

ಮುಂಬೈ (ಮಹಾರಾಷ್ಟ್ರ): ಕುಂಭಮೇಳದಂತಹ ಬೃಹತ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚವಾಗುತ್ತಿರುವ ಈ ಸಂದರ್ಭದಲ್ಲಿ, ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಶಾಲೆಗಳ ವಾಸ್ತವ ಸ್ಥಿತಿಯ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿರುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಹೌದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾ. ಪ್ರಸನ್ನ ಬಿ. ವರಾಲೆ ಅವರು ಇತ್ತೀಚೆಗೆ ಮಹಾರಾಷ್ಟ್ರದ ಕಾರ್ಯಕ್ರಮವೊಂದರಲ್ಲಿ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡುತ್ತಾ, "ಕುಂಭಮೇಳದ ಬಜೆಟ್ನಲ್ಲಿ ಶೇ 0.1 ರಷ್ಟು ಹಣ ಶಾಲೆಗಳಿಗೆ ಸಿಕ್ಕಿದ್ದರೂ ನೂರಾರು ಶಾಲೆಗಳನ್ನು ಉಳಿಸಬಹುದಿತ್ತು" ಎಂದು ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ನ್ಯಾಯಮೂರ್ತಿಗಳು ಹೇಳಿದ್ದೇನು?
ಮಹಾರಾಷ್ಟ್ರ ಸರ್ಕಾರವು ನಾಸಿಕ್ ಕುಂಭಮೇಳದ ಮೂಲಸೌಕರ್ಯಕ್ಕಾಗಿ 34,000 ಕೋಟಿ ರೂಪಾಯಿ ಮತ್ತು ಕಾರಿಡಾರ್ ಯೋಜನೆಗಾಗಿ 11,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ಇತ್ತೀಚೆಗೆ ಘೋಷಿಸಿದ್ದರು. ಇದರ ಬೆನಲ್ಲೇ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾ. ಪ್ರಸನ್ನ ಬಿ. ವರಾಲೆ, ಸರ್ಕಾರ ಇಷ್ಟು ದೊಡ್ಡ ಮೊತ್ತವನ್ನು ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡುತ್ತಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ಕುಂಭಮೇಳಕ್ಕೆ ಮೀಸಲಿಟ್ಟ ಹಣದಲ್ಲಿ ಕೇವಲ ಶೇಕಡಾ 0.1 ರಷ್ಟು (ಅಂದರೆ ಸುಮಾರು 32 ಕೋಟಿ ರೂಪಾಯಿ) ಹಣವನ್ನು ಶಿಕ್ಷಣಕ್ಕೆ ಬಳಸಿದ್ದರೂ ಸಹ, ರಾಜ್ಯದಲ್ಲಿ ಮುಚ್ಚಿಹೋಗಿರುವ 100 ರಿಂದ 125 ಪ್ರಾದೇಶಿಕ ಭಾಷೆಯ (ಮರಾಠಿ) ಶಾಲೆಗಳನ್ನು ಉಳಿಸಬಹುದಿತ್ತು ಎಂದು ಹೇಳಿದರು.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾ. ಪ್ರಸನ್ನ ಬಿ. ವರಾಲೆ, ತಾವು ಕೂಡ ಮುನ್ಸಿಪಲ್ ಮತ್ತು ಜಿಲ್ಲಾ ಪರಿಷತ್ನ ಸರ್ಕಾರಿ ಶಾಲೆಗಳಲ್ಲೇ 10ನೇ ತರಗತಿಯವರೆಗೆ ಓದಿದ್ದಾಗಿ ನೆನಪಿಸಿಕೊಂಡರು. ಜೊತೆಗೆ, ಪ್ರಾದೇಶಿಕ ಭಾಷೆಯಲ್ಲಿ ಓದುವುದರಿಂದ ಎಂದಿಗೂ ಯಾರಿಗೂ ಹಿನ್ನಡೆಯಾಗುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ, ಇತ್ತೀಚೆಗೆ ವಸತಿ ಶಾಲೆಯೊಂದರಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ನೆಲದ ಮೇಲೆ ಮಲಗಿದ್ದ ಮೂವರು ವಿದ್ಯಾರ್ಥಿನಿಯರು ಹಾವಿನ ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, 'ಈ ಹಿಂದೆ ಒಟ್ಟು ಬಜೆಟ್ನಲ್ಲಿ ಶಿಕ್ಷಣಕ್ಕೆ ಶೇಕಡಾ 8 ರಿಂದ 12 ರಷ್ಟು ಹಣವನ್ನು ಮೀಸಲಿಡಲಾಗುತ್ತಿತ್ತು. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಶಿಕ್ಷಣಕ್ಕೆ ನೀಡುವ ಬಜೆಟ್ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.