

ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಕುಟುಂಬದ ಆರ್ಥಿಕ ವ್ಯವಹಾರಗಳು ಮತ್ತು ಪಕ್ಷದ ನಿಧಿಯ ಕುರಿತು ತನಿಖೆ ನಡೆಸುವಂತೆ ಕೋರಿದ್ದ ಆರ್ಟಿಐ ಕಾರ್ಯಕರ್ತರ ವಿರುದ್ಧ ಸಿಜೆಪಿ ವಾಗ್ದಾಳಿ ನಡೆಸಿದ್ದು, ಒಬ್ಬ ಖಾಸಗಿ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಸೂರತ್ ಮೂಲದ ಆರ್ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಸಲ್ಲಿಸಿದ ದೂರುಗಳಿಗೆ ಪ್ರತಿಕ್ರಿಯಿಸಿದ ಸಿಜೆಪಿ ವಕ್ತಾರೆ ವೈಷ್ಣವಿ ಗೌರ್, 'ಒಬ್ಬ ಖಾಸಗಿ ವ್ಯಕ್ತಿಯ ಶಿಕ್ಷಣ ವೆಚ್ಚದ ಕುರಿತು ಆರ್ಟಿಐ ಅರ್ಜಿಗಳನ್ನು ಸಲ್ಲಿಸುವವರು 'ಪಿಎಂ ಕೇರ್ಸ್ ಫಂಡ್' (PM CARES Fund) ಬಗ್ಗೆಯೂ ಗಮನಹರಿಸಬೇಕು. ಮೋದಿಜಿ ನಿಮ್ಮನ್ನು ಕ್ಷಮಿಸುತ್ತಾರೆ, ಚಿಂತಿಸಬೇಡಿ' ಎಂದು ಹೇಳಿದರು.
ಆಗಸ್ಟ್ 1 ರಂದು ಭಾರತೀಯ ಚುನಾವಣಾ ಆಯೋಗ (ECI), ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (CBIC) ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸಿರುವುದಾಗಿ ಆರ್ಟಿಐ ಕಾರ್ಯಕರ್ತ ಅಮಿತ್ ತಿವಾರಿ ಹೇಳಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (MIDC) ನಿವೃತ್ತ ಕಿರಿಯ ಎಂಜಿನಿಯರ್ ಆಗಿರುವ ದೀಪ್ಕೆ ಅವರ ತಂದೆ ಭಗವಾನ್ ರಾವ್ ದೀಪ್ಕೆ ಅವರ ಆರ್ಥಿಕ ವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ತಿವಾರಿ ಕೋರಿದ್ದಾರೆ.
ತಿಂಗಳಿಗೆ ಸುಮಾರು 60,000 ರಿಂದ 65,000 ರೂಪಾಯಿಗಳಷ್ಟು ಆದಾಯವಿರುವ ಸರ್ಕಾರಿ ನೌಕರರೊಬ್ಬರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳುಹಿಸಲು ಹೇಗೆ ಸಾಧ್ಯವಾಯಿತು. ಈ ಪ್ರಕರಣದಲ್ಲಿ ಅಕ್ರಮ ಆಸ್ತಿ ಗಳಿಕೆ ಅಥವಾ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಸಾಧ್ಯತೆಯಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
CJP ಯಾವುದೇ ನೋಂದಣಿ ಇಲ್ಲದಿದ್ದರೂ ರಾಜಕೀಯ ಪಕ್ಷವೊಂದರಂತೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅದರ ಕಾನೂನುಬದ್ಧ ಸ್ಥಾನಮಾನವನ್ನು ಪ್ರಶ್ನಿಸಿದ ತಿವಾರಿ, ನೋಂದಾಯಿತ ರಾಜಕೀಯ ಪಕ್ಷವಾಗಿಲ್ಲದಿದ್ದರೂ ಆ ಸಂಘಟನೆಯು ದೇಣಿಗೆಗಳನ್ನು ಕಾನೂನುಬದ್ಧವಾಗಿ ಸ್ವೀಕರಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗವನ್ನು (ECI) ಒತ್ತಾಯಿಸಿದ್ದಾರೆ.
CBIC ಗೆ ಸಲ್ಲಿಸಿದ ಪ್ರತ್ಯೇಕ ದೂರಿನಲ್ಲಿ, CJP ಪ್ರತಿಭಟನಾಕಾರರಿಗಾಗಿ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಘೋಷಿಸಿದ್ದ 1 ಕೋಟಿ ರೂ.ಗಳ ಕಾನೂನು ರಕ್ಷಣಾ ನಿಧಿಯ ಮೇಲೆ ಶೇ 18ರಷ್ಟು GST ವಿಧಿಸುವಂತೆ ತಿವಾರಿ ಕೋರಿದ್ದಾರೆ.
NEET ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಅವರ ದಿವಂಗತ ತಾಯಿ ಮತ್ತು ಭಾರತದ ವಿದೇಶಾಂಗ ಸಂಬಂಧಗಳ ಕುರಿತು ಅವಹೇಳನಕಾರಿ ಭಾಷೆಯನ್ನು ಬಳಸುವ ಮೂಲಕ CJP ನಾಯಕರು ಮಿತಿ ಮೀರಿದ್ದಾರೆ. ಈ ಹೇಳಿಕೆಗಳು ಕೂಡ ತಮ್ಮ ದೂರಿನ ಭಾಗವಾಗಿವೆ ಎಂದು ಅವರು ತಿಳಿಸಿದರು.
ದೇಶದಾದ್ಯಂತ ನಡೆದ ಪ್ರತಿಭಟನೆ ನಂತರ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ CJP ಪ್ರತಿಭಟನಾಕಾರರಿಗೆ ಬೆಂಬಲ ನೀಡಲು, ಜುಲೈ 27 ರಂದು ಸಿಬಲ್ ಅವರು 1 ಕೋಟಿ ರೂಪಾಯಿಗಳ ಕಾನೂನು ನೆರವು ನಿಧಿಯನ್ನು ಘೋಷಿಸಿದ್ದರು.
ಸಂಸ್ಥೆಯ ನಿಧಿ ಮೂಲಗಳು ಮತ್ತು ಕಾನೂನುಬದ್ಧ ಸ್ಥಾನಮಾನದ ಕುರಿತಾದ ಪ್ರಶ್ನೆಗಳು ತೀವ್ರಗೊಂಡಾಗ, CJP ಈ ದೂರುಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದೆ.