

ಕೋಲ್ಕತ್ತಾ: ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ TMC ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಸುಮಾರು 1,000ಕ್ಕೂ ಹೆಚ್ಚು ವ್ಯಕ್ತಿಗಳ ಭದ್ರತೆಗಾಗಿ 2,100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರುವುದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು ಕೂಡಲೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಭದ್ರತೆ ವಾಪಸ್ ಪಡೆಯುವಂತೆ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಮಾರ್ಚ್ 15ರಂದು ಚುನಾವಣಾ ಘೋಷಣೆಯ ಮೊದಲು, ಪಶ್ಚಿಮ ಬಂಗಾಳ ಸರ್ಕಾರವು ಟಿಎಂಸಿಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ 832 ವ್ಯಕ್ತಿಗಳು ಮತ್ತು ಪಕ್ಷದ ಬೆಂಬಲಿಗರು ಸೇರಿದಂತೆ 144 ಇತರರಿಗೆ ಭದ್ರತೆ ಒದಗಿಸಲು 2,185 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿತ್ತು ಎಂದು ಚುನಾವಣಾ ಆಯೋಗದ (ಇಸಿ) ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಪ್ರಾಧಿಕಾರವು ತಪ್ಪುನ್ನು ಗಂಭೀರವಾಗಿ ಪರಿಗಣಿಸಿದೆ. ವೈಯಕ್ತಿಕ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ ಕುರಿತು ಎರಡು ಮೂರು ದಿನಗಳಲ್ಲಿ "ನ್ಯಾಯಯುತ ಮತ್ತು ಸಮಾನ" ರೀತಿಯಲ್ಲಿ ಕಠಿಣ ವೃತ್ತಿಪರ ಪರಿಶೀಲನೆಯನ್ನು ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ .
ಇಲ್ಲಿಯವರೆಗೆ 1,370 ಅಧಿಕಾರಿಗಳ ವರ್ಗಾವಣೆ
ಪಶ್ಚಿಮ ಬಂಗಾಳ ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ಪ್ರಮುಖ ಆಡಳಿತಾತ್ಮಕ ಕ್ರಮಗಳ ಸರಣಿಯಲ್ಲಿ, ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಗೃಹ ಕಾರ್ಯದರ್ಶಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಸೇರಿದಂತೆ ಹಲವಾರು ಹಿರಿಯ ರಾಜ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮಗಳು ಹೊಂದಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಆಯೋಗದ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದರು. 2025ರ ಅಕ್ಟೋಬರ್ 27ರಂದು SIR ಪ್ರಾರಂಭವಾಗುವ ಸ್ವಲ್ಪ ಮೊದಲು ಮತ್ತು ಮಾರ್ಚ್ 15, 2026ರಂದು ಚುನಾವಣೆ ಘೋಷಣೆಯಾಗುವವರೆಗೆ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು 1,370 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಬಂಗಾಳದಲ್ಲಿ 2.4 ಲಕ್ಷ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನಿಯೋಜನೆ
ಏತನ್ಮಧ್ಯೆ, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಸುಮಾರು 2.4 ಲಕ್ಷ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲು ಯೋಜಿಸುತ್ತಿದೆ. ಇದು ಚುನಾವಣೆಯ ಸಮಯದಲ್ಲಿ ಒಂದೇ ರಾಜ್ಯದಲ್ಲಿ ಇದುವರೆಗಿನ ಅತ್ಯಧಿಕ ನಿಯೋಜನೆಯಾಗಿದೆ.
ಅಧಿಕಾರಿಗಳ ಪ್ರಕಾರ, ಆಯೋಗವು ಚುನಾವಣಾ ನಂತರದ ವಿವರವಾದ ಭದ್ರತಾ ಯೋಜನೆಯನ್ನು ಸಹ ಸಿದ್ಧಪಡಿಸಿದೆ. 2026ರ ಏಪ್ರಿಲ್ 29ರಂದು ಮತದಾನ ಪೂರ್ಣಗೊಂಡ ನಂತರ, ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು), ಸ್ಟ್ರಾಂಗ್ ರೂಮ್ಗಳು ಮತ್ತು ಎಣಿಕೆ ಕೇಂದ್ರಗಳನ್ನು ರಕ್ಷಿಸಲು ಸುಮಾರು 200 ಸಿಎಪಿಎಫ್ ಕಂಪನಿಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗುವುದು. ಇದಲ್ಲದೆ, ಮುಂದಿನ ಆದೇಶದವರೆಗೆ 500 ಸಿಎಪಿಎಫ್ ಕಂಪನಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರತವಾಗಿರುತ್ತವೆ.
ಮಾಲ್ಡಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಸುತ್ತುವರೆದಿದ್ದು, ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತು. ನ್ಯಾಯಾಂಗ ಅಧಿಕಾರಿಗಳಿಗೆ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಇದರ ನಂತರ, ಚುನಾವಣಾ ಆಯೋಗವು ಪ್ರಕರಣವನ್ನು ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಿತು.
Advertisement