
ನವದೆಹಲಿ: ಸಟ್ಲೆಜ್-ಯಮುನಾ ಲಿಂಕ್ (SYL) ಕಾಲುವೆ ವಿವಾದವನ್ನು ಪರಿಹರಿಸಲು ಕೇಂದ್ರದೊಂದಿಗೆ ಸಹಕರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಆದೇಶ ನೀಡಿದೆ.
ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಈಗಾಗಲೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದೆ.
ಸೌಹಾರ್ದಯುತ ಪರಿಹಾರಕ್ಕೆ ತಲುಪುವಲ್ಲಿ ಎರಡೂ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ಸಹಕರಿಸುವಂತೆ ನಾವು ನಿರ್ದೇಶಿಸುತ್ತೇವೆ ಎಂದು ಪೀಠ ಹೇಳಿದೆ. ವಿಷಯ ಬಗೆಹರಿಯದಿದ್ದರೆ ಆಗಸ್ಟ್ 13 ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ನಾವು ಮಧ್ಯಸ್ಥಿಕೆಗೆ ಪ್ರಯತ್ನಗಳನ್ನು ಮಾಡಿದ್ದೇವೆ, ಆದರೆ ರಾಜ್ಯಗಳು ಮಾತುಕತೆಯ ಪ್ರಕಾರ ನಡೆದುಕೊಳ್ಳಬೇಕು ಎಂದು ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಪೀಠ ಮುಂದೆ ತಿಳಿಸಿದರು.
ರವಿ ಮತ್ತು ಬಿಯಾಸ್ ನದಿಗಳಿಂದ ನೀರನ್ನು ಪರಿಣಾಮಕಾರಿಯಾಗಿ ಹಂಚಿಕೆ ಮಾಡಲು ಸಟ್ಲೆಜ್-ಯಮುನಾ ಲಿಂಕ್ (SYL) ಕಾಲುವೆ ಮುಖ್ಯವಾಗಿದೆ. ಈ ಯೋಜನೆಯು 214 ಕಿಮೀ ಕಾಲುವೆಯನ್ನು ರೂಪಿಸಿತ್ತು, ಅದರಲ್ಲಿ 122 ಕಿಮೀ ಪಂಜಾಬ್ನಲ್ಲಿ ಮತ್ತು 92 ಕಿಮೀ ಹರಿಯಾಣದಲ್ಲಿ ನಿರ್ಮಿಸಬೇಕಾಗಿತ್ತು.
ಹರಿಯಾಣ ತನ್ನ ಪ್ರದೇಶದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿದೆ, ಆದರೆ 1982 ರಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ ಪಂಜಾಬ್, ನಂತರ ಅದನ್ನು ಕೈಬಿಟ್ಟಿತು. ಎರಡು ರಾಜ್ಯಗಳ ನಡುವಿನ ವಿವಾದ ದಶಕಗಳಿಂದ ಮುಂದುವರೆದಿದೆ.
ಜನವರಿ 15, 2002 ರಂದು ಸುಪ್ರೀಂ ಕೋರ್ಟ್, 1996 ರಲ್ಲಿ ಹರಿಯಾಣ ಸಲ್ಲಿಸಿದ ಮೊಕದ್ದಮೆಯಲ್ಲಿ ಹರಿಯಾಣದ ಪರವಾಗಿ ತೀರ್ಪು ನೀಡಿ ಕಾಲುವೆಯ ತನ್ನ ಭಾಗವನ್ನು ನಿರ್ಮಿಸಲು ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತು.
Advertisement