

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ತನಿಖೆಯ ಮುಖ್ಯ ಉದ್ದೇಶ, ಇದು ವಿಧ್ವಂಸಕ ಕೃತ್ಯವೋ ಅಥವಾ ಕ್ರಿಮಿನಲ್ ನಿರ್ಲಕ್ಷ್ಯವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ ಗುರುವಾರ ತಿಳಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಡಿಜಿ(ಸಿಐಡಿ) ಸುನಿಲ್ ರಮಾನಂದ ಅವರು, ಪ್ರಕರಣದ ತನಿಖೆಯನ್ನು ವಿವರವಾದ ಮತ್ತು ವೃತ್ತಿಪರ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
"ವಿಮಾನ ಅಪಘಾತದಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂದು ನಿರ್ಧರಿಸುವುದು ಸಿಐಡಿ ತನಿಖೆಯ ಉದ್ದೇಶವಾಗಿದೆ. ಯಾವುದೇ ಕ್ರಿಮಿನಲ್ ನಿರ್ಲಕ್ಷ್ಯವಿದೆಯೇ ಎಂದು ಸಹ ತನಿಖೆಯಿಂದ ತಿಳಿದುಬರಲಿದೆ. ಮೂರನೆಯದಾಗಿ, ಯಾವುದೇ ವಿಧ್ವಂಸಕ, ಕ್ರಿಮಿನಲ್ ಕೃತ್ಯವು ಅಪಘಾತಕ್ಕೆ ಕಾರಣವಾಗಿದೆಯೇ ಎಂದು ತನಿಖೆ ಖಚಿತಪಡಿಸುತ್ತದೆ" ಎಂದು ರಮಾನಂದ ಹೇಳಿದ್ದಾರೆ.
"ನಾವು ಹಲವಾರು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ತನಿಖೆಯಲ್ಲಿ ನಿರ್ಲಕ್ಷ್ಯ ಅಥವಾ ವಿಧ್ವಂಸಕ ಕೃತ್ಯ ಸೇರಿದಂತೆ ಯಾವುದೇ ಕ್ರಿಮಿನಲ್ ದೃಷ್ಟಿಕೋನ ಇದ್ದರೆ, ಸಿಐಡಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸುತ್ತದೆ ಎಂದು ಅವರು ಹೇಳಿದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಸಿಬಿಐ ತನಿಖೆಯನ್ನು ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.
ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಲಿಯರ್ಜೆಟ್ 45 ವಿಮಾನ(ವಿಟಿ-ಎಸ್ಎಸ್ಕೆ) ಕಳೆದ ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ವಾಯುನೆಲೆಯ ಬಳಿ ಪತನವಾಗಿತ್ತು.
Advertisement