ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್, ನದಿ ಪಾತ್ರದಲ್ಲಿ ಕಟ್ಟೆಚ್ಚರ

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗಾಗಿ ಒಟ್ಟು 20 ತಂಡಗಳನ್ನು ನಿಯೋಜಿಸಲಾಗಿದೆ.
NDRF on high alert in Bihar, Uttar Pradesh
ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್
Updated on

ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಗಂಡಕ್‌ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹೈ ಅಲರ್ಟ್‌ನಲ್ಲಿದೆ.

ಬುಧವಾರ ಸಂಜೆ 6.30ಕ್ಕೆ ಬಿಡುಗಡೆ ಮಾಡಿರುವ ನವೀಕರಿಸಿದ ಹೇಳಿಕೆಯಲ್ಲಿ NDRF, ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದು ತಿಳಿಸಿದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗಾಗಿ ಒಟ್ಟು 20 ತಂಡಗಳನ್ನು ನಿಯೋಜಿಸಲಾಗಿದೆ.

ಕೇಂದ್ರ ಜಲ ಆಯೋಗ (CWC) ನೀಡಿರುವ ಸಲಹೆ ಹಾಗೂ ಮಾಧ್ಯಮ ವರದಿಗಳ ಪ್ರಕಾರ, ನೇಪಾಳದ ಫುರ್ಕೆ ಖೋಲಾ ಪ್ರದೇಶದಲ್ಲಿ ತ್ರಿಶೂಲಿ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ.

ಈ ಪ್ರದೇಶ ಭಾರತ-ನೇಪಾಳ ಗಡಿಯಿಂದ ಸುಮಾರು 160 ಕಿ.ಮೀ ದೂರದಲ್ಲಿದೆ. ನೇಪಾಳ-ಚೀನಾ ಗಡಿ ಸಮೀಪ ಸಂಭವಿಸಿರುವ ಶಂಕಿತ ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF) ಚಟುವಟಿಕೆಯಿಂದ ಈ ರೀತಿಯ ಹಠಾತ್ ನೀರಿನ ಏರಿಕೆ ಉಂಟಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

NDRF on high alert in Bihar, Uttar Pradesh
ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ಗಂಡಕ್‌ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ಅಲೆ ಕೆಳಭಾಗದತ್ತ ಹರಿದು ಗಂಡಕ್‌ ನದಿಗೆ ತಲುಪುವ ಸಾಧ್ಯತೆ ಇದೆ ಎಂದು NDRF ತಿಳಿಸಿದೆ.

ಗಂಡಕ್‌ ನದಿಯುದ್ದಕ್ಕೂ ಭಾರತ-ನೇಪಾಳ ಗಡಿಯ ಸಮೀಪದಲ್ಲಿರುವ ಬಿಹಾರ ಮತ್ತು ಉತ್ತರ ಪ್ರದೇಶದ ಸ್ಥಳೀಯ ಆಡಳಿತಗಳಿಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸುವಂತೆ ಸೂಚಿಸಲಾಗಿದೆ.

ನೇಪಾಳದ ದಿಢೀರ್ ಪ್ರವಾಹದಿಂದ ಗಂಡಕ್‌ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಸಂಭವಿಸಬಹುದಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು NDRF ಹೈ ಅಲರ್ಟ್ ಘೋಷಿಸಿದೆ.

20 NDRF ತಂಡಗಳು ಸಜ್ಜು

ಬಿಹಾರದಲ್ಲಿ 9 NDRF ತಂಡಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಪಶ್ಚಿಮ ಚಂಪಾರಣ್ ಮತ್ತು ಮುಜಫರ್‌ಪುರ ಜಿಲ್ಲೆಗಳೂ ಸೇರಿವೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ 11 ತಂಡಗಳನ್ನು ನಿಯೋಜಿಸಲಾಗಿದ್ದು, ಗಂಡಕ್‌ ನದಿಯ ಸಮೀಪದಲ್ಲಿರುವ ಹಾಗೂ ಪ್ರವಾಹದಿಂದ ಪರಿಣಾಮಕ್ಕೊಳಗಾಗುವ ಸಾಧ್ಯತೆ ಇರುವ ಕುಶಿನಗರ ಜಿಲ್ಲೆಗೂ ತಂಡಗಳನ್ನು ಕಳುಹಿಸಲಾಗಿದೆ.

ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಜಲ ಆಯೋಗದೊಂದಿಗೆ ನಿಕಟ ಸಮನ್ವಯದಲ್ಲಿ NDRF ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಾದರೆ ತಕ್ಷಣ ಕಾರ್ಯಾಚರಣೆಗೆ ಇಳಿಯಲು ಹೆಚ್ಚುವರಿ ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ.

ನೇಪಾಳ ನೆರವು ಕೇಳಿದರೆ ತಂಡ ಏರ್‌ಲಿಫ್ಟ್‌

ನೇಪಾಳ ಸರ್ಕಾರ ಭಾರತದಿಂದ ರಕ್ಷಣಾ ಸಿಬ್ಬಂದಿಯ ನೆರವು ಕೋರಿದರೆ, ಕೆಲವು NDRF ರಕ್ಷಣಾ ತಂಡಗಳನ್ನು ಭಾರತೀಯ ವಾಯುಪಡೆಯ (IAF) ಗಾಜಿಯಾಬಾದ್ ನಿಲ್ದಾಣದಿಂದ ನೇಪಾಳಕ್ಕೆ ಏರ್‌ಲಿಫ್ಟ್ ಮಾಡಲು ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ನೇಪಾಳದಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಗಂಡಕ್‌ ನದಿಯ ನೀರಿನ ಮಟ್ಟದ ಮೇಲೆ ಭಾರತೀಯ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಗಡಿಭಾಗಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com