

ನವದೆಹಲಿ: ದೇಶದ ಗಣಿಗಾರಿಕೆ ಮತ್ತು ಹೂಡಿಕೆ ವಲಯದಲ್ಲಿ ದಶಕಗಳಿಂದ ಬಾಕಿ ಉಳಿದಿದ್ದ ದೊಡ್ಡ ತೆರಿಗೆ ಗೊಂದಲಕ್ಕೆ ಕೇಂದ್ರ ಸರ್ಕಾರವು ಎಂಎಂಡಿಆರ್ ಅಂದರೆ ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ ಕಾಯ್ದೆ 2026ರ ಮೂಲಕ ಶಾಶ್ವತ ತೆರಿಗೆ ಪರಿಹಾರ ನೀಡಿದೆ. ಈ ಕಾನೂನು ತಿದ್ದುಪಡಿಯು ಜಾಗತಿಕ ಹೂಡಿಕೆದಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು ಭಾರತದ ಖನಿಜ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದೆ. ಆ ಕುರಿತ ವರದಿ ಇಲ್ಲಿದೆ:
ಮೂವತ್ತೈದು ವರ್ಷಗಳ ತೆರಿಗೆ ಗೊಂದಲಕ್ಕೆ ಬ್ರೇಕ್!
ಗಣಿಗಾರಿಕೆ ಉದ್ಯಮದಲ್ಲಿ ರಾಯಲ್ಟಿ ಮತ್ತು ಸ್ಥಳೀಯ ತೆರಿಗೆಗಳ ವಿಧಿಸುವಿಕೆ ಕುರಿತು ಕಳೆದ 35 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತೀವ್ರ ಕಾನೂನು ಹೋರಾಟ ಹಾಗೂ ಗೊಂದಲಗಳು ಉಂಟಾಗಿದ್ದವು. 1957ರ ಕಾಯ್ದೆಯ ಅಸ್ಪಷ್ಟತೆಯಿಂದ ಆರಂಭವಾದ ಈ ವಿವಾದಕ್ಕೆ 2024ರ ಸುಪ್ರೀಂ ಕೋರ್ಟ್ ತೀರ್ಪು ಹೊಸ ದಿಕ್ಕು ನೀಡಿತು. ರಾಯಲ್ಟಿ ಎಂಬುದು ತೆರಿಗೆಯಲ್ಲ ಎಂದ ನ್ಯಾಯಾಲಯ, ರಾಜ್ಯಗಳಿಗೆ ಖನಿಜ ಭೂಮಿಯ ಮೇಲೆ ತೆರಿಗೆ ವಿಧಿಸುವ ಹಕ್ಕಿದೆ ಎಂದು ಸ್ಪಷ್ಟಪಡಿಸಿತು. ಆದರೆ ಇದರಿಂದ ಹಳೆಯ ಬಾಕಿ ತೆರಿಗೆಗಳ ಹೊರೆ ಗಣಿಗಾರಿಕೆ ಕಂಪನಿಗಳ ಮೇಲೆ ಬೀಳುವ ಆತಂಕ ಶುರುವಾಯಿತು. ಇದರಿಂದಾಗಿ ದೊಡ್ಡ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹಿಂಜರಿಯುತ್ತಿದ್ದರು. ಈಗ ಜಾರಿಗೆ ಬಂದಿರುವ ಹೊಸ ತಿದ್ದುಪಡಿಯು ತೆರಿಗೆ ನಿಯಮಗಳನ್ನು ಸರಳಗೊಳಿಸಿದ್ದು ಹೂಡಿಕೆದಾರರಿಗೆ ಸಂಪೂರ್ಣ ಸ್ಪಷ್ಟತೆ ಮತ್ತು ವ್ಯವಹಾರ ನಡೆಸಲು ಸುಲಭ ವಾತಾವರಣವನ್ನು ಸೃಷ್ಟಿಸಿದೆ.
