

ಅಹಮದಾಬಾದ್: 'ಆಪರೇಷನ್ ಸಿಂಧೂರ್'ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ "ಆಕ್ಷೇಪಾರ್ಹ" ಪೋಸ್ಟ್ ಮಾಡಿದ ಆರೋಪದ ಮೇಲೆ ಗುಜರಾತ್ ನ ಬೋಟಾಡ್ ಜಿಲ್ಲೆಯಲ್ಲಿ ಸರ್ಕಾರಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಬಂಧಿತ ನೌಕರನನ್ನು ಧ್ರುಫಾನಿಯಾ ಗ್ರಾಮದಲ್ಲಿ ರಾಜ್ಯ ಪಂಚಾಯತ್ ಇಲಾಖೆಯ ತಲಾಟಿ-ಕಮ್-ಮಂತ್ರಿಯಾಗಿ ಕೆಲಸ ಮಾಡುತ್ತಿರುವ ಕೃಪಾಲ್ ಪಟೇಲ್(27) ಎಂದು ಗುರುತಿಸಲಾಗಿದೆ.
"ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲ್ವಿಚಾರಣೆಯ ಸಮಯದಲ್ಲಿ, ಜಿಲ್ಲಾ ಸೈಬರ್ ತಂಡ, Xನಲ್ಲಿ ಪಟೇಲ್ ಮಾಡಿದ ಆಕ್ಷೇಪಾರ್ಹ ಪೋಸ್ಟ್ ಅನ್ನು ಗಮನಿಸಿದೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮಹರ್ಷಿ ರಾವಲ್ ತಿಳಿಸಿದ್ದಾರೆ.
"ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸೇನೆಯು ಭಯೋತ್ಪಾದಕರ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪಟೇಲ್ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ ರಾಷ್ಟ್ರೀಯ ಏಕತೆಗೆ ಹಾನಿಕಾರಕವಾಗಿದೆ ಮತ್ತು ಭಾರತದ ನಾಗರಿಕರಲ್ಲಿ ಭಯ ಮತ್ತು ಭೀತಿಯನ್ನು ಉಂಟುಮಾಡುತ್ತದೆ ಎಂದು ಕಂಡುಬಂದ ಕಾರಣ ಸೈಬರ್ ಪೊಲೀಸರು ಅವರನ್ನು ಬಂಧಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಸೋಮವಾರ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3532) ಮತ್ತು 197(1)(d) ಅಡಿಯಲ್ಲಿ ಬೋಟಾಡ್ನಲ್ಲಿರುವ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement