

ಮುಂಬೈ: ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಮೂವರ ಮೇಲೆ ದೊಣ್ಣೆ, ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ ಅವರ ಮಾವ ಮತ್ತು ಭಾವ ಸೇರಿದಂತೆ ಮೂವರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ರಸ್ತೆಯಲ್ಲಿ ನೀರು ತುಂಬಿದ ಗುಂಡಿಯ ಮೇಲೆ ಕಾರು ಚಲಿಸಿದ್ದು, ನೀರು ಸಿಡಿದಿದ್ದಕ್ಕಾಗಿ ಮಾಜಿ ಕ್ರಿಕೆಟಿಗನ ಸಂಬಂಧಿಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕಳೆದ ಶನಿವಾರ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಯೂಸುಫ್ ಖಾನ್(30) ಎಂಬುವವರು ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ನೀರಿನ ಗುಂಡಿಯ ಮೇಲೆ ಕಾರು ಚಲಿಸಿದಾಗ, ಪಕ್ಕದಲ್ಲೇ ಇದ್ದ ಯೂಸುಫ್ ಪಠಾಣ್ ಅವರ ಸಂಬಂಧಿ ಶೋಯಬ್ ಖಾನ್(35) ಅವರಿಗೆ ನೀರು ಸಿಡಿದಿದೆ. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ ಮತ್ತು ನಂತರ ದೈಹಿಕ ಹಲ್ಲೆ ಸಹ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ಸಂತ್ರಸ್ತ ಯೂಸುಫ್ ಖಾನ್, "ನಾನು ಕ್ಷಮೆ ಕೇಳಲು ಕಾರು ನಿಲ್ಲಿಸಿದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಶೋಯಬ್ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿದಿರಿನ ದೊಣ್ಣೆಯಿಂದ ಕಾರಿನ ಮುಂಭಾಗದ ಗ್ಲಾಸ್ ಒಡೆದಿದ್ದಲ್ಲದೆ, ನನ್ನ ಮೇಲೂ ಹಲ್ಲೆ ನಡೆಸಿದ" ಎಂದು ಹೇಳಿದ್ದಾರೆ.
ಯೂಸುಫ್ ಖಾನ್ ಮನೆಗೆ ತಲುಪಿದಾಗ, ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ದೂರು ನೀಡಲು ಪೊಲೀಸ್ ಠಾಣೆಗೆ ತೆರಳುವ ಮಾರ್ಗಮಧ್ಯೆ, ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್ ಅಲಿಯಾಸ್ ಮಕಾಲಿಕ್ ಎದುರಾಗಿದ್ದಾರೆ.
ಖಾಲಿದ್ ಖಾನ್ ಅವರೊಂದಿಗೆ ಅವರ ಮಗ ಉಮರ್ಶಾದ್ ಖಾನ್ (35), ಶೋಯಬ್ ಖಾನ್ ಮತ್ತು ಮತ್ತೊಬ್ಬ ಆರೋಪಿ ಶಹಬಾಜ್ ಪಠಾಣ್ ಸೇರಿಕೊಂಡು ಯೂಸುಫ್ ಖಾನ್ ಮತ್ತು ಅವರ ಸಂಬಂಧಿಕರ ಜೊತೆ ಮತ್ತೆ ಜಗಳ ತೆಗೆದಿದ್ದಾರೆ.
"ನನ್ನ ತಂದೆ ಮತ್ತು ನಾನು, ನನ್ನ ಸಹೋದರನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎಂಟರಿಂದ ಒಂಬತ್ತು ಜನರ ಗುಂಪು ಹೊರಬಂದು ನಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಅವರು ನಮ್ಮ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಯೂಸುಫ್ ಖಾನ್ ಆರೋಪಿಸಿದ್ದಾರೆ.
ಈ ಗ್ಯಾಂಗ್ ಯೂಸುಫ್ ಖಾನ್ ಮತ್ತು ಅವರ ಕುಟುಂಬದವರ ಮೇಲೆ ಬಿದಿರಿನ ದೊಣ್ಣೆ ಹಾಗೂ ಬೇಸ್ಬಾಲ್ ಬ್ಯಾಟ್ಗಳಿಂದ ಬರ್ಬರವಾಗಿ ಹಲ್ಲೆ ನಡೆಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಯೂಸುಫ್ ಖಾನ್ ಅವರ ಸಹೋದರ ಸಲ್ಮಾನ್ ಅವರ ಕೈ ಮೂಳೆ ಮುರಿದಿದ್ದು, ಚಿಕ್ಕಪ್ಪ ಝಾಕಿ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯೂಸುಫ್ ಪಠಾಣ್ ಅವರ ಮಾವ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Advertisement