'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ತಡೆಯಲು ಭಾರಿ ಸಂಖ್ಯೆಯಲ್ಲಿ ಜನ ಬೀದಿಗಿಳಿಯಬೇಕು': ಅರವಿಂದ ಕೇಜ್ರಿವಾಲ್

'ಗೋವಾ ಮತ್ತು ಗುಜರಾತ್‌ನಲ್ಲೂ ನಮ್ಮ ಶಾಸಕರಿದ್ದಾರೆ ಮತ್ತು ಅಲ್ಲಿಯೂ E20 ಮಸೂದೆ ಅಂಗೀಕಾರವಾಗಲು ನಾವು ಬಿಡುವುದಿಲ್ಲ. ನಮ್ಮ ಶಾಸಕರು ವಿಧಾನಸಭೆಗಳಲ್ಲಿ ಇದನ್ನು ವಿರೋಧಿಸುತ್ತಾರೆ' ಎಂದು ಅವರು ಹೇಳಿದರು.
Arvind Kejriwal
ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ಶೇ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಿರುದ್ಧ ತಮ್ಮ ಪಕ್ಷದ ಅಭಿಯಾನ ಮುಂದುವರಿಯಲಿದ್ದು, ಇದನ್ನು ತಡೆಯಲು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.

E20 ಇಂಧನವನ್ನು ವಿರೋಧಿಸುವ ಮನವಿ ಪತ್ರಗಳೊಂದಿಗೆ ಪ್ರಧಾನ ಮಂತ್ರಿಯ ನಿವಾಸದತ್ತ ಮೆರವಣಿಗೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ತಮ್ಮ ಪಕ್ಷದ ಶಾಸಕರನ್ನು ಹೊಂದಿರುವ ರಾಜ್ಯಗಳಲ್ಲಿ ಈ ನೀತಿಯನ್ನು ಜಾರಿಗೆ ತರುವ ಯಾವುದೇ ಕ್ರಮವನ್ನು ಪಕ್ಷವು ವಿರೋಧಿಸಲಿದೆ ಎಂದು ತಿಳಿಸಿದರು.

'ಗೋವಾ ಮತ್ತು ಗುಜರಾತ್‌ನಲ್ಲೂ ನಮ್ಮ ಶಾಸಕರಿದ್ದಾರೆ ಮತ್ತು ಅಲ್ಲಿಯೂ E20 ಮಸೂದೆ ಅಂಗೀಕಾರವಾಗಲು ನಾವು ಬಿಡುವುದಿಲ್ಲ. ನಮ್ಮ ಶಾಸಕರು ವಿಧಾನಸಭೆಗಳಲ್ಲಿ ಇದನ್ನು ವಿರೋಧಿಸುತ್ತಾರೆ' ಎಂದು ಅವರು ಹೇಳಿದರು.

ಮಂಗಳವಾರ ನಡೆದ ಮೆರವಣಿಗೆಯಲ್ಲಿ ಕೇವಲ 100 ಮಂದಿ ಮಾತ್ರ ಭಾಗವಹಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮತ್ತು ಟ್ರೋಲಿಂಗ್‌ಗೆ ಒಳಗಾದರೂ ಅವರು ಧೈರ್ಯದಿಂದ ಪಾಲ್ಗೊಂಡರು ಎಂದು ಕೇಜ್ರಿವಾಲ್ ಹೇಳಿದರು.

Arvind Kejriwal
'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿ, ಮೈಲೇಜ್‌ನಲ್ಲಿ ಇಳಿಕೆ': ಬಿ.ಕೆ ಹರಿಪ್ರಸಾದ್

E20 ಇಂಧನದ ವಿರುದ್ಧದ 2.30 ಲಕ್ಷಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಲು, ಸುಮಾರು 100 ಜನರೊಂದಿಗೆ ಪ್ರಧಾನ ಮಂತ್ರಿಯವರ ನಿವಾಸದತ್ತ ಮೆರವಣಿಗೆ ಹೊರಟಿದ್ದ ಕೇಜ್ರಿವಾಲ್ ಮತ್ತು ಪಕ್ಷದ ಇತರ ನಾಯಕರನ್ನು ದೆಹಲಿ ಪೊಲೀಸರು ಮಂಗಳವಾರ ತಡೆದರು; ಇದರಿಂದಾಗಿ ಅವರು ಫಿರೋಜ್ ಶಾ ರಸ್ತೆಯಲ್ಲಿ ಪ್ರತಿಭಟನೆ ನಡೆಸುವಂತಾಯಿತು.

'ಜನರು E20 ಇಂಧನದಿಂದ ಮುಕ್ತಿ ಪಡೆಯಲು ಬಯಸಿದರೆ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯಬೇಕಾಗುತ್ತದೆ' ಎಂದು ಅವರು ಹೇಳಿದರು.

ಈ ನೀತಿಯು ಭಾರತೀಯ ರೈತರಿಗಿಂತ ಹೆಚ್ಚಾಗಿ ವಿದೇಶಿ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂದು ಆರೋಪಿಸಿದ ಕೇಜ್ರಿವಾಲ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿಯದೆ ಅಮೆರಿಕದಿಂದ ಎಥೆನಾಲ್ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

'ನಾನು ಇಂದು ಸಂಸತ್ತಿನಲ್ಲಿ ಈ ಪ್ರಶ್ನೆಯನ್ನು ಎತ್ತಿದೆ; ಸರ್ಕಾರವು E20 ನೀತಿಯನ್ನು ಜಾರಿಗೆ ತರಲು ದೃಢಸಂಕಲ್ಪ ಹೊಂದಿದೆ ಎಂಬುದನ್ನು ಅಲ್ಲಿ ದೊರೆತ ಉತ್ತರವು ಸ್ಪಷ್ಟಪಡಿಸುತ್ತದೆ. ಎಥೆನಾಲ್ ಉತ್ಪಾದನೆಯಿಂದ ಭಾರತೀಯ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಮತ್ತು ಬದಲಾಗಿ ಈ ನೀತಿಯು ಅಮೆರಿಕದ ರೈತರಿಗೆ ಲಾಭದಾಯಕವಾಗಲಿದೆ' ಆಮ್ ಆದ್ಮಿ ಪಕ್ಷದ (AAP) ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com