

ಗುವಾಹಟಿ: ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿತ್ತು. ಅಲ್ಲದೇ ಅಸ್ಸಾಂನಲ್ಲಿ ದಂಗೆಗೆ ಪ್ರಚೋದನೆ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ನಡೆದ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಭಯ ಮತ್ತು ಅಭದ್ರತೆಯ ಜೊತೆಗೆ ಯಾವಾಗಲೂ ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟುಮಾಡಿತ್ತು ಎಂದು ಆರೋಪಿಸಿದರು.
ಕಾಂಗ್ರೆಸ್ ಧ್ರುವೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದು, ಇವುಗಳನ್ನು ಉತ್ತೇಜಿಸುವ ನಿರ್ಧಾರಗಳನ್ನು ತೆಗೆದುಕೊಂಡಿತು ಎಂದು ಹೇಳಿದರು.
ಮುಸ್ಲಿಂ ಲೀಗ್ ನಿಂದ ದೇಶ ವಿಭಜನೆಯಾಯಿತು ಆದರೆ ಈಗ MMC ಇದೆ. ಮಾವೋವಾದಿ, ಮುಸ್ಲಿಂ, ಕಾಂಗ್ರೆಸ್ ದೇಶ ವಿಭಜನೆಗೆ ಒಗ್ಗಟ್ಟಾಗಿದ್ದು, ಇದರ ಬಗ್ಗೆ ಜನರು ಅರಿತುಕೊಳ್ಳಬೇಕು. ಒಳನುಸುಳುಕೋರರನ್ನು ಕಾಂಗ್ರೆಸ್ ರಕ್ಷಿಸುತ್ತಿದೆ. ಆದರೆ ಅಕ್ರಮವಾಗಿ ಒಳನುಸುಳುವವರನ್ನು ನಾಶಪಡಿಸಲು ಬಿಜೆಪಿ ಬದ್ದವಾಗಿದೆ. ಹೀಗಾಗಿ ರಾಜ್ಯಕ್ಕೆ ಮುಂದಿನ ಐದು ವರ್ಷಗಳು ಮಹತ್ವದ್ದಾಗಿದೆ ಎಂದರು.
ಅಸ್ಸಾಂನಲ್ಲಿ 10 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಅದರ ನಾಯಕರ ವಿಷಕಾರಿ ಹೇಳಿಕೆಗಳಿಂದ ಇದು ಸ್ಪಷ್ಟವಾಗಿದೆ ಎಂದು ಹೇಳಿದರು.
ಏಳು ದಶಕಗಳಿಂದ ಕಾಂಗ್ರೆಸ್ ಬ್ರಹ್ಮಪುತ್ರ ನದಿಗೆ ಕೇವಲ ಮೂರು ಸೇತುವೆಗಳನ್ನು ನಿರ್ಮಿಸಿದೆ. ಆದರೆ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಐದು ಸೇತುವೆಗಳನ್ನು ನಿರ್ಮಿಸಿದೆ. ಬಿಜೆಪಿ ಸರ್ಕಾರದ ಪ್ರಯತ್ನದಿಂದಾಗಿ ಅಸ್ಸಾಂನಲ್ಲಿ ಸರ್ವತೋಮುಖ ಅಭಿವೃದ್ಧಿಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
Advertisement