'ನೀನು Indian-Bollywood...ನಾವು ಕೊರಿಯನ್ನರು; ಕಿರಿಯ ತಂಗಿಯನ್ನೇ ದ್ವೇಷಿಸುತ್ತಿದ್ದ ಮೂವರು ಸೋದರಿಯರು, ಡೈರಿಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ..!

ನಮ್ಮ ಜೀವನವಾಗಿದ್ದ ಕೊರಿಯನ್ ಗೀಳನ್ನು ಬಿಡಿಸಲು ನೀವು ಯಾರು? ಈಗ ನೋಡಿ ಸಾಕ್ಷಿ ಸಿಕ್ಕಿದೆ. ಕೊರಿಯನ್ ಮತ್ತು ಕೆ-ಪಾಪ್ ನಮ್ಮ ಜೀವನ ಎಂದು ಮನವರಿಕೆಯಾಗಿದೆ. ನಾವು ನಿಮ್ಮನ್ನು ಮತ್ತು ಕುಟುಂಬವನ್ನು ಕೊರಿಯನ್ ನಟ ಮತ್ತು ಕೆ-ಪಾಪ್ ಗುಂಪನ್ನು ಪ್ರೀತಿಸಿದಷ್ಟು ಪ್ರೀತಿಸಲಿಲ್ಲ.
Sisters
ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು
Updated on

ಗಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ಮೂವರು ಸಹೋದರಿಯರ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಅವರ ಬಳಿ ದೊರೆತಿರುವ ಡೈರಿಯಲ್ಲಿ ಅವರಲ್ಲಿ ಬೆಳೆದಿದ್ದ ಕೊರಿಯನ್ ಸಂಸ್ಕೃತಿಯ ಗೀಳು ಎಷ್ಟರ ಮಟ್ಟಿಗಿತ್ತು ಎಂಬುದನ್ನು ಬಹಿರಂಗಪಡಿಸಿದೆ.

12 ವರ್ಷದ ಪಾಖಿ, 14 ವರ್ಷದ ಪ್ರಾಚಿ ಮತ್ತು 16 ವರ್ಷದ ನಿಶಿಕಾ ಎಂಬ ಮೂವರು ಸಹೋದರಿಯರು ಬುಧವಾರ ಮುಂಜಾನೆ ‘ಭಾರತ್ ಸಿಟಿ’ ವಸತಿ ಸಮುಚ್ಚಯದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಮೂವರು ಸಹೋದರಿಯರು ಕೊರಿಯನ್ ಹೆಸರುಗಳಾದ ಮಾರಿಯಾ, ಅಲಿಜಾ ಮತ್ತು ಸಿಂಡಿ ಬಳಸಿಕೊಂಡು ಸಾಮಾಜಿಕ ಮಾಧ್ಯಮ ಖಾತೆಯನ್ನು ಸಹ ರಚಿಸಿದ್ದರು, ಇದು ಗಮನಾರ್ಹ ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿತ್ತು. ಸುಮಾರು 10 ದಿನಗಳ ಹಿಂದೆ, ಅವರ ತಂದೆ ಖಾತೆಯ ಬಗ್ಗೆ ತಿಳಿದುಕೊಂಡು ಅದನ್ನು ಡಿಲೀಟ್ ಮಾಡಿಸಿದ್ದರು. ಅವರ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡರು. ಇದರಿಂದ ನೊಂದ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದರು.

ಈ ನಡುವೆ ಪ್ರಕರಣದ ತನಿಖೆ ಕೈಗೊಂಡಿರುವ ಪೋಲೀಸರು ಬಾಲಕಿಯರ ಬಳಿಯಿದ್ದ ಡೈರಿಯನ್ನು ವಶಕ್ಕೆ ಪಡೆದಿದ್ದು, ಡೈರಿಯಲ್ಲಿ ಹಲವು ಸತ್ಯಗಳು ಬಹಿರಂಗೊಂಡಿವೆ.

ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ, ಏಕೆಂದರೆ ಇವೆಲ್ಲವೂ ನಿಜ. ಈಗ ಓದಿ. ನಮ್ಮನ್ನು ಕ್ಷಮಿಸಿ. ಕ್ಷಮಿಸಿ, ಅಪ್ಪಾ. ಎಂದು ಬರೆದಿದ್ದಾರೆ.

ಎಂಟು ಪುಟಗಳ ಟಿಪ್ಪಣಿಯನ್ನು ಪಾಕೆಟ್ ಡೈರಿಯ ಪುಟಗಳಲ್ಲಿ ಬರೆಯಲಾಗಿದ್ದು, ಅವರ ಗೇಮಿಂಗ್ ಮತ್ತು ಮೊಬೈಲ್ ಚಟುವಟಿಕೆಗಳನ್ನು ವಿವರಿಸಲಾಗಿದೆ.

