ಯೂಟ್ಯೂಬ್ ನೋಡಿ ಗರ್ಭಿಣಿಗೆ ಆಪರೇಷನ್ ಮಾಡಿದ ನಕಲಿ ವೈದ್ಯ: ಮಗು ಬಚಾವ್, ತಾಯಿ ಸಾವು

ನಕಲಿ ವೈದ್ಯನ ಹುಚ್ಚಾಟಕ್ಕೆ ಮಹಿಳೆ ಮೃತಪಟ್ಟಿದ್ದು, ಮಗು ಬಚಾವಾಗಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಇಂದಿನ ಡಿಜಿಟಲ್ ಜಮಾನಾದಲ್ಲಿ ಯೂಟ್ಯೂಬ್ ನೋಡಿ ಅಡುಗೆ ಮಾಡುವುದರಿಂದ ಹಿಡಿದು ಅನೇಕ ಕೆಲಸಗಳನ್ನು ಜನರು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಎಲ್ಲರೂ ಹುಬ್ಬೇರಿಸುವಂತೆ ಮತ್ತು ಹಿಡಿಶಾಪ ಹಾಕುವಂತೆ ಹೊಟ್ಟೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ನಕಲಿ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಆಪರೇಷನ್ ಮಾಡಿ ಎಡವಟ್ಟು ಮಾಡಿದ ಘಟನೆ ನಡೆದಿದೆ.

ನಕಲಿ ವೈದ್ಯನ ಹುಚ್ಚಾಟಕ್ಕೆ ಮಹಿಳೆ ಮೃತಪಟ್ಟಿದ್ದು, ಮಗು ಬಚಾವಾಗಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಕಲಿ ವೈದ್ಯ ಯೂಟ್ಯೂಬ್​​ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನು ನೋಡಿಕೊಂಡು ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಸಮಯದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ಹಾಗೂ ಊರಿನವರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಸ್ವಾಧೀನಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Representational image
ಕೊಚ್ಚಿ: ಏಕಾಏಕಿ ನೋವು ಕಾಣಿಸಿಕೊಂಡ ಗರ್ಭಿಣಿಗೆ ಕಾರಿನೊಳಗೆ ಹೆರಿಗೆ ಮಾಡಿಸಿದ ವೈದ್ಯರು!

ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಅವರ ಅತ್ತೆ-ಮಾವ ಜಾರ್ಖಂಡ್‌ನ ಠಾಕೂರ್ಗಂಟಿ ಮೋಧಿಯಾದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ರೋಷನ್ ಸಹಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾದ ನಂತರ ಆ ಮಹಿಳೆ ರಸಲ್‌ಪುರದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿದ್ದರು. ಅಲ್ಲಿ ಅವರು ಶ್ರೀಮಠ ಸ್ಥಾನದ ಬಳಿಯ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

ಮೊನ್ನೆ ಏನಾಯಿತು?

ಗುರುವಾರ ರಾತ್ರಿ ಸ್ವಾತಿ ದೇವಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತು. ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ನಂತರ ವೈದ್ಯರು ತಮ್ಮ ಸಹಾಯಕರೊಂದಿಗೆ ಆಪರೇಷನ್ ಮಾಡಲು ಸಜ್ಜಾದರು. ಆ ಮಹಿಳೆಯ ಕುಟುಂಬದ ಒಪ್ಪಿಗೆಯನ್ನು ಪಡೆದ ನಂತರ ವೈದ್ಯರು ಹೆರಿಗೆಯ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಲು ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿದರು. ಬಳಿಕ ಆ ಮೊಬೈಲನ್ನು ಆಪರೇಷನ್ ಮಾಡುವ ಜಾಗದಲ್ಲಿಟ್ಟುಕೊಂಡೇ ಅಗತ್ಯ ವೈದ್ಯಕೀಯ ಸಹಾಯವಿಲ್ಲದೆಯೇ ಆಪರೇಷನ್ ಮಾಡಿದ್ದಾರೆ.

Representational image
ಇತ್ತ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರೆ ಅತ್ತ ಪಾರ್ಟಿ ಮಾಡುತ್ತಿದ್ದ ವೈದ್ಯರು: ಮಗು ಗರ್ಭದಲ್ಲಿಯೇ ಸಾವು!

ಈ ವೇಳೆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾದಾಗ, ಉತ್ತಮ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಕರೆದೊಯ್ಯಲು ಸಲಹೆ ನೀಡಿದರು, ಕೂಡಲೇ ಆಸ್ಪತ್ರೆ ಮುಚ್ಚಿ ವೈದ್ಯರು ಪರಾರಿಯಾಗಿದ್ದರು. ಮೃತಳ ತಾಯಿ ಸುಷ್ಮಾ ದೇವಿ, ವೈದ್ಯರು ಸಾಮಾನ್ಯ ಹೆರಿಗೆಯ ಬದಲು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಒತ್ತಾಯಿಸಿ ಶುಲ್ಕವಾಗಿ 30,000 ರೂಪಾಯಿ ಕೇಳಿದರು. ಶಸ್ತ್ರಚಿಕಿತ್ಸೆಯ ನಂತರ ಮಗಳು ಮೃತಪಟ್ಟಳು ಎಂದು ನೋವು ತೋಡಿಕೊಂಡರು.

ಈ ಅಕ್ರಮ ಆಸ್ಪತ್ರೆಯನ್ನು ರಸೂಲ್ಪುರದ ರಂಜಿತ್ ಮಂಡಲ್ ಅವರ ಮಗ ಅಮರ್ ಕುಮಾರ್ ದೀರ್ಘಕಾಲದವರೆಗೆ ಅಮೋದ್ ಶಾ ಅವರ ಮನೆಯಲ್ಲಿ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಅಮರ್ ಕುಮಾರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆಸ್ಪತ್ರೆ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ನರ್ಸ್ ಮತ್ತು ಕಾಂಪೌಂಡರ್ ನೇಮಿಸಿಕೊಂಡಿದ್ದಾರೆ.

ಪ್ರಸ್ತುತ, ಪೊಲೀಸರು ಅಕ್ರಮ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ಕುಟುಂಬವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಸ್ಟೇಷನ್ ಹೌಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ. ಉಪ-ವಿಭಾಗೀಯ ಆಸ್ಪತ್ರೆಯ ಉಸ್ತುವಾರಿ ಉಪ ಸೂಪರಿಂಟೆಂಡೆಂಟ್ ಡಾ. ಪವನ್ ಕುಮಾರ್ ಗುಪ್ತಾ, ಮಹಿಳೆಯ ಸಾವು ವರದಿಯಾಗಿದೆ, ತನಿಖೆ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com