

ನವದೆಹಲಿ: ಪೂರ್ವ ದೆಹಲಿಯಲ್ಲಿ 36 ವರ್ಷದ ಉದ್ಯಮಿಯೊಬ್ಬರನ್ನು ಹೆಲ್ಮೆಟ್ ಧರಿಸಿ ಬಂದ ಮೂವರು ಡೆಲಿವರಿ ಹುಡುಗರು ಹತ್ಯೆ ಮಾಡಿರುವ ಘಟನೆ ನಡೆದಿದೆ. ಜನವರಿ 2 ಮತ್ತು ಜನವರಿ 3 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಜನವರಿ 4 ರಂದು ಎಫ್ಐಆರ್ ದಾಖಲಿಸಿದ್ದಾರೆ.
ಮೃತರನ್ನು ಲಕ್ಷ್ಮಿ ನಗರದ ನಿವಾಸಿ ಶಿವಂ ಗುಪ್ತಾ ಎಂದು ಗುರುತಿಸಲಾಗಿದ್ದು, ಜನವರಿ 2 ರಂದು ಸ್ನೇಹಿತನೊಂದಿಗೆ ಕನ್ನಾಟ್ ಪ್ಲೇಸ್ಗೆ ಹೋಗಿದ್ದರು. ನಂತರ ವಾಪಾಸ್ ಬಂದ ಮೇಲೆ ಇ-ಬ್ಲಾಕ್ ಬಳಿ ಅವರ ಮತ್ತು ಕೆಲವು ಡೆಲಿವರಿ ಹುಡುಗರ ನಡುವೆ ಜಗಳ ನಡೆದಂತೆ ತೋರುತ್ತಿದೆ. ಈ ಸಮಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಜನವರಿ 3 ರಂದು ನಸುಕಿನ ಜಾವ 1.30 ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ರಸ್ತೆಯಲ್ಲಿ ರಕ್ತಸ್ರಾವವಾಗಿ ಬಿದ್ದಿರುವ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಎಫ್ಐಆರ್ ಪ್ರಕಾರ, ಬೈಕ್ ನಲ್ಲಿ ಬಂದ ಮೂವರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬಂದಿದ್ದು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಕರೆ ಮಾಡಿದವರು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಘಟನೆಯಲ್ಲಿ ಮೂವರು ಭಾಗಿಯಾಗಿರುವುದು ಕಂಡುಬಂದಿದೆ.
ತೀವ್ರ ಗಾಯಗೊಂಡಿದ್ದ ಶಿವಂ ಅವರನ್ನು ಸುಚೇತಾ ಕೃಪ್ಲಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಹರ್ಗಂಜ್ನಲ್ಲಿ ಎರಡು ಅಂಗಡಿಗಳನ್ನು ಹೊಂದಿರುವ ಅವರ ತಂದೆ ಅನಿಲ್ ಕಾಂತ್ ಗುಪ್ತಾ, ಶಿವಂನನ್ನು ಜನವರಿ 4 ರಂದು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನವರಿ 19ರಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement