

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಣಿವೆಯಲ್ಲಿರುವ ಇಮಾಮ್ಗಳು, ಮುಝಿನ್, ಧಾರ್ಮಿಕ ಸಂಸ್ಥೆಯ ಆಡಳಿತ ಸಮಿತಿಗಳ ವೈಯಕ್ತಿಕ ವಿವರಗಳು ಸೇರಿದಂತೆ ಮಸೀದಿಗಳು ಮತ್ತು ಮದರಸಾಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಕಸರತ್ತು ಆರಂಭಿಸಿದ್ದಾರೆ.
ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಹಣಕಾಸಿನ ಬಗ್ಗೆ ವಿವರವಾದ ಮಾಹಿತಿ ಅಲ್ಲದೇ, ಮಸೀದಿಗಳಿಗೆ ಸಂಬಂಧಿಸಿದವರಿಂದ ಮೊಬೈಲ್ ಪೋನ್ ಮಾಡೆಲ್, ಅದರ IMEI ಸಂಖ್ಯೆ ಮತದಾರರ ಗುರುತಿನ ಸಂಖ್ಯೆಗಳು ಮತ್ತು ಅವರ ಸಾಮಾಜಿಕ ಮಾಧ್ಯಮ, ಎಟಿಎಂ ಕಾರ್ಡ್ಗಳು, ರೇಷನ್ ಕಾರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ವಿವರಗಳು ಸೇರಿದಂತೆ ವೈಯಕ್ತಿಕ ವಿವರಗಳನ್ನು ಪೊಲೀಸರು ಪಡೆಯುತ್ತಿದ್ದಾರೆ.
ಮಸೀದಿಗಳ ಮಾಹಿತಿಗಾಗಿ ಒಂದು ಪುಟ ಮತ್ತು ಅವರ ಸದಸ್ಯರ ವೈಯಕ್ತಿಕ ವಿವರಗಳಿಗೆ ಮೂರು ಪುಟಗಳನ್ನು ಮೀಸಲಾಗಿರುವ ನಾಲ್ಕು ಪುಟಗಳ ಫಾರ್ಮ್ ಅನ್ನು ಕಾಶ್ಮೀರದಾದ್ಯಂತ ವಿತರಿಸಲಾಗುತ್ತಿದೆ. ಮಾಹಿತಿ ಸಂಗ್ರಹಿಸಲು ಗ್ರಾಮಮಟ್ಟದ ಕಂದಾಯ ಇಲಾಖೆ ನೌಕರರಿಗೆ ಫಾರ್ಮ್ ಗಳನ್ನು ನೀಡಲಾಗುತ್ತಿದೆ.
ಇದೇ ಮೊದಲ ಬಾರಿಗೆ ಪೊಲೀಸರು ಬರೇಲ್ವಿ, ಹನಫಿ, ದೇವಬಂದಿ ಅಥವಾ ಅಹ್ಲೆ-ಹದೀಸ್ ಸಿದ್ಧಾಂತಗಳನ್ನುಅನುಸರಿಸುತ್ತಾರೆಯೇ ಎಂಬುದೂ ಸೇರಿದಂತೆ ಮಸೀದಿಗಳೊಂದಿಗೆ ಸಂಬಂಧ ಹೊಂದಿದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಫಾರ್ಮ್ ನಲ್ಲಿ ಮಸೀದಿಯ ನಿರ್ಮಾಣ ವೆಚ್ಚ, ಹಣಕಾಸಿನ ವೆಚ್ಚ ಸೇರಿದಂತೆ ಎಲ್ಲಾ ವಿವರಗಳನ್ನು ಕೇಳಲಾಗುತ್ತಿದೆ.
ಮಸೀದಿಗಳ ಮಾಸಿಕ ಬಜೆಟ್, ಅವರ ಬ್ಯಾಂಕ್ ಖಾತೆ ವಿವರಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತದೆ, ಹಾಗೆಯೇ ಮಸೀದಿಗಳನ್ನು ನಿರ್ಮಿಸುವ ಭೂಮಿಯ ಸ್ವರೂಪ ಬಗ್ಗೆ ವಿವರ ಪಡೆಯಲಾಗುತ್ತಿದೆ.
ಮಸೀದಿಯ ಆಡಳಿತ ಮಂಡಳಿ ಸದಸ್ಯರು, ಇಮಾಮ್ (ಪ್ರಾರ್ಥನೆಯನ್ನು ನಡೆಸುವ ವ್ಯಕ್ತಿ), ಮುಝಿನ್ (ಪ್ರಾರ್ಥನೆಗೆ ಕರೆ ನೀಡುವ ವ್ಯಕ್ತಿ), ಖತೀಬ್ಗಳು (ಶುಕ್ರವಾರದ ಧರ್ಮೋಪದೇಶವನ್ನು ನೀಡುವವರು) ಮತ್ತು ಬೈತ್-ಉಲ್-ಮಾಲ್ (ಮಸೀದಿಯ ದತ್ತಿ ವಿಭಾಗ) ಸೇರಿದಂತೆ ಮಸೀದಿಗಳಿಗೆ ಸಂಬಂಧಿಸಿದವರ ಕುಟುಂಬ ಸದಸ್ಯರ ಬಗ್ಗೆಯೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಕಣಿವೆಯ ಪ್ರತಿಯೊಂದು ಮಸೀದಿಯು ಬೈತ್-ಉಲ್-ಮಾಲ್ ಅನ್ನು ಹೊಂದಿದ್ದು ಅದು ಸ್ಥಳೀಯರಿಂದ ದೇಣಿಗೆಯಿಂದ ನಡೆಸಲ್ಪಡುತ್ತದೆ. ಮಸೀದಿಯಲ್ಲಿ ಕೆಲಸ ಮಾಡುವವರಿಂದ ಮತದಾರ ಐಡಿ ಸಂಖ್ಯೆಗಳು, ಆಧಾರ್ ವಿವರಗಳು, ಪ್ಯಾನ್ ಕಾರ್ಡ್ಗಳು, ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಗಳು, ರೇಷನ್ ಕಾರ್ಡ್ಗಳು ಮತ್ತು ಎಟಿಎಂ ಅಥವಾ ಡೆಬಿಟ್ ಕಾರ್ಡ್ಗಳ ಮಾಹಿತಿಯೊಂದಿಗೆ ಜನ್ಮ ದಿನಾಂಕ, ಫೋನ್ ಸಂಖ್ಯೆಗಳು, ಇಮೇಲ್ ಐಡಿಗಳು ಮತ್ತು ಶೈಕ್ಷಣಿಕ ಅರ್ಹತೆಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳು ಸೇರಿದಂತೆ ಅವರ ಮೊಬೈಲ್ ಫೋನ್ಗಳ IMEI ಸಂಖ್ಯೆಗಳು, ಅವರ ಸೋಶಿಯಲ್ ಮೀಡಿಯಾ ವಿವರಗಳು ಮತ್ತು ಅವರ ಮೊಬೈಲ್ ಫೋನ್ಗಳಲ್ಲಿ ಬಳಸುವ ಆ್ಯಪ್ ಗಳನ್ನು ಪರಿಶೀಲಿಸಲಾಗುತ್ತಿದೆ.
ಮಸೀದಿಗೆ ಸಂಬಂಧಿಸಿದವರ ಕುಟುಂಬದೊಂದಿಗೆ ಅವರ ವಾಟ್ಸಾಪ್ ಸಂಖ್ಯೆ, ಇಮೇಲ್ ವಿಳಾಸಗಳು ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳನ್ನು ಒದಗಿಸುವಂತೆ ಕೇಳಲಾಗಿದೆ. TNIE ಯೊಂದಿಗೆ ಮಾತನಾಡಿದ ಶ್ರೀನಗರದ ಮಸೀದಿಯೊಂದರ ಇಮಾಮ್, ಪೊಲೀಸರು ಮಸೀದಿಯ ಮುಂದೆ ಅವರ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಹೆಚ್ಚಿನ ವಿವರವಾದ ಮಾಹಿತಿ ಕೇಳಲಾಗಿದೆ ಎಂದರು.
ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಮೇಲೆ ವ್ಯಾಪಕವಾದ ಕಣ್ಗಾವಲು ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುತಾಹಿದಾ ಮಜ್ಲಿಸ್-ಎ-ಉಲೇಮಾ (ಎಂಎಂಯು) ಪೊಲೀಸ್ ಕ್ರಮವು ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಪೊಲೀಸರ ಕ್ರಮ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಸಂವಿಧಾನದಡಿ ನೀಡಲಾಗಿರುವ ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಹಕ್ಕನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು MMU ವಕ್ತಾರರು ಹೇಳಿದರು.
ಈ ಮಧ್ಯೆ "ವೈಟ್ ಕಾಲರ್ ಟೆರರ್ ಮಾಡ್ಯೂಲ್" ಎಂದು ತನಿಖಾ ಸಂಸ್ಥೆಗಳು ವಿವರಿಸಿರುವ ಕಾಶ್ಮೀರಿ ನಿವಾಸಿಗಳನ್ನು ಬಂಧಿಸಿದ ನಂತರ ಪೊಲೀಸರು ಈ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. "ಕಳೆದ ವರ್ಷ ನವೆಂಬರ್ನಲ್ಲಿ ಭೇದಿಸಲಾದ 'ವೈಟ್ ಕಾಲರ್' ಭಯೋತ್ಪಾದಕ ಘಟಕದ ತನಿಖೆ ವೇಳೆ, ಕೆಲವು ಶಂಕಿತರನ್ನು ಮದರಸಾಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಮತಾಂಧರನ್ನಾಗಿ ಮಾಡಲಾಗಿದೆ ಎಂಬುದು ಬೆಳಕಿ ಬಂದಿದೆ. ಮೌಲ್ವಿ ಇರ್ಫಾನ್ನಂತಹ ಕೆಲವು ಇಮಾಮ್ಗಳ ಪಾತ್ರವೂ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಇದೀಗ ಸಮಗ್ರ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
Advertisement