Sisters
ಕೊರಿಯಾ ನಮ್ಮ ಜೀವನ, ಕೊರಿಯಾ ನಮ್ಮ ಆತ್ಮ: ಕೊರಿಯನ್ ಹೆಸರುಗಳೊಂದಿಗೆ Insta ಖಾತೆ ಹೊಂದಿದ್ದ ಹುಡುಗಿಯರಿಗಿದ್ದರು ಹೆಚ್ಚಿನ ಫಾಲೋವರ್ಸ್!

ನಾವು ಕೊರಿಯಾವನ್ನು ಪ್ರೀತಿಸುತ್ತೇವೆ, ಲವ್ ಲವ್ ಲವ್” ಎಂದು ಡೈರಿಯ ಉದ್ದಕ್ಕೂ ಬರೆಯಲಾಗಿದೆ. ತಮ್ಮನ್ನು ಕೊರಿಯನ್ ಸಂಸ್ಕೃತಿಯಿಂದ ದೂರ ಮಾಡಲು ಪ್ರಯತ್ನಿಸಿದ್ದಕ್ಕೆ ಪೋಷಕರ ಮೇಲೆ ಸಿಟ್ಟು ವ್ಯಕ್ತಪಡಿಸಿರುವ ಬಾಲಕಿಯರು, “ನಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ನಾವು ಕೊರಿಯನ್ ನಟರನ್ನು ಮತ್ತು ಕೆ-ಪಾಪ್ (K-Pop) ತಂಡವನ್ನು ಪ್ರೀತಿಸುತ್ತೇವೆ” ಎಂದು ಬರೆದಿದ್ದಾರೆ.

ನಮ್ಮ ಜೀವನವಾಗಿದ್ದ ಕೊರಿಯನ್ ಗೀಳನ್ನು ಬಿಡಿಸಲು ನೀವು ಯಾರು? ಈಗ ನೋಡಿ ಸಾಕ್ಷಿ ಸಿಕ್ಕಿದೆ. ಕೊರಿಯನ್ ಮತ್ತು ಕೆ-ಪಾಪ್ ನಮ್ಮ ಜೀವನ ಎಂದು ಮನವರಿಕೆಯಾಗಿದೆ. ನಾವು ನಿಮ್ಮನ್ನು ಮತ್ತು ಕುಟುಂಬವನ್ನು ಕೊರಿಯನ್ ನಟ ಮತ್ತು ಕೆ-ಪಾಪ್ ಗುಂಪನ್ನು ಪ್ರೀತಿಸಿದಷ್ಟು ಪ್ರೀತಿಸಲಿಲ್ಲ. ಕೊರಿಯನ್ ನಮ್ಮ ಜೀವನವಾಗಿತ್ತು. ನಾವು ಕೊರಿಯನ್ನರನ್ನು ಇಷ್ಟಪಟ್ಟೆವು ಮತ್ತು ಪ್ರೀತಿಸುತ್ತಿದ್ದೆವು, ಆದರೆ, ನೀವು ನಮ್ಮನ್ನು ಭಾರತೀಯರನ್ನು ಮದುವೆಯಾಗುವಂತೆ ಮಾಡಲು ಬಯಸಿದ್ದೀರಿ.ಭವಿಷ್ಯದಲ್ಲಿ ಭಾರತೀಯರನ್ನು ಮದುವೆಯಾಗುವ ಆಲೋಚನೆಯೇ ನಮಗೆ ಇಷ್ಟವಿರಲಿಲ್ಲ ಎಂದು ಬರೆದಿದ್ದಾರೆ.

ಇದಲ್ಲದೆ, ತಮ್ಮ ಕಿರಿಯ ಸಹೋದರಿ ದೇವೂಳನ್ನೂ ದ್ವೇಷಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ‘ದೇವೂ’ಳನ್ನು ಕೂಡ ನಮ್ಮಂತೆಯೇ ಬದಲಾಯಿಸಲು ನಾವು ಪ್ರಯತ್ನಿಸಿದೆವು. ಆದರೆ ಪೋಷಕರು ಅದಕ್ಕೆ ಅಡ್ಡಿಪಡಿಸಿ ಆಕೆಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಿದ್ದರು.

ನಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಬದಲು ಆಕೆಗೆ ಓದಿಸುವಂತೆ ನಮಗೆ ಹೇಳಿದ್ದಕ್ಕೆ ಬೇಸರವಾಯಿತು. ಅಂದಿನಿಂದ ನಾವು ದೇವೂಳನ್ನು ಶತ್ರುವಿನಂತೆ ನೋಡಿದೆವು. ನಾವೆಲ್ಲಾ ‘ಕೊರಿಯನ್ ಮತ್ತು ಕೆ-ಪಾಪ್’, ನೀನು ‘ಇಂಡಿಯನ್ ಮತ್ತು ಬಾಲಿವುಡ್’ ಎಂದು ಆಕೆಯನ್ನು ದೂರ ಮಾಡಿದೆವು ಎಂದು ಬರೆದಿದ್ದಾರೆ.

ಈ ಬಾಲಕಿಯರು ಕೇವಲ ಕೊರಿಯನ್ ಮಾತ್ರವಲ್ಲದೆ ಥಾಯ್, ಚೀನೀ ಮತ್ತು ಜಪಾನಿ ಸಂಗೀತ ಹಾಗೂ ಚಿತ್ರಗಳಿಗೂ ಮಾರುಹೋಗಿದ್ದು, ಅವರ ಡೈರಿಯಲ್ಲಿ ‘ಪಾಪಿ ಪ್ಲೇಟೈಮ್’ (Poppy Playtime), ‘ದ ಬೇಬಿ ಇನ್ ಯೆಲ್ಲೋ’ (The Baby In Yellow), ‘ಇವಿಲ್ ಗೇಮ್’ ಮತ್ತು ‘ಐಸ್‌ಕ್ರೀಮ್ ಮ್ಯಾನ್ ಗೇಮ್’ ನಂತಹ ಅಪಾಯಕಾರಿ ಸರ್ವೈವಲ್ ಗೇಮ್‌ಗಳ ಬಗ್ಗೆ ಬರೆದಿರುವುದಾಗಿ ತಿಳಿದುಬಂದಿದೆ.

ಕೋವಿಡ್ ಸಾಂಕ್ರಾಮಿಕ ರೋಗ ಸಮಯದಲ್ಲಿ ಇವರು ‘ವಿ ಆರ್ ನಾಟ್ ಇಂಡಿಯನ್ಸ್’ (We are not Indians) ಎಂಬ ಕೊರಿಯನ್ ಲವ್ ಗೇಮ್‌ಗೆ ದಾಸರಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಈ ಗೇಮ್‌ನಲ್ಲಿ ನೀಡಲಾಗುವ ಟಾಸ್ಕ್‌ಗಳೇ ಅವರನ್ನು ಸಾವಿನ ಅಂಚಿಗೆ ತಳ್ಳಿರಬಹುದು ಎಂದು ಶಂಕಿಸಲಾಗಿದೆ.

Sisters
ಹುಡುಗರು ಒಪ್ತಿಲ್ಲ.. ಮದುವೆ ವಿಳಂಬ, ತಾಯಿ ಅನಾರೋಗ್ಯ: ಹುಸೇನ್ ಸಾಗರ್ ಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ!
UP police
ಉತ್ತರಪ್ರದೇಶ ಪೊಲೀಸ್

ಕೊರಿಯನ್ ಗೇಮ್ ಆ್ಯಪ್ ಕಾರಣವೆನ್ನಲು ಪುರಾವೆಯಿಲ್ಲ

ಏತನ್ಮಧ್ಯೆ ಕೊರಿಯನ್ ಗೇಮ್ ಆ್ಯಪ್ ನಿಂದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದಕ್ಕೆ ಯಾವುದೇ ಸಾಕ್ಷಿಗಳು ಪತ್ತೆಯಾಗಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು, ಹುಡುಗಿಯರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ. ಸಾಲದ ಹೊರೆ ಇದಕ್ಕೆ ಕಾರಣ ಇರಬಹುದು ಎಂದು ತಿಳಿಸಿದ್ದಾರೆ.

ಸೊಸೈಟಿಯ ನಿವಾಸಿಗಳ ಸಂಘದ ಒಬ್ಬ ಪದಾಧಿಕಾರಿ (ಹೆಸರು ಬದಲಿಸಲಾಗಿದೆ) ಮಾತನಾಡಿ, ಸಹೋದರಿಯರ ತಂದೆ ಚೇತನ ಕುಮಾರ್ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ್ದರಿಂದ ಕುಟುಂಬ ಆರ್ಥಿಕ ಒತ್ತಡದಲ್ಲಿತ್ತು ಎಂದು ತಿಳಿಸಿದ್ದಾರೆ.

ಚೇತನ್ ಅವರು ಸುಮಾರು ರೂ.2 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದು, ಒಂದು ಹಂತದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಮೊಬೈಲ್ ಫೋನ್ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದರು. ಈ ಆರ್ಥಿಕ ಸಂಕಷ್ಟವೇ ಮನೆಯೊಳಗಿನ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತೆಂದು ತಿಳಿದುಬಂದಿದೆ.

ಮೂವರು ಪುತ್ರಿಯರ ಸಾವಿನ ಬಳಿಕ ಚೇತನ ಕುಮಾರ್, ತಮ್ಮ ಮಕ್ಕಳು ಕಳೆದ ಎರಡು ವರ್ಷಗಳಿಂದ ಕೊರಿಯನ್ ಆಟವೊಂದರಲ್ಲಿ ತೊಡಗಿಸಿಕೊಂಡಿದ್ದು, ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ತಾಂತ್ರಿಕ ಪುರಾವೆಗಳು ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ, ಬುಧವಾರ ಸಂಜೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಮೂವರು ಸಹೋದರಿಯರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಸಂಸ್ಕಾರವನ್ನು ಅವರ ತಂದೆಯೇ ನೆರವೇರಿಸಿದರು. ಮರಣೋತ್ತರ ವರದಿಯಲ್ಲಿ ಮೂವರೂ ತಲೆಗೆ ಉಂಟಾದ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆಂದು ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com