ್ರತೀಕಾರ ಕ್ರಮಗಳನ್ನು ಕೈಗೊಂಡಿದ್ದು, ಈಗ ಅಣಕು ರಕ್ಷಣಾ ಕವಾಯತಿಗೆ ಸೂಚನೆ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಈ ತಾಲೀಮಿನ ವೇಳೆ ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳುಮತ್ತು ಜನರು ತಮ್ಮನ್ನು ತಾವು ರಕ್ಷಿಕೊಳ್ಳುವ ವಿಧಾನವನ್ನು ಅಭ್ಯಸಿಸಲು ಸೂಚಿಸಲಾಗುತ್ತದೆ.
ಕವಾಯತು ಸಮಯದಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳನ್ನು ಸಕ್ರಿಯಗೊಳಿಸಲಾಗುತ್ತದೆ. ನಾಗರೀಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತರಬೇತಿ ನೀಡಲಾಗುತ್ತದೆ. 'ಇದು ಬಲು ಅಪರೂಪದ ಕ್ರಮವಾಗಿದೆ.
ಗಡಿ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿ ವಿವಿಧ ರಾಜ್ಯಗಳಿಗೆ ಕವಾಯತಿಗೆ ಸೂಚಿಸಲಾಗಿದೆ. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಮತ್ತು ಇದು ಕೇವಲ ಒಂದು ಕವಾಯತು' ಎಂದು ಮೂಲಗಳು ಹೇಳಿವೆ.
ಅಲ್ಲದೆ, 'ಪ್ರಧಾನಿ ಮೋದಿ ರಕ್ಷಣಾ ಅಧಿಕಾರಿಗಳೊಂದಿಗೆ ಒಂದರ ಮೇಲೊಂದರಂತೆ ಉನ್ನತ ಸಭೆ ನಡೆಸಿದ ಬಳಿಕ ಈ ಸೂಚನೆ ಹೊರಬಿದ್ದಿರುವುದು ಗಮನಾರ್ಹ' ಎಂದು ಅವು ತಿಳಿಸಿವೆ.
ಭಾರತವು ಯಾವುದೇ ಬೆದರಿಕೆಯನ್ನು ಹಗುರವಾಗಿ ಪರಿಗಣಿಸುತ್ತಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಂದೇಶವಾಗಿದೆ. ಇದು ಕಾಗದದ ಮೇಲೆ ನಿಯಮಿತ ಸನ್ನದ್ಧತೆಯ ಕ್ರಮವಾಗಿದ್ದರೂ, ಕ್ಷೀಣಿಸುತ್ತಿರುವ ಪ್ರಾದೇಶಿಕ ಭದ್ರತಾ ಸನ್ನಿವೇಶಕ್ಕೆ ಸ್ಪಷ್ಟವಾಗಿ ಪ್ರತಿಕ್ರಿಯೆಯಾಗಿದೆ ಎಂದು ಹಿರಿಯ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಮಾಡಿದವರು ಹಾಗೂ ಸೂತ್ರಧಾರರು ಊಹಿಸಲು ಆಗದಂತಹ ಪ್ರತೀಕಾರ ತೆಗೆದುಕೊಳ್ಳುವುದಾಗಿ ಮೋದಿ ಕೆಲ ದಿನಗಳ ಹಿಂದೆ ಹೇಳಿದ್ದರು. ಅದರ ಬೆನ್ನಲ್ಲೇ ಅಣಕು ಕಾರ್ಯಾಚರಣೆ ನಡೆಯುತ್ತಿರುವುದು ಮಹತ್ವದ್ದಾಗಿದೆ.
ಭಾನುವಾರವಷ್ಟೆ ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ, ಪಂಜಾಬ್ನ ಫಿರೋಜ್ಪುರದ ಕಂಟೋನೆಂಟ್ ಪ್ರದೇಶದಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್ ಕಡಿತ ಮಾಡಿ 'ಬ್ಲ್ಯಾಕೌಟ್ ಡ್ರಿಲ್' ನಡೆಸಲಾಗಿತ್ತು.
ಈ ವೇಳೆ ವಾಹನ ಸಂಚಾರವನ್ನೂ ನಿಲ್ಲಿಸಿ ಅವುಗಳ ಲೈಟ್ ಆಫ್ ಮಾಡಿಸಲಾಗಿತ್ತು. 'ಯುದ್ಧದ ಸಂದರ್ಭ ದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದರು.
ಅಣಕು ಕವಾಯತು (ಮಾಕ್ ಡ್ರಿಲ್) ಎಂದರೇನು?
ಅಣಕು ಕವಾಯತಿನಲ್ಲಿ ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.
ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.
ಕವಾಯತಿನ ಮಹತ್ವ..?
ಯುದ್ಧ ಅಥವಾ ತುರ್ತು ಸಂದರ್ಭದಲ್ಲಿ ಜನರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಳಿಸುವುದಾಗಿದೆ.
ಸೈರನ್ನ ಶಬ್ದವನ್ನು ಗುರುತಿಸುವುದು ಮತ್ತು ತುರ್ತು ಸಂದರ್ಭದಲ್ಲಿ ತಕ್ಷಣ ಕ್ರಿಯೆಗೆ ತೊಡಗುವ ಜಾಗೃತಿಯನ್ನು ಮೂಡಿಸುವುದು.
ಸರ್ಕಾರ, ಆಡಳಿತ, ಮತ್ತು ಸಾರ್ವಜನಿಕರ ನಡುವೆ ಸಮನ್ವಯವನ್ನು ಸುಧಾರಿಸುವುದು.
ದೇಶದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಪರೀಕ್ಷಿಸುವುದು.
ಅಣಕು ಕವಾಯತಿನ ಸಂದರ್ಭದಲ್ಲಿ ಏನು ಮಾಡಬೇಕು?
ಅಣಕು ಕವಾಯತಿನ ಸಂದರ್ಭದಲ್ಲಿ ಜನರು ಆತಂಕಕ್ಕೊಳಗಾಗಬಾರದು. ಏಕೆಂದರೆ ಇದು ಕೇವಲ ತರಬೇತಿ ವ್ಯಾಯಾಮವಾಗಿದೆ.
ಸರ್ಕಾರದ ಸೂಚನೆಗಳನ್ನು ಗಮನಿಸಿ (ಟಿವಿ, ರೇಡಿಯೋ, ಅಥವಾ ಮೊಬೈಲ್ ಎಚ್ಚರಿಕೆಗಳ ಮೂಲಕ). ಕವಾಯತಿನ ಭಾಗವಾಗಿ, ಸುರಕ್ಷಿತ ಸ್ಥಳಕ್ಕೆ ತೆರಳುವ ಅಭ್ಯಾಸವನ್ನು ಮಾಡಿ.
ನಿಜವಾದ ತುರ್ತು ಸಂದರ್ಭದಲ್ಲಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಉದಾಹರಣೆಗೆ, ಮನೆಯ ಒಳಗೆ, ಕಟ್ಟಡದ ಒಳಗೆ, ಅಥವಾ ಸರ್ಕಾರವು ಗೊತ್ತುಪಡಿಸಿದ ಬಂಕರ್ಗೆ. ತೆರೆದ ಪ್ರದೇಶಗಳಿಂದ ದೂರವಿರಿ.
ವದಂತಿಗಳನ್ನು ನಂಬದಿರಿ ಮತ್ತು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
ಬೆಂಗಳೂರಿನಲ್ಲಿ 32 ಕಡೆ ಮಾಕ್ಡ್ರಿಲ್
ಬೆಂಗಳೂರಿನ 35 ಕಡೆ ಸೈರನ್ ಇದ್ದು, 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯ ನಿರ್ವಹಿಸುವ ಕಡೆ ಮಾಕ್ಡ್ರಿಲ್ ನಡೆಯಲಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, SRS ಪೀಣ್ಯ, ವಿವಿ ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆ, ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಠಾಣೆ, ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ಐಟಿಪಿಎಲ್ ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
Advertisement