
ನವದೆಹಲಿ: ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರೆಸಿದ್ದ ಶೆಲ್ ಹಾಗೂ ಡ್ರೋನ್ ದಾಳಿಗೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಭಾರತ, ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದಿದ್ದೇ ಆದರೆ, ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ.
ಮೇ 10 ರಂದು ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರೂ, ಪಾಕಿಸ್ತಾನ ಮಾತ್ರ ತನ್ನ ಉದ್ಧಟತನವನ್ನು ಬಿಟ್ಟಿರಲಿಲ್ಲ. ಗಡಿಯಲ್ಲಿ ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿ ನಡೆಸಿದ್ದರು. ಇದರಿಂದ ಕೆಂಡಾಮಂಡಲಗೊಂಡಿರುವ ಭಾರತ, ಆಪರೇಷನ್ ಸಿಂಧೂರ್ ಇನ್ನೂ ಮುುಗಿದಿಲ್ಲ, ಮುಂದುವರೆಯಲಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದೇ ಆದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಇನ್ನು ಮುಂದೆ ಪಾಕಿಸ್ತಾನ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಈಗಾಗಲೇ ರವಾನಿಸಲಾಗಿದೆ. ಒಂದು ಸ್ಥಳದಲ್ಲಿ ತರಬೇತಿ ಪಡೆದು, ನಂತರ ಮತ್ತೊಂದು ಸ್ಥಳಕ್ಕೆ ಹೋದರೆ ಸುರಕ್ಷಿತರೆಂದು ಭಾವಿಸಲು ಸಾಧ್ಯವಿಲ್ಲ. ಉಗ್ರರು ಎಲ್ಲಿಯೇ ಅಡಗಿದ್ದರೂ ಅವರ ಹುಟ್ಟಡಗಿಸುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಖಡಕ್ ಎಚ್ಚರಿಕೆ ಬೆನ್ನಲ್ಲೇ ತಡರಾತ್ರಿ ಬಳಿಕ ಕಾಶ್ಮೀರ ಸೇರಿದಂತೆ ಗಡಿಯ 4 ರಾಜ್ಯಗಳಲ್ಲಿ ಎಲ್ಲಿಯೂ ಕದನ ವಿರಾಮ ಉಲ್ಲಂಘಿಸುವ ಗೋಜಿಗೆ ಹೋಗಿಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ 26 ನಾಗರಿಕರ ಬಲಿ ಪಡೆದಿದ್ದರು. ಈ ದಾಳಿಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರಗೊಂಡು, ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಬೆನ್ನಲ್ಲೇ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದವು.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ನಮ್ಮನ್ನು ಸಂಪರ್ಕಿಸಿದ್ದರು. ಬಳಿಕ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿತ್ತು. ಮೇ.12ರ ಮಧ್ಯಾಹ್ನ ಮತ್ತೊಂದು ಸುತ್ತಿನ ಡಿಜಿಎಂಒ ಮಟ್ಟದ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದರು.
ಉಭಯ ದೇಶಗಳು ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡ ನಂತರವೂ ಪಾಕಿಸ್ತಾನ ತನ್ನ ಉದ್ಧಟತನವನ್ನು ಮುಂದುವರೆಸಿತ್ತು. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಡ್ರೋನ್ ದಾಳಿಗಳು ನಡೆದಿದ್ದವು. ದಾಳಿಗೆ ಸೇನೆ ದಿಟ್ಟ ಉತ್ತರ ನೀಡಿದೆ
Advertisement