
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹುತಾತ್ಮ ಭಾರತೀಯ ಸೇನಾ ಹವಿಲ್ದಾರ್ ಝಂಟು ಅಲಿ ಶೇಖ್ ಅವರ ಪತ್ನಿಗೆ ಪೊಲೀಸ್ ಗೃಹರಕ್ಷಕ ದಳದಲ್ಲಿ ಕೆಲಸ ನೀಡಿದ್ದು, ಅವರ ಕುಟುಂಬಕ್ಕೆ ಭವಿಷ್ಯದಲ್ಲಿ ಎಲ್ಲಾ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.
ಶೇಖ್ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಉಧಂಪುರ ಪ್ರದೇಶದಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಶೇಖ್ ಹುತಾತ್ಮರಾಗಿದ್ದರು.
"ಕೃಷ್ಣನಗರದ ತೆಹಟ್ಟಾದ ಝಂಟು ಅಲಿ ಶೇಖ್ ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ. ನಾವು ಅವರಿಗೆ ವಂದಿಸುತ್ತೇವೆ. ಇಂದು, ಅವರ ಪತ್ನಿ ಶಹನಾಜ್ ಶೇಖ್ ಅವರಿಗೆ ಕೃಷ್ಣನಗರ ಪೊಲೀಸ್ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಕೆಲಸ ನೀಡಲಾಗಿದೆ. ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾವು ವಹಿಸಿಕೊಂಡಿದ್ದೇವೆ" ಎಂದು ಬ್ಯಾನರ್ಜಿ ಹೇಳಿದರು.
ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ 10 ಲಕ್ಷ ರೂ.ಗಳನ್ನು ಸಹ ನೀಡಿದೆ ಎಂದು ಪಶ್ಚಿಮ ಬಂಗಾಳ ಸಿಎಂ ತಿಳಿಸಿದರು.
Advertisement