

ಚೆನ್ನೈ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ರಾಜಕೀಯ ನಾಯಕರ ವಾಕ್ಸಮರ ತೀವ್ರಗೊಳ್ಳುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕತ್ವಕ್ಕಿಂತ ಹೆಚ್ಚಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಮಾತು ಕೇಳ್ತಾರೆ ಎಂಬ ತಮಿಳುನಾಡಿನ ಇಂಧನ ಮತ್ತು ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್ ಆರೋಪಿಸಿದ್ದಾರೆ.
ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕದೊಂದಿಗೆ ನೇರ ಮಾತುಕತೆ ನಡೆಸುವ ಪ್ರಸ್ತಾವನೆಯನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮುಂದಿಟ್ಟ ಕೆಲವೇ ದಿನಗಳಲ್ಲಿ ಈ ಹೇಳಿಕೆಗಳು ಹೊರಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲ್ ಕುಮಾರ್, ಶಿವಕುಮಾರ್ ಅವರು ಡಿಎಂಕೆ ನಾಯಕರೊಂದಿಗೆ ಅಸಾಮಾನ್ಯವಾದ ನಿಕಟ ರಾಜಕೀಯ ಸಂಬಂಧವನ್ನು ಹೊಂದಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
"ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರ ಮಾತನ್ನೂ ಕೇಳುವುದಿಲ್ಲ. ಅವರು ಕೇವಲ ಎಂ.ಕೆ. ಸ್ಟಾಲಿನ್ ಅವರ ಮಾತನ್ನು ಮಾತ್ರ ಕೇಳುತ್ತಾರೆ. ಸ್ಟಾಲಿನ್ ಏನಾದರೂ ಹೇಳಿದರೆ ಅವರು ಕೇಳುತ್ತಾರೆ. ಆ ಕುಟುಂಬದವರು, ಏನಾದರೂ ಹೇಳಿದರೆ ಅವರು ಕೇಳುತ್ತಾರೆ ಎಂದರು.
ಸಿಎಂ ವಿಜಯ್ ಅವರ ಉದ್ದೇಶಿತ ಕರ್ನಾಟಕ ಭೇಟಿಯನ್ನು ಸ್ಟಾಲಿನ್ ಟೀಕಿಸಿದ ನಂತರ, ತಮಿಳುನಾಡು ಸರ್ಕಾರವನ್ನು ರಾಜಕೀಯವಾಗಿ ಏಕಾಂಗಿಯನ್ನಾಗಿ ಬಿಂಬಿಸಲು ಡಿಎಂಕೆ ಪ್ರಯತ್ನಿಸುತ್ತಿದೆ ಎಂದು ನಿರ್ಮಲ್ ಕುಮಾರ್ ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ಗೆ ಡಿಎಂಕೆ ಪ್ರತ್ಯೇಕ ಅರ್ಜಿ ಸಲ್ಲಿಕೆಗೆ ಗರಂ: ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾಗಲೇ ವಿರೋಧ ಪಕ್ಷವು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದೆ. ಒಂದೇ ರಾಜ್ಯದಿಂದ ಅನೇಕ ಅರ್ಜಿಗಳನ್ನು ಸಲ್ಲಿಸಿದರೆ, ಅದು ಗೊಂದಲವನ್ನು ಸೃಷ್ಟಿಸುತ್ತದೆ ಮತ್ತು ರಾಜ್ಯದ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಡಿಎಂಕೆ ಆಡಳಿತಾವಧಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ಸಚಿವರು, ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷವು ಏಕೆ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದರು.
ಅಲ್ಲದೆ, ವಿಧಾನಸಭೆಯಲ್ಲಿ ಕಾವೇರಿ ನಿರ್ಣಯವನ್ನು ಸರ್ವಾನುಮತದಿಂದ ಬೆಂಬಲಿಸಿದ್ದರೂ, ನಂತರ ಅದನ್ನೇ ಪ್ರಶ್ನಿಸಿದ ಎಐಎಡಿಎಂಕೆ (AIADMK) ಕ್ರಮವನ್ನೂ ಅವರು ತೀವ್ರವಾಗಿ ಟೀಕಿಸಿದರು.ಅವರು ವಿಧಾನಸಭೆಯ ಒಳಗೆ ನಿದ್ದೆ ಮಾಡುತ್ತಿದ್ದರೇ?" ಎಂದು ಪ್ರಶ್ನಿಸಿದ ಅವರು, ನಿರ್ಣಯಕ್ಕೆ ಬೆಂಬಲ ನೀಡುವ ಮುನ್ನ ಎಐಎಡಿಎಂಕೆಯ ಹಿರಿಯ ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿದರು.
ಬೆಂಗಳೂರಿನಿಂದ ಬಂದ ಹಣ: ಟಿವಿಕೆ (TVK) ಶಾಸಕರನ್ನು ಸೆಳೆಯುವ ಪ್ರಯತ್ನದ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯನ್ನು ಕರ್ನಾಟಕದ ನಂಟನ್ನು ಸೇರಿಸಿದ ಅವರು, ವಶಪಡಿಸಿಕೊಳ್ಳಲಾದ ಹಣದ ಬಹುಭಾಗವು ಬೆಂಗಳೂರಿನಿಂದ ಬಂದಿದೆ. ಡಿಎಂಕೆ ನಾಯಕರಿಗೆ ಬೆಂಗಳೂರು ಹೇಗೆ ಇಂತಹ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ? ಎಂದು ನಿರ್ಮಲ್ಕುಮಾರ್ ಪ್ರಶ್ನಿಸಿದರು. ಈ ತನಿಖೆಯು ಶಿವಕುಮಾರ್ ಮತ್ತು ಡಿಎಂಕೆ ನಾಯಕರ ನಡುವಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.