

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯ ಭೇಟಿಯ ಉದ್ದೇಶಕ್ಕೆ ಅವರ ವೇಳಾಪಟ್ಟಿ ಸೂಕ್ತವಲ್ಲ ಎಂದು ಹೇಳಿ ಅವರ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ. ಕೇಂದ್ರ ಸರ್ಕಾರ ರೇವಂತ್ ಅವರಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದೆ ಎಂದು ಸಿಎಂಒ ಹೇಳಿತ್ತು. ಇದಕ್ಕೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದು, ರಾಜಕೀಯ ಅನುಮತಿ ನೀಡುವ ಮೊದಲು ಸಚಿವಾಲಯವು ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರ ಭೇಟಿಗಳನ್ನು ಮೌಲ್ಯಮಾಪನ ಮಾಡುತ್ತದೆ ಎಂದರು.
ರಾಜಕೀಯ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಹೇಳಿದ ಕೆಲವೇ ಗಂಟೆಗಳ ನಂತರ ವಿದೇಶಾಂಗ ಸಚಿವಾಲಯದಿಂದ ಈ ಸ್ಪಷ್ಟೀಕರಣ ಬಂದಿದೆ. ಆದ್ದರಿಂದ, ರೇವಂತ್ ರೆಡ್ಡಿ ಅವರ ಪ್ರಸ್ತಾವಿತ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ರೆಡ್ಡಿ ಪ್ರಸ್ತುತ "ತೆಲಂಗಾಣ ರೈಸಿಂಗ್" ನಿಯೋಗದ ಭಾಗವಾಗಿ ಲಂಡನ್ನಲ್ಲಿದ್ದಾರೆ. ಅವರು ಯುಕೆಯಲ್ಲಿನ ಕಾರ್ಯಕ್ರಮಗಳ ನಂತರ ಅಮೆರಿಕಕ್ಕೆ ಪ್ರಯಾಣಿಸಿ ಆಗಸ್ಟ್ 30 ರಂದು ಹೈದರಾಬಾದ್ಗೆ ಮರಳಲು ಯೋಜಿಸಿದ್ದರು. ರೇವಂತ್ ರೆಡ್ಡಿ ಅವರಿಗೆ ಯುಕೆಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ತೆಲಂಗಾಣ ಸಿಎಂಒ ಪ್ರಕಾರ, ರೆಡ್ಡಿ ಈಗ ಬೋಸ್ಟನ್ಗೆ ಹೋಗುವ ಬದಲು ಆಗಸ್ಟ್ 23 ರಂದು ಹೈದರಾಬಾದ್ಗೆ ಹಿಂತಿರುಗಲಿದ್ದಾರೆ. ರಾಜಕೀಯ ಕಾರಣಗಳನ್ನು ಉಲ್ಲೇಖಿಸಿ ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಿದ ನಂತರ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ 'ತೆಲಂಗಾಣ ರೈಸಿಂಗ್' ನ ಅಧಿಕೃತ ನಿಯೋಗವು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ. ತೆಲಂಗಾಣ ಸರ್ಕಾರವು ತನ್ನ 'ತೆಲಂಗಾಣ ರೈಸಿಂಗ್' ಸಂಪರ್ಕ ಉಪಕ್ರಮದ ಭಾಗವಾಗಿ ಅಮೆರಿಕ ಪ್ರವಾಸವನ್ನು ಯೋಜಿಸಿತ್ತು, ಈ ಸಮಯದಲ್ಲಿ ಮುಖ್ಯಮಂತ್ರಿಗಳು ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂವಹನ ನಡೆಸಬೇಕಾಗಿತ್ತು.