2026ರ ತಿದ್ದುಪಡಿ ತಂದ ಮಹತ್ವದ ಬದಲಾವಣೆ
ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾದ 2026ರ ಎಂಎಂಡಿಆರ್ ತಿದ್ದುಪಡಿ ಮಸೂದೆ ಗಣಿಗಾರಿಕೆ ಕ್ಷೇತ್ರಕ್ಕೆ ಸ್ಥಿರತೆ ತರಲು ಮುಂದಾಗಿದೆ. ರಾಜ್ಯಗಳು ವಿಧಿಸುವ ಹೆಚ್ಚುವರಿ ತೆರಿಗೆ ಮತ್ತು ಸೆಸ್ ಮೇಲೆ ಮಿತಿ ಹೇರುವ ಮೂಲಕ ದೇಶಾದ್ಯಂತ ಏಕರೂಪದ ವೆಚ್ಚ ವ್ಯವಸ್ಥೆ ರೂಪಿಸುವುದು ಇದರ ಮುಖ್ಯ ಉದ್ದೇಶ. ಇದರಿಂದ ರಾಜ್ಯಗಳ ನಡುವಿನ ಅನಗತ್ಯ ತೆರಿಗೆ ವ್ಯತ್ಯಾಸ ನಿವಾರಣೆಯಾಗಿ, ಹೂಡಿಕೆದಾರರಿಗೆ ಭವಿಷ್ಯದ ಆರ್ಥಿಕ ಅನಿಶ್ಚಿತತೆಯ ಭಯ ದೂರವಾಗಲಿದೆ. ಅದರಂತೆ, ಈ ತಿದ್ದುಪಡಿಯು ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂಬ ವಾದಗಳಿದ್ದರೂ, ಕೇಂದ್ರ ಸರ್ಕಾರ ಇದನ್ನು ದೇಶದ ಸಮಗ್ರ ಹಿತಾಸಕ್ತಿಯ ದೃಷ್ಟಿಯಿಂದ ಸಮರ್ಥಿಸಿಕೊಂಡಿದೆ. ರಾಜ್ಯಗಳಿಗೆ ಸಿಗುವ ಮೂಲ ರಾಯಲ್ಟಿ ಮತ್ತು ಹರಾಜು ಪ್ರೀಮಿಯಂ ಮುಂದುವರಿಯಲಿದ್ದು, ಕೇವಲ ಅನಿಯಮಿತ ಹೆಚ್ಚುವರಿ ಲೆವಿಗಳಿಗೆ ಮಾತ್ರ ಮಿತಿ ಹೇರಲಾಗಿದೆ.
ಆತ್ಮನಿರ್ಭರ ಭಾರತಕ್ಕೆ ದೇಶೀಯ ಖನಿಜವೇ ಆಧಾರ
ಮುಂದುವರೆದು, ಮೊಬೈಲ್ ಫೋನ್, ಲ್ಯಾಪ್ಟಾಪ್ ಮತ್ತು ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಸಲು ಲಿಥಿಯಂ, ಕೋಬಾಲ್ಟ್, ಮತ್ತು ನಿಕಲ್ನಂತಹ ಖನಿಜಗಳು ಅತ್ಯಗತ್ಯ. ಆದರೆ, ಇದುವರೆಗೆ ಭಾರತವು ಇವುಗಳಿಗಾಗಿ ಚೀನಾ ಮತ್ತು ಇತರ ದೇಶಗಳ ಆಮದಿನ ಮೇಲೆ ಅವಲಂಬಿತವಾಗಿತ್ತು. ಆದರೆ ಇನ್ಮುಂದೆ ದೇಶದ ಒಳಗಡೆಯೇ ಇವುಗಳ ಗಣಿಗಾರಿಕೆ ಮತ್ತು ಪರಿಶೋಧನೆಯನ್ನು ಸುಲಭವಾಗಿ ನಡೆಸಲು ಖಾಸಗಿ ಕಂಪನಿಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.