
ಮುಂಬೈ: 60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ಎದುರಿಸುತ್ತಿರುವ ಉದ್ಯಮಿ ರಾಜ್ ಕುಂದ್ರಾ, ನೋಟು ರದ್ದತಿಯಿಂದಾಗಿ ತಮ್ಮ ವ್ಯವಹಾರವು ಭಾರಿ ನಷ್ಟವನ್ನು ಅನುಭವಿಸಿದೆ ಎಂದು ಹೇಳಿರುವುದಾಗಿ ಮೂಲಗಳು ಶುಕ್ರವಾರ ತಿಳಿಸಿವೆ.
ಈ ಕುರಿತು ಎನ್ಡಿಟಿವಿಗೆ ಮಾಹಿತಿ ಲಭ್ಯವಾಗಿದ್ದು, ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ನಡೆಸಿದ ವಿಚಾರಣೆಯ ಸಂದರ್ಭದಲ್ಲಿ, ಕುಂದ್ರಾ ಅವರು ತಮ್ಮ ಕಂಪನಿಯು ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ಹೂಡಿಕೆ ಮಾಡಿದೆ ಮತ್ತು 2016 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ರದ್ದತಿ ನಂತರ ಗಮನಾರ್ಹ ನಷ್ಟವನ್ನು ಎದುರಿಸಿದೆ ಎಂದು ಹೇಳಿದರು.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಪನಿಯು ಸಾಲ ಪಡೆದ ಹಣವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು 50 ವರ್ಷದ ಉದ್ಯಮಿ ಹೇಳಿದ್ದಾರೆ.
ಕುಂದ್ರಾ ಅವರನ್ನು ಈ ಪ್ರಕರಣದಲ್ಲಿ ಇದುವರೆಗೆ ಎರಡು ಬಾರಿ ವಿಚಾರಣೆಗೆ ಒಳಪಡಿಸಲಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಮತ್ತೆ ಸಮನ್ಸ್ ಜಾರಿಯಾಗುವ ಸಾಧ್ಯತೆಯಿದೆ. ಅವರ ಪತ್ನಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಅಕ್ಟೋಬರ್ 4ರಂದು ಅವರ ನಿವಾಸದಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು.
ಆಗಸ್ಟ್ 14 ರಂದು ಮುಂಬೈನಲ್ಲಿ ಉದ್ಯಮಿ ದೀಪಕ್ ಕೊಠಾರಿ ಅವರಿಗೆ ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಸುಮಾರು 60 ಕೋಟಿ ರೂ. ವಂಚಿಸಿದ ಆರೋಪದ ಮೇಲೆ, ಈಗ ಕಾರ್ಯನಿರ್ವಹಿಸದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಹೋಂ ಶಾಪಿಂಗ್ ಮತ್ತು ಆನ್ಲೈನ್ ರೀಟೆಲ್ ಫ್ಲಾಟ್ಫಾರ್ಮ್ ನಿರ್ದೇಶಕರಾಗಿದ್ದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿತ್ತು.
2015 ಮತ್ತು 2023ರ ನಡುವೆ, ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ನಲ್ಲಿ 60 ಕೋಟಿ ರೂ. ಹೂಡಿಕೆ ಮಾಡುವಂತೆ ಅವರು ತಮ್ಮನ್ನು ಪ್ರೇರೇಪಿಸಿದ್ದರು. ಆದರೆ, ಆ ಮೊತ್ತವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಶಿಲ್ಪಾ ಶೆಟ್ಟಿ ಅವರು ತಮ್ಮ ಉದ್ಯಮಿ ಪತಿಯೊಂದಿಗೆ ಸಹ-ಸ್ಥಾಪಿಸಿದ ಕಂಪನಿಯ ವ್ಯವಹಾರಗಳತ್ತ ನಾನು ಗಮನ ಹರಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
Advertisement