

ಅಲಪ್ಪುಳ: ಕೇರಳದ ರೆಸ್ಟೋರೆಂಟ್ ಮಾಲೀಕರೊಬ್ಬರು ವಿಷು ಹಬ್ಬದ ಶುಭಾಶಯ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂಡಿ ಇರಿಸಿದ ಫೋಟೋ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮೆಹರ್ ಮಂಡಿ & ಗ್ರಿಲ್ಸ್ನ ಮಾಲೀಕ ಅರ್ಷದ್ ಅವರನ್ನು ಬಂಧಿಸಲಾಗಿದೆ.
ಶ್ರೀಕೃಷ್ಣನ ಮುಂದೆ ಬಾಳೆ ಎಲೆಯಲ್ಲಿ ಚಿಕನ್ ಮಂಡಿ(ಚಿಕನ್ ಮತ್ತು ರೈಸ್) ಖಾದ್ಯವನ್ನು ಚಿತ್ರೀಕರಿಸಿದ ಫೋಟೋ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆದ ನಂತರ ಹಿಂದೂ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಬಳಿಕ ರೆಸ್ಟೋರೆಂಟ್ ಮಾಲೀಕನ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಯಾಳಂ ಹೊಸ ವರ್ಷವಾದ 'ವಿಷು' ಹಬ್ಬದ ಅಂಗವಾಗಿ ಚೆರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ 'ಮೆಹರ್ ಮಂಡಿ ಆ್ಯಂಡ್ ಗ್ರಿಲ್ಸ್' ರೆಸ್ಟೋರೆಂಟ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ವೊಂದು ಹರಿದಾಡಿತ್ತು. ಆ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಚಿತ್ರದ ಮುಂದೆ ಗ್ರಿಲ್ಡ್ ಚಿಕನ್ ಮತ್ತು ಮಂಡಿ ರೈಸ್ ಇರುವ ತಟ್ಟೆಯನ್ನು ಇಡಲಾಗಿತ್ತು. ಈ ಚಿತ್ರವು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ವಕೀಲ ಎಂ.ವಿ. ಬಿಜು ಎಂಬುವವರು ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಕೋಮು ಗಲಭೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏತನ್ಮಧ್ಯೆ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸಂಜೆ ನಂತರ ರೆಸ್ಟೋರೆಂಟ್ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಇದಕ್ಕೂ ಮೊದಲು, ವಿವಾದ ತಾರಕಕ್ಕೇರುತ್ತಿದ್ದಂತೆ ರೆಸ್ಟೋರೆಂಟ್ನ ವ್ಯವಸ್ಥಾಪಕ ಪಾಲುದಾರರಲ್ಲಿ ಒಬ್ಬರಾದ ಶಮೀರ್, ಇನ್ಸ್ಟಾಗ್ರಾಮ್ ಮೂಲಕ ಕ್ಷಮೆಯಾಚಿಸಿದ್ದರು.
"ಈ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ. ಖಾಸಗಿ ಗ್ರೂಪ್ ಒಂದರಲ್ಲಿ ಇದು ಹರಿದಾಡಿತ್ತು, ಅಲ್ಲಿ ಆಕ್ಷೇಪ ವ್ಯಕ್ತವಾದ ತಕ್ಷಣ ಅದನ್ನು ತೆಗೆಯಲು ಯತ್ನಿಸಲಾಯಿತು. ಆದರೆ ಸಂವಹನದ ಕೊರತೆಯಿಂದ ಅದು ವೈರಲ್ ಆಗಿದೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ," ಎಂದು ಅವರು ವಿನಂತಿಸಿದ್ದಾರೆ.
Advertisement