

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್ ಈಗ ಮತ್ತೊಮ್ಮೆ ಅಂತಹುದೇ ಪ್ರಶ್ನೆ ಕೇಳಿ ದೇಶದ ಗಮನ ಸೆಳೆದಿದ್ದಾರೆ. ಹೌದು. ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸರ್ಕಾರಿ ಆಸ್ಪತ್ರೆ ದುಸ್ಥಿತಿ ಕುರಿತು ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರನ್ನು ಪ್ರಶ್ನಿಸಿದ್ದಾರೆ.
ಆಗ ಸಚಿವರ ಉತ್ತರದಿಂದ ತೃಪ್ತರಾಗದ ಅವರು ತೀಕ್ಷ್ಣವಾದ ಪ್ರಶ್ನೆಯನ್ನು ಹಾಕಿದರು.ಹೊಸ ಶಾಸಕರೊಬ್ಬರು ತಮ್ಮದೇ ಪಕ್ಷದ ಸಚಿವರನ್ನು ಸ್ಥಳದಲ್ಲೇ ಜಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಿಥಿಲಾಂಚಲ್ನ ಪ್ರಸಿದ್ಧ ಜಾನಪದ ಗಾಯಕಿಯೂ ಆಗಿರುವ ಮೈಥಿಲಿ ಠಾಕೂರ್ ಕಳೆದ ನವೆಂಬರ್ ನಲ್ಲಿ ಅಲಿನಗರದಿಂದ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಮೈಥಿಲಿ ಠಾಕೂರ್, ತಮ್ಮ ಕ್ಷೇತ್ರದ ಆಸ್ಪತ್ರೆ ಕಟ್ಟಡದ ಸ್ಥಿತಿಗತಿಯನ್ನು ಪ್ರಸ್ತಾಪಿಸಿದ್ದಾರೆ. ಸೀಲಿಂಗ್ನಿಂದ ಪ್ಲಾಸ್ಟರ್ ಬೀಳುತ್ತಲೇ ಇರುತ್ತದೆ, ಗೋಡೆಗಳಲ್ಲಿ ಬಿರುಕುಗಳು ಉಂಟಾಗಿದ್ದು, ಮಳೆಗಾಲದಲ್ಲಿ ವಾರ್ಡ್ಗಳಿಗೆ ನೀರು ಸೋರಿಕೆಯಾಗುತ್ತದೆ. ಹೀಗಿದ್ದರೂ ಕಟ್ಟಡದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗರ್ಭಿಣಿಯರನ್ನು ದಾಖಲಿಸಿ, ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಇದರಿಂದ ಜನರ ಜೀವಕ್ಕೆ ನೇರ ಅಪಾಯವಾಗಿದೆ ಎಂದಿದ್ದಾರೆ.
ಸಚಿವರ ಉತ್ತರಿಂದ ನನಗೆ ಸಂಪೂರ್ಣ ತೃಪ್ತಿ ಇಲ್ಲ. ಏಕೆಂದರೆ ಕಟ್ಟಡ ಕೆಟ್ಟ ಸ್ಥಿತಿಯಲ್ಲಿಲ್ಲ. ಕಟ್ಟಡ ರಿಪೇರಿ ಮಾಡಬೇಕಷ್ಟೆ ಎಂದಿದ್ದಾರೆ. ಅಲ್ಲದೇ, ಸಚಿವರು ಮತ್ತೊಮ್ಮೆ ವಿವರಣೆ ನೀಡಬೇಕು. ಏಕೆಂದರೆ ಕಟ್ಟಡ ದುಸ್ಥಿತಿಯಲ್ಲಿರುವುದನ್ನು ನಾನೇ ನೋಡಿದ್ದೇನೆ. ಚಿಕ್ಕದಾದ ಕೊಠಡಿಯಲ್ಲಿ ಆರೋಗ್ಯ ವ್ಯವಸ್ಥೆ ನಡೆಯುತ್ತಿದೆ. ಎಂಬಿಬಿಎಸ್ ವೈದ್ಯರಿಲ್ಲ. ಹಿಂದೆ ಇಬ್ಬರು ಎಂಬಿಬಿಎಸ್ ವೈದ್ಯರಿದ್ದರು. ಆದರೆ ಈಗ ಅಲ್ಲ, ಸರ್ಕಾರ ಪ್ರತಿ ವರ್ಷ ಆರೋಗ್ಯ ಬಜೆಟ್ ಹೆಚ್ಚಿಸುತ್ತಿರುವಾಗ ಆಸ್ಪತ್ರೆ ಕಟ್ಟಡಗಳು ಏಕೆ ಇಂತಹ ಸ್ಥಿತಿಯಲ್ಲಿವೆ ಎಂದು ಠಾಕೂರ್ ಪ್ರಶ್ನಿಸಿದ್ದಾರೆ. ಶಿಥಿಲಗೊಂಡ ಕಟ್ಟಡ ಯಾವುದೇ ಕ್ಷಣದಲ್ಲಿ ಬೀಳಬಹುದು, ಏನಾದರೂ ದೊಡ್ಡ ಅನಾಹುತ ಆಗಲಿ ಎಂದು ಸರ್ಕಾರ ಕಾಯುತ್ತಿದೆಯೇ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಆಸ್ಪತ್ರೆ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿದೆ. ಹಲವು ಆಸ್ಪತ್ರೆಗಳಿಗೆ ಹೊಸ ಕಟ್ಟಡಗಳನ್ನು ಅನುಮೋದಿಸಲಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ನಿರ್ಮಾಣ ಪ್ರಗತಿಯಲ್ಲಿದೆ. ಅತ್ಯಂತ ಶಿಥಿಲಗೊಂಡ ಕಟ್ಟಡಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ದುರಸ್ತಿ ಅಥವಾ ನವೀಕರಿಸಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ತೃಪ್ತರಾಗದ ಮೈಥಿಲಿ ಪದೇ ಪದೇ ಪ್ರಶ್ನೆ ಕೇಳುತ್ತಲೆ ಇದ್ದರು. ಇದರಿಂದ ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ವಿಪಕ್ಷಗಳು ಕೂಡಾ ಮೇಜು ತಟ್ಟಿ ಠಾಕೂರ್ ಅವರನ್ನು ಪ್ರಶಂಸಿದ್ದಾರೆ. ಕೊನೆಗೆ ಚರ್ಚೆ ಮುಂದುವರಿಯಲು ಸ್ಪೀಕರ್ ಮಧ್ಯಸ್ಥಿಕೆ ವಹಿಸಬೇಕಾಯಿತು. ಚರ್ಚೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅತ್ಯಂತ ಗಂಭೀರವಾದ ಮತ್ತು ತಳಮಟ್ಟದ ಸಮಸ್ಯೆಯನ್ನು ಅವರು ಬಲವಾಗಿ ಎತ್ತಿದ್ದಾರೆ ಎಂದು ಜನರು ಶಾಸಕರನ್ನು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement