
ಗುವಾಹಟಿ: ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೋಯ್ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೆಲವು ಗಂಭೀರ ಆರೋಪ ಮಾಡಿದ್ದಾರೆ.
ಗೊಗೋಯ್ ಪಾಕಿಸ್ತಾನದಲ್ಲಿ 15 ದಿನ ಕಳೆದಿದ್ದು, ಪಾಕಿಸ್ತಾನದ ಸೇನೆಗೆ ಪರೋಕ್ಷವಾಗಿ ನೆರವಾಗಿರಬಹುದು ಎಂದು ಅಪಾದಿಸಿದ್ದಾರೆ. ಆದರೆ ಈ ಆರೋಪಕ್ಕೆ ಗೌರವ್ ಗೋಗೊಯ್ ಇನ್ನೂ ಪ್ರತಿಕ್ರಿಯಿಸಿಲ್ಲ. ಅಲ್ಲದೇ, ಇದುವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದನ್ನು ಅವರು ನಿರಾಕರಿಸಿಲ್ಲ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ,"ನಮ್ಮ ಬಳಿ ನಿಖರವಾದ ಸಾಕ್ಷ್ಯಗಳಿವೆ. ಗೌರವ್ ಗೊಗೋಯ್ ಪಾಕಿಸ್ತಾನಕ್ಕೆ ಹೋಗಿರುವುದಕ್ಕೆ ಅಧಿಕೃತವಾಗಿ ನೋಂದಾಯಿಸಲಾಗಿದೆ. ಅವರ ಆಗಮನ ಮತ್ತು ನಿರ್ಗಮನವನ್ನು ಅಟಾರಿ ಗಡಿಯಲ್ಲಿ ದಾಖಲಿಸಲಾಗಿದೆ ಎಂದರು.
ಗೌರವ್ ಗೊಗೋಯ್ ಇಸ್ಲಾಮಾಬಾದ್ನಲ್ಲಿ 15 ದಿನ ತಂಗಿದ್ದರು. ಮೊದಲ ಏಳು ದಿನಗಳು ಅವರ ಪತ್ನಿ ಅವರೊಂದಿಗೆ ಇದ್ದರು. ಆಕೆ ಭಾರತಕ್ಕೆ ವಾಪಸ್ಸಾದ ನಂತರ ಗೊಗೋಯ್ ಅಲ್ಲಿಯೇ ಇದ್ದರು. ನಮ್ಮ ಬಳಿ ಎಲ್ಲಾ ಪ್ರಯಾಣದ ವಿವರಗಳಿವೆ ಇದು ಇನ್ನು ಊಹಾಪೋಹವಲ್ಲ ಎಂದು ತಿಳಿಸಿದರು.
ಭಾರತಕ್ಕೆ ಹಿಂದಿರುಗಿದ ನಂತರ, ಗೊಗೊಯ್ ಸುಮಾರು 90 ಬಾಲಕ ಮತ್ತು ಬಾಲಕರನ್ನು ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗೆ ಕರೆದೊಯ್ದಿದ್ದು, ಮೂಲಭೂತೀಕರಣಕ್ಕೆ ಯತ್ನಿಸಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಗೋಗೊಯ್ ಸೇನಾ ಹೆಡ್ ಕ್ವಾರ್ಟಸ್, ಲಾಹೋರ್, ಸಿಂಧ್ ಮತ್ತಿತರ ಇತರ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಇವುಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ ಶರ್ಮಾ, ಪಾಸ್ಪೋರ್ಟ್ ಮತ್ತು ವಲಸೆ ದಾಖಲೆಗಳನ್ನು ಒಳಗೊಂಡಂತೆ ದೃಢೀಕರಿಸುವ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಆತ ಭಾರತೀಯ ಪ್ರಜೆ ಮಾತ್ರ. ಅವರ ಪತ್ನಿ ಬ್ರಿಟಿಷ್, ಮತ್ತು ಅವರ ಮಕ್ಕಳು ವಿಭಿನ್ನ ವಿದೇಶಿ ಪೌರತ್ವವನ್ನು ಹೊಂದಿದ್ದಾರೆಂದು ವರದಿಯಾಗಿದೆ. ಅವರು ತಮ್ಮ ಪಾಸ್ಪೋರ್ಟ್ ಅನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು ಎಂದು ಶರ್ಮಾ ಆರೋಪಿಸಿದರು.
Advertisement