

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 137ನೇ ಆವೃತ್ತಿಯಲ್ಲಿ ಇಂದು ಬೆಂಗಳೂರಿನ ಮಹಿಳಾ ಉದ್ಯಮಿ ಟಿ.ಎಸ್. ನಿಂಗಮ್ಮ ಅವರ ಯಶೋಗಾಥೆಯನ್ನು ಹೊಗಳುವ ಮೂಲಕ ಇಡೀ ದೇಶದ ಗಮನ ಸೆಳೆದರು.
ಕೇಂದ್ರ ಸರ್ಕಾರದ ‘ಪಿಎಂ ಸ್ವನಿಧಿ’ ಯೋಜನೆಯ ನೆರವು ಪಡೆದುಕೊಂಡು ಸಣ್ಣ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡಿರುವ ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದರು.
ನಿಂಗಮ್ಮ ಅವರು ತಮ್ಮ ಪತಿಯೊಂದಿಗೆ ಸೇರಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದ್ದರು. ವ್ಯಾಪಾರ ಉತ್ತಮವಾಗಿ ನಡೆಯುತ್ತಿದ್ದರೂ ಅದನ್ನು ಮತ್ತಷ್ಟು ವಿಸ್ತರಿಸಲು ಬಂಡವಾಳದ ಅಗತ್ಯವಿತ್ತು. ಈ ಸಂದರ್ಭದಲ್ಲಿ ‘ಪಿಎಂ ಸ್ವನಿಧಿ’ ಯೋಜನೆಯಿಂದ ಅವರಿಗೆ ಆರ್ಥಿಕ ನೆರವು ದೊರೆಯಿತು.
ಯೋಜನೆಯ ನೆರವಿನಿಂದ ನಿಂಗಮ್ಮ ಅವರು ತಮ್ಮ ತಳ್ಳುವ ಗಾಡಿಯನ್ನು ಉತ್ತಮಗೊಳಿಸಿದರು. ಅಗತ್ಯ ಸಾಮಗ್ರಿಗಳನ್ನು ಸಗಟು ದರದಲ್ಲಿ ಖರೀದಿಸಲು ಆರಂಭಿಸಿದರು. ಜತೆಗೆ ತಿಂಡಿಗಳ ಪಟ್ಟಿಗೆ ಹಲವು ಹೊಸ ಪದಾರ್ಥಗಳನ್ನು ಸೇರ್ಪಡೆಗೊಳಿಸಿದರು. ಇದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಆದಾಯವೂ ವೃದ್ಧಿಯಾಯಿತು. ಪರಿಣಾಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬಂತು.
ಜತೆಗೆ ತಾನು ದುಡಿದಿರುವ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಿದ್ದು, ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಸಾಕ್ಷಿ ಎಂದು ಪ್ರಧಾನಿ ಮೋದಿ, ಬೆಂಗಳೂರಿನ ನಿಂಗಮ್ಮನವರ ಸ್ವಾವಲಂಬಿ ಬದುಕನ್ನು ಉದಾಹರಣೆಯಾಗಿ ನೀಡಿದ್ದಾರೆ.
ಯಾರಿದು ನಿಂಗಮ್ಮ?
ಟಿಎಸ್ ನಿಂಗಮ್ಮ ಎಂಬುವರು ಹಾಸನ ಮೂಲದವರು. ಸದ್ಯ ಬೆಂಗಳೂರಿನಲ್ಲೇ ನೆಲೆಸಿ, ಬೀದಿಬದಿ ವ್ಯಾಪಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವ ನಿಧಿ ಯೋಜನೆ ಉಪಯೋಗದೊಂದಿಗೆ ಮಾಗಡಿ ರಸ್ತೆಯ ಹೊಸಹಳ್ಳಿ ಮೇಟ್ರೋ ನಿಲ್ದಾಣ ಬಳಿ ಬೀದಿಬದಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಬರುವ ಲಾಭದಿಂದ